ADVERTISEMENT

ಜಿಡಿಪಿ ಶೇ 8.6ರಷ್ಟು ಪ್ರಗತಿ: ಪ್ರಣವ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST

ಕೋಲ್ಕತ್ತ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಶೇ 8ರಿಂದ ಶೇ 8.6ಕ್ಕೆ ಏರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. 

  ಕೇಂದ್ರ ಅಂಕಿ ಅಂಶಗಳ ಸಂಘಟನೆ (ಸಿಎಸ್‌ಒ) ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರ ಶೇ 8.6ರಷ್ಟು ಇರಲಿದೆ ಎಂದು  ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ. ಕೃಷಿ ಸಂಬಂಧಿತ ಚಟುವಟಿಕೆಗಳು ಶೇ 5.4ರಷ್ಟು ವೃದ್ಧಿ ಕಾಣಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು  ಕೇಂದ್ರ ಹಣಕಾಸು ಸಚಿವಾಲಯ ಈ ಹಿಂದೆ ಅಂದಾಜಿಸಿದ್ದ ವೃದ್ಧಿ ದರಕ್ಕಿಂತಲೂ ಹೆಚ್ಚಿನ ಪ್ರಗತಿಯನ್ನು ವರ್ಷಾಂತ್ಯಕ್ಕೆ ನಿರೀಕ್ಷಿಸಬಹುದು ಎಂದಿದೆ.  

  ಸರ್ಕಾರ  ‘ಜಿಡಿಪಿ’ ಏರುವುದನ್ನು ಮಾತ್ರ ಗಮನಿಸುತ್ತಿಲ್ಲ. ಒಟ್ಟಾರೆ ಸುಸ್ಥಿರ ಪ್ರಗತಿಗೆ ಪ್ರಯತ್ನಿಸುತ್ತಿದೆ. ಬಡತನ ನಿರ್ಮೂಲನೆ ಮತ್ತು ಹಣದುಬ್ಬರ ದರ ನಿಯಂತ್ರಣ ಆರ್ಥಿಕ ವೃದ್ಧಿಗೆ ದೊಡ್ಡ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿದೆ ಎಂದು ಪ್ರಣವ್ ಹೇಳಿದ್ದಾರೆ. ಜುಲೈ-ಸೆಪ್ಟಂಬರ್ ತ್ರೈಮಾಸಿಕ ಅವಧಿಯ ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ಶೇ 72ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು 9.2 ಶತಕೋಟಿಯಿಂದ 15.8 ಶತಕೋಟಿಗೆ ಹೆಚ್ಚಿದೆ. ಆಮದು ಪ್ರಮಾಣ ಹೆಚ್ಚಿರುವುದು ಚಾಲ್ತಿ ಖಾತೆ ಕೊರತೆಗೆ ಕಾರಣ ಎನ್ನಲಾಗಿದೆ.

ಐಎಂಜಿ ರಚನೆ: ಹಣದುಬ್ಬರ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಆತಂರಿಕ ಸಚಿವರ ತಂಡವೊಂದನ್ನು (ಐಎಂಜಿ) ರಚಿಸಿದೆ. ಈ ಸಮಿತಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತ ಕ್ರಮಗಳ ಕುರಿತ ಸರ್ಕಾರಕ್ಕೆ ಸಲಹೆ ನೀಡಲಿದೆ. ಹಣಕಾಸು ಸಚಿವಾಲಯದ ಹಿರಿಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ನೇತೃತ್ವದಲ್ಲಿರುವ ಈ ತಂಡ, ಕೃಷಿ ಉತ್ಪಾದನೆ ಹೆಚ್ಚಳ, ಹಣಕಾಸು ನೀತಿ ಪರಾಮರ್ಷೆ, ಮಾರುಕಟ್ಟೆ ನಿಯಂತ್ರಣ, ಪೂರೈಕೆ ಸಮಸ್ಯೆ ಇತ್ಯಾದಿ ವಿಷಯಗಳ ಕುರಿತು ಪರಿಶೀಲನೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.