ADVERTISEMENT

ಐ.ಟಿ-ಬಿ.ಟಿ ವಿಕೇಂದ್ರೀಕರಣ ಚಿಂತನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಮಂಗಳೂರು: `ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ(ಐಟಿ-ಬಿಟಿ) ಕ್ಷೇತ್ರಗಳ ವಿಕೇಂದ್ರೀಕರಣಕ್ಕಾಗಿ ರಾಜ್ಯದ ದ್ವಿತೀಯ ಹಾಗೂ ತೃತೀಯ ಶ್ರೇಣಿ ನಗರಗಳಲ್ಲಿ `ಐ.ಟಿ-ಬಿ.ಟಿ ಪಾರ್ಕ್' ಸ್ಥಾಪಿಸುವ ಚಿಂತನೆ ಇದೆ' ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.`ಪ್ರಸ್ತುತ ಐ.ಟಿ-ಬಿ.ಟಿ ಕ್ಷೇತ್ರಗಳ ಪ್ರಗತಿ ಬೆಂಗಳೂರಿಗೆ ಸೀಮಿತವಾಗಿದೆ. ಮಂಗಳೂರು, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ ಹಾಗೂ ಮೈಸೂರಿನಂತಹ ಮಹಾನಗರಗಳ್ಲ್ಲಲೂ ಈ ಉದ್ಯಮ ಕ್ಷೇತ್ರಗಳ ಅಭಿವೃದ್ಧಿ ಆಗಬೇಕಿದೆ. ಉದ್ದಿಮೆ ಸ್ಥಾಪನೆಗೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಅಗತ್ಯವಿದೆ.

ರಾಜ್ಯದ ಗ್ರಾಮೀಣ ಭಾಗದಲ್ಲೂ `ಬಿಪಿಒ' ಉದ್ದಿಮೆಯನ್ನು ಬಲಪಡಿಸುವ ಮೂಲಕ ನಗರದತ್ತ ಉದ್ಯೋಗಾಕಾಂಕ್ಷಿಗಳ ವಲಸೆ ತಡೆಯಬೇಕಿದೆ. ಈ ಬಗ್ಗೆ ಇದೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ' ಎಂದರು.

`ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 11 ಕಿ.ಮೀ. ದೂರದಲ್ಲಿ 10.5 ಸಾವಿರ ಎಕರೆ ಸ್ಥಳದಲ್ಲಿ ಐ.ಟಿ-ಬಿ.ಟಿ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಯೋಜನೆಗೆ 70 ಸಾವಿರ ಕೋಟಿ ರೂಪಾಯಿ ನೆರವು ನೀಡಲಿದೆ' ಎಂದು ಅವರು ತಿಳಿಸಿದರು.

`ಮಾಹಿತಿ ತಂತ್ರಜ್ಞಾನದ ನೆರವಿನಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳನ್ನು ಕಾಗದ ಬಳಕೆ ಇಲ್ಲದ ಇಲಾಖೆಗಳನ್ನಾಗಿ ಪರಿವರ್ತಿಸುವ ಚಿಂತನೆಯೂ ಇದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT