ಮುಂಬೈ: ‘ಕೇಂದ್ರ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಿಸಿದ ಬಳಿಕ ಜವಳಿ ಕ್ಷೇತ್ರವು ₹ 27 ಸಾವಿರ ಕೋಟಿ ಬಂಡವಾಳ ಆಕರ್ಷಿಸಿದೆ’ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರ 2017ರ ಜೂನ್ ತಿಂಗಳಿನಲ್ಲಿ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರಕ್ಕೆ ಉತ್ತೇಜನ ನೀಡಲು ₹6 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಅದರಿಂದ ಹೂಡಿಕೆ ಹೆಚ್ಚಾಗುತ್ತಿದೆ. ಸರ್ಕಾರದ ಮಧ್ಯಪ್ರವೇಶದಿಂದ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮತ್ತು ದೇಶಿ ಮಾರುಕಟ್ಟೆಗಳಿಂದಲೂ ಹೆಚ್ಚಿನ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.
‘ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಜವಳಿ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಉದ್ಯಮ ಜತೆಗೂಡಿ ಕೆಲಸ ಮಾಡುತ್ತಿವೆ. ಹೀಗಾಗಿ ಜವಳಿ ಕ್ಷೇತ್ರದ ಭವಿಷ್ಯ ಉತ್ತಮವಾಗಿರುವ ವಿಶ್ವಾಸವಿದೆ.
‘ತಯಾರಾದ ಉತ್ಪನ್ನವನ್ನು ಕಡಿಮೆ ಅವಧಿಯಲ್ಲಿ ಮಾರಾಟ ಮಾಡುವುದು ಸರ್ಕಾರ ಮತ್ತು ಉದ್ಯಮದ ಮುಂದಿರುವ ಸವಾಲು. ಇದಕ್ಕಾಗಿ ಸರ್ಕಾರ ವಾಣಿಜ್ಯ ಸಚಿವಾಲಯದಲ್ಲಿ ಸರಕು ಸಾಗಣೆ ವಿಭಾಗವನ್ನು ಸೃಷ್ಟಿಸಿದೆ.
‘ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಸವಾಲುಗಳನ್ನು ಎದುರಿಸುವ ಕುರಿತಾಗಿ ಚರ್ಚೆ ನಡೆಸಲು ಶೀಘ್ರವೇ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ.
ರಫ್ತು ವಹಿವಾಟಿನಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಜವಳಿ ಉದ್ಯಮಿಗಳು ಸಚಿವೆಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.