ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್ಟಿ) ಜಾರಿಗೆ ಬಂದ ನಂತರ ಅದರ ವ್ಯಾಪ್ತಿಯಿಂದ ಹೊರಗೆ ಉಳಿಯುವುದು ವಹಿವಾಟುದಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ಹಣಕಾಸು ಸಚಿವಾಲಯ ಅಭಿಪ್ರಾಯಪಟ್ಟಿದೆ.
2017ರ ಜುಲೈ 1ರಿಂದ ಈ ಐತಿಹಾಸಿಕ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ತೆರಿಗೆ ಮಾಹಿತಿಯ ಹರಿವಿನಲ್ಲಿನ ಹೆಚ್ಚಳದ ಕಾರಣಕ್ಕೆ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಪ್ರಮಾಣವು ಏರಿಕೆಯಾಗಿದೆ.
ಜಿಎಸ್ಟಿ ಜಾರಿಗೆ ಬರುವ ಮುನ್ನ ಸಣ್ಣ ತಯಾರಕರ ವಹಿವಾಟು ಮತ್ತು ಸರಕು – ಸೇವೆಗಳ ಬಳಕೆ ಬಗ್ಗೆ ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ಮಾಹಿತಿ ಇರುತ್ತಿರಲಿಲ್ಲ. ಎಕ್ಸೈಸ್ ಸುಂಕವನ್ನು ತಯಾರಿಕಾ ಹಂತದಲ್ಲಿ ವಿಧಿಸುತ್ತಿದ್ದರಿಂದ ಸಮರ್ಪಕ ಮಾಹಿತಿ ದೊರೆಯುತ್ತಿರಲಿಲ್ಲ. ರಾಜ್ಯದಲ್ಲಿನ ಸಂಸ್ಥೆಗಳ ಗಡಿ ಆಚೆಗಿನ ವಹಿವಾಟಿನ ಸ್ಪಷ್ಟ ಚಿತ್ರಣವೂ ರಾಜ್ಯಗಳಿಗೆ ಸಿಗುತ್ತಿರಲಿಲ್ಲ. ಈಗ ತಯಾರಿಕೆ ಮತ್ತು ಮಾರಾಟ ಚಟುವಟಿಕೆಯ ಸಮಗ್ರ ಮಾಹಿತಿಯು ದೊರೆಯುತ್ತಿದೆ. ಇದರಿಂದ ತೆರಿಗೆ ಸಂಗ್ರಹವೂ ಹೆಚ್ಚಳಗೊಂಡಿದೆ. ತೆರಿಗೆ ಪಾವತಿಸಬೇಕಾದವರು ತೆರಿಗೆ ಜಾಲದ ಹೊರಗೆ ಉಳಿಯಲು ಸಾಧ್ಯವಾಗುತ್ತಿಲ್ಲ.
ಗ್ರಾಹಕರಿಗೆ ಜಿಎಸ್ಟಿಯ ಪ್ರಯೋಜನ ವಿಸ್ತರಿಸಲು ಮತ್ತು ತೆರಿಗೆ ಪಾವತಿದಾರರಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಹೊಸ ತೆರಿಗೆ ವ್ಯವಸ್ಥೆಯ ಸ್ವರೂಪವನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
*
ಕೋಲ್ಕತ್ತ : ಜಿಎಸ್ಟಿ ನೆಟ್ವರ್ಕ್ನಲ್ಲಿ (ಜಿಎಸ್ಟಿಎನ್) ತಾಂತ್ರಿಕ ದೋಷದಿಂದಾಗಿ ರಫ್ತುದಾರರಿಗೆ ₹ 25 ಸಾವಿರ ಕೋಟಿಯಷ್ಟು ತೆರಿಗೆ ಮರುಪಾವತಿ ಆಗಿಲ್ಲ’ ಎಂದು ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ ತಿಳಿಸಿದ್ದಾರೆ.
‘ಮರುಪಾವತಿಗಾಗಿ ದೇಶದಾದ್ಯಂತ 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಮರುಪಾವತಿಗೆ ಸಲ್ಲಿಸಿರುವ ಅರ್ಜಿಯನ್ನು ಜಿಎಸ್ಟಿಎನ್ ಸ್ವಯಂಚಾಲಿತವಾಗಿ ಪರಿಶೀಲನೆ ನಡೆಸಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಅರ್ಜಿಯನ್ನೂ ಅಧಿಕಾರಿಗಳೇ ಖುದ್ದು ಪರಿಶೀಲನೆ ನಡೆಸಬೇಕಾಗಿದೆ.
‘3 ಲಕ್ಷ ಅರ್ಜಿಗಳಲ್ಲಿ ಶೇ 34 ರಿಂದ ಶೇ 40 ರಷ್ಟು ಅರ್ಜಿಗಳು ಖುದ್ದು ಪರಿಶೀಲನೆಗಾಗಿ ರಾಜ್ಯಗಳಿಗೆ ಬಂದಿವೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.