ನವದೆಹಲಿ (ಪಿಟಿಐ): ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು `ವಿಳಂಬ ನೀತಿ~ ಅನುಸರಿಸುತ್ತಿರುವವರಲ್ಲಿ ಶೇ 56ರಷ್ಟು ಜನರು 30 ವರ್ಷಕ್ಕಿಂತ ಕೆಳಗಿನವರು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
ವಿಶೇಷವೆಂದರೆ ಕೊನೆ ಕ್ಷಣದಲ್ಲಿ ರಿಟರ್ನ್ಸ್ ಸಲ್ಲಿಸಲು ಬರುವ ಶೇ 96ರಷ್ಟು ಜನರಿಗೆ ತಮ್ಮ ವೇತನ ಬಿಟ್ಟು ಇತರೆ ಮೂಲಗಳಿಂದ ದೊಡ್ಡ ಆದಾಯವೇನೂ ಇರುವುದಿಲ್ಲ. ಆದರೂ, ಇವರು `ನಿಧಾನ ಶೂರರು~ ಎಂದು ಆನ್ಲೈನ್ ತೆರಿಗೆ ಪಾವತಿ ತಾಣ `ಟ್ಯಾಕ್ಸ್ಸ್ಫಾನರ್~ ಬಿಡುಗಡೆ ಮಾಡಿರುವ `ಭಾರತೀಯ ತೆರಿಗೆ ಅನುಪಾತ-2012~ ವರದಿ ಹೇಳಿದೆ.
ಯುವ ಸಮೂಹಕ್ಕೆ ಹೋಲಿಸಿದರೆ ಶೇ 17ರಷ್ಟು ವಯಸ್ಕರು ಮಾತ್ರ ಕೊನೆ ಕ್ಷಣದಲ್ಲಿ ತೆರಿಗೆ ರಿಟರ್ನ್ ಸಲ್ಲಿಸುತ್ತಾರೆ. ರಿಟರ್ನ್ಸ್ ಸಲ್ಲಿಸುವ ಶಿಸ್ತಿನಲ್ಲಿ ಕಿರಿಯರಿಗಿಂತ ಹಿರಿಯರೇ ಮುಂದು ಎಂಬುದು ಇದರಿಂದಲೇ ಅರ್ಥವಾಗುತ್ತದೆ ಎಂದೂ ಈ ಅಧ್ಯಯನ ಹೇಳಿದೆ.
`ನಿಧಾನವೇ ಪ್ರಧಾನ~ ಎನ್ನುವ ಭಾರತೀಯರ ಧೋರಣೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವಿಚಾರದಲ್ಲೂ ಯಥಾರೀತಿ ಮುಂದುವರೆದಿದೆ. ಶೇ 50ರಷ್ಟು ಭಾರತೀಯರು ಜುಲೈ ಕೊನೆ ವಾರದಲ್ಲಿ ರಿಟರ್ನ್ಸ್ ಸಲ್ಲಿಸಲು ಮುಗಿ ಬೀಳುತ್ತಾರೆ. ಅದರಲ್ಲೂ ಶೇ 46ರಷ್ಟು ಉದ್ಯೋಗಿಗಳು (ವೇತನ ವರ್ಗ) ಗಡುವು ಕೊನೆಗೊಳ್ಳಲು ಇನ್ನೇನು ಎರಡು ದಿನವಷ್ಟೇ ಬಾಕಿ ಇದೆ ಎನ್ನುವಾಗ ತರಾತುರಿಯಲ್ಲಿ ರಿಟರ್ನ್ ಸಲ್ಲಿಸಲು ಮುಂದಾಗುತ್ತಾರೆ.
ಬೆಂಗಳೂರು ನಂ-1
ಕೊನೆ ಕ್ಷಣದಲ್ಲಿ ರಿಟರ್ನ್ಸ್ ಸಲ್ಲಿಸುವವರ ಪಟ್ಟಿಯಲ್ಲಿ `ಬೆಂಗಳೂರು ಮೊದಲ ಸ್ಥಾನ~ದಲ್ಲಿದೆ. ಇಲ್ಲಿ ಶೇ 39ರಷ್ಟು ಜನ ಜುಲೈ ಕೊನೆಯ ವಾರದಲ್ಲಿ ತಮ್ಮ ವಾರ್ಷಿಕ ಆದಾಯದ ಲೆಕ್ಕಾಚಾರ ಸಲ್ಲಿಸುತ್ತಾರೆ. ಶೇ 45ರಷ್ಟು ಮಂದಿ ಜುಲೈ 3ನೇ ವಾರದಲ್ಲಿ ರಿಟರ್ನ್ಸ್ ಸಲ್ಲಿಸುವ ಕುರಿತು ಎಚ್ಚೆತ್ತುಕೊಳ್ಳುತ್ತಾರೆ. ಹಾಗೆ ನೋಡಿದರೆ ಹೈದರಾಬಾದ್ ಮತ್ತು ಚೆನ್ನೈನ ಉದ್ಯೋಗಿಗಳು ರಿಟರ್ನ್ಸ್ ಸಲ್ಲಿಸುವ ವಿಚಾರದಲ್ಲಿ ಹೆಚ್ಚಿನ ಶಿಸ್ತು ಹೊಂದಿದ್ದಾರೆ. ಇಲ್ಲಿ ಕೊನೆಯ ದಿನಕ್ಕಾಗಿ ಕಾಯುವವರ ಸಂಖ್ಯೆ ಶೇ 9ಕ್ಕಿಂತ ಕಡಿಮೆ ಇದೆ ಎಂದು `ಟ್ಯಾಕ್ಸ್ ಸ್ಫಾನರ್~ ವರದಿ ಹೇಳಿದೆ.
ಮಹಿಳೆಯರೇ ಮುಂದು!
ಕುತೂಹಲದ ಸಂಗತಿ ಎಂದರೆ ರಿ ಟರ್ನ್ಸ್ ಸಲ್ಲಿಸುವ ವಿಚಾರದಲ್ಲಿ ಮಹಿಳೆಯರು ಮತ್ತು ಪುರುಷರಲ್ಲಿ ಭಾರಿ ವ್ಯತ್ಯಾಸ ಇದೆ. ವಾರ್ಷಿಕ ಸರಾಸರಿ ರೂ. 5 ಲಕ್ಷ ವರಮಾನ ಇರುವ ಮಹಿಳೆಯರು, ಸಹೋದ್ಯೋಗಿ ಪುರುಷರಿಗಿಂತಲೂ ಕಡಿಮೆ ತೆರಿಗೆ ಪಾವತಿಸುತ್ತಾರೆ. ಮಹಿಳೆಯರಿಗೆ ಕಡಿಮೆ ತೆರಿಗೆ ಸ್ಲ್ಯಾಬ್ ಇರುವುದು ಮತ್ತು `ಹೂಡಿಕೆ~ ವಿಚಾರದಲ್ಲಿ ಅವರು ಪುರುಷರಿಗಿಂತಲೂ ಜಾಣೆಯರಾಗಿರುವುದೇ ಮುಖ್ಯ ಕಾರಣ ಎಂದೂ ಈ ಅಧ್ಯಯನ ಬಹಿರಂಗಪಡಿಸಿದೆ.
ಚೆನ್ನೈ ವನಿತೆಗೆ ಪ್ರಶಂಸೆ
ಚೆನ್ನೈನಲ್ಲಿರುವ ಮಹಿಳಾ ಉದ್ಯೋಗಿಗಳು ದೇಶದಲ್ಲಿಯೇ `ಅತ್ಯುತ್ತಮ ರೀತಿಯ ತೆರಿಗೆ ಯೋಜನೆ~ ಸಿದ್ಧಪಡಿಸಿಟ್ಟುಕೊಳ್ಳುವವರು ಎಂದು ಟ್ಯಾಕ್ಸ್ ಸ್ಫಾನರ್ ಪ್ರಶಂಸಿಸಿದೆ.
ಇಲ್ಲಿ ವಾರ್ಷಿಕ ಸರಾಸರಿ ರೂ. 4 ಲಕ್ಷ ವರಮಾನ ಪಡೆಯುವ ವನಿತೆಯ ತೆರಿಗೆ ಅನುಪಾತ ಶೇ 2ರಷ್ಟಿದೆ. ಇದು ಉಳಿದ ನಗರಗಳಿಗಿಂತಲೂ ಕಡಿಮೆ ಇದೆ. ಇದಕ್ಕೆ ಅವರ ಹೂಡಿಕೆ ಮತ್ತು ಉಳಿತಾಯ ಮಾಡುವ ಯೋಜನೆಯ ರೀತಿಯೇ ಪ್ರಮುಖ ಕಾರಣ.
ದೆಹಲಿಯಲ್ಲಿ ವಾರ್ಷಿಕ ರೂ. 6 ಲಕ್ಷ ವರಮಾನವಿರುವ ಪುರುಷ ಉದ್ಯೋಗಿಗಳ ತೆರಿಗೆ ಅನುಪಾತ 5ರಷ್ಟಿದೆ. ಬೆಂಗಳೂರಿನಲ್ಲಿ ವಾರ್ಷಿಕ ರೂ. 7 ಲಕ್ಷಕ್ಕಿಂತ ಹೆಚ್ಚಿನ ವರಮಾನ ಪಡೆಯುತ್ತಿರುವ ಉದ್ಯೋಗಿಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿದ್ದರೂ ತೆರಿಗೆ ಅನುಪಾತ ಅತ್ಯಂತ ಕಳಪೆ (ಶೇ 8) ಮಟ್ಟದಲ್ಲಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ 500ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪೆನಿ ಉದ್ಯೋಗಿಗಳನ್ನು ಸಂಪರ್ಕಿಸಿ ಟ್ಯಾಕ್ಸ್ ಸ್ಫಾನರ್ ಈ ಅಧ್ಯಯನ ವರದಿ ಸಿದ್ಧಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.