ADVERTISEMENT

ಕಲ್ಲಿದ್ದಲು: ಜಿಂದಾಲ್‌ ವಿರುದ್ಧ ದೋಷಾರೋಪಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಸಂಬಂಧ ಕಾಂಗ್ರೆಸ್‌ ಮುಖಂಡರೂ ಆಗಿರುವ ಉದ್ಯಮಿ ನವೀನ್‌ ಜಿಂದಾಲ್‌, ಕೇಂದ್ರದ ಮಾಜಿ ಸಚಿವ ದಾಸರಿ ನಾರಾಯಣ ರಾವ್‌ ಹಾಗೂ ಇತರ 13 ಮಂದಿ ವಿರುದ್ಧ ದೋಷಾರೋಪ ನಿಗದಿಪಡಿಸುವಂತೆ ವಿಶೇಷ ನ್ಯಾಯಾಲಯ ಶುಕ್ರವಾರ ಸಿಬಿಐಗೆ ಆದೇಶಿಸಿದೆ.

‘ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 409, 420 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಲಂಗಳಡಿ ದೋಷಾರೋಪ  ನಿಗದಿಪಡಿಸಬೇಕು’ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್ ನಿರ್ದೇಶಿಸಿದರು. ಜಿಂದಾಲ್‌ ಮತ್ತು ದಾಸರಿ ಅಲ್ಲದೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾ ಅವರೂ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಜಾರ್ಖಂಡ್‌ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪವನ್ನು 2008 ರಲ್ಲಿ ಜಿಂದಾಲ್‌ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ (ಜೆಎಸ್‌ಪಿಎಲ್‌) ಮತ್ತು ಗಗನ್‌ ಸ್ಪಾಂಜ್‌ ಐರನ್‌ ಪ್ರೈವೇಟ್‌ ಲಿಮಿಟೆಡ್‌ಗೆ (ಜಿಎಸ್‌ಐಪಿಎಲ್‌) ಹಂಚಿಕೆ  ಮಾಡುವ ವೇಳೆ ಅವ್ಯವಹಾರ ಎಸಗಿದ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಸಿಬಿಐ ಎಲ್ಲ 15 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಇದೇ ವೇಳೆ, ಪ್ರಕರಣದ ಆರೋಪಿಗಳಲ್ಲೊಬ್ಬರಾದ ಸುರೇಶ್‌ ಸಿಂಘಾಲ್‌ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಸಿಬಿಐ ಮತ್ತು ಇತರ 14 ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಕ್ಷಮಾದಾನ ನೀಡಬೇಕು ಮತ್ತು ಮಾಫಿ ಸಾಕ್ಷಿಯಾಗಲು ಅವಕಾಶ ನೀಡಬೇಕೆಂದು ಕೋರಿ ಸಿಂಘಾಲ್‌ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.