ADVERTISEMENT

ಕೊಳವೆ ಗ್ಯಾಸ್ ಯೋಜನೆ: ಕೇಂದ್ರ ನೆರವು-ಮೊಯಿಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ತುಮಕೂರು: ಬೆಂಗಳೂರಿಗೆ ಸಂಪರ್ಕ ಕಲ್ಪಿಸಿರುವ `ಗೇಲ್' ಗ್ಯಾಸ್ ಕೊಳವೆ ಮಾರ್ಗ ಬಳಸಿಕೊಂಡು ಬೆಂಗಳೂರಿನ ಮನೆ ಮನೆಗೂ ಗ್ಯಾಸ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಮುಂದಾದರೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಶನಿವಾರ ಇಲ್ಲಿ ಹೇಳಿದರು.

ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾರಿಗೆ ವಾಹನಗಳಿಗೆ ಡೀಸೆಲ್, ಪೆಟ್ರೋಲ್ ಬದಲು `ಸಿಎನ್‌ಜಿ' ವ್ಯವಸ್ಥೆ ಜಾರಿಗೆ ತಂದರೆ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಲಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ ರೂ 800 ಕೋಟಿ ಉಳಿತಾಯವಾಗಲಿದೆ. ಸೀಮೆಎಣ್ಣೆ ರಹಿತ ನಗರ ನಿರ್ಮಾಣಕ್ಕೆ ಮುಂದಾದರೂ ನೆರವು ನೀಡುವುದಾಗಿ ಪ್ರಕಟಿಸಿದರು.

ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ಯಾಸ್ ಟರ್ಮಿನಲ್ ಯೋಜನೆ ಕಾರ್ಯಸಾಧು ಎಂದು ಸಮಿತಿ ವರದಿ ನೀಡಿದ್ದು, ಶೀಘ್ರವೇ ಶಂಕು ಸ್ಥಾಪನೆ ಮಾಡಲಾಗುವುದು. ಕೊಚ್ಚಿ-ಮಂಗಳೂರು ಹಾಗೂ ಚಿತ್ರದುರ್ಗ- ಮಂಗಳೂರು ನಡುವೆ ಅನಿಲ ಕೊಳವೆ ಮಾರ್ಗ ಅಳವಡಿಸಲು ಸಿದ್ಧತೆ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.