ADVERTISEMENT

ತೆರಿಗೆ ಹಳೆ ಪ್ರಕರಣ ಪರಿಸಮಾಪ್ತಿ

​ಪ್ರಜಾವಾಣಿ ವಾರ್ತೆ
Published 30 ಮೇ 2012, 19:30 IST
Last Updated 30 ಮೇ 2012, 19:30 IST

ನವದೆಹಲಿ (ಪಿಟಿಐ):  `ಆದಾಯ ತೆರಿಗೆ ಇಲಾಖೆ 2012ರ ಏ.1ಕ್ಕಿಂತ ಮೊದಲೇ ಅಂತಿಮಗೊಳಿಸಿದ ಪ್ರಕರಣಗಳನ್ನು ಮರು ಪರಿಶೀಲಿಸಲು ಹೋಗುವುದಿಲ್ಲ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

51 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹಳೆಯ ತೆರಿಗೆ ಪ್ರಕರಣಗಳನ್ನು ಮತ್ತೆ ಕೆದಕಲು ಹೋಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ಆದಾಯ  ತೆರಿಗೆ ಇಲಾಖೆ ನೂತನ ಕಟ್ಟಡ ಉದ್ಘಾಟಿಸಿ ಹೇಳಿದರು.

ಪ್ರಣವ್ ಅವರ ಹೇಳಿಕೆಯು ಹಲವು ವಿದೇಶಿ ಹೂಡಿಕೆದಾರರಿಗೆ ನೆಮ್ಮದಿ ತಂದಿದೆ. ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶೀಯ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ ಎಂದು ವೊಡಾಫೋನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.

ಅಧಿಕಾರಿಗಳಿಗೆ ಸಲಹೆ:`ತೆರಿಗೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ನ್ಯಾಯಾಲಯದವರೆಗೆ ಕೊಂಡೊಯ್ಯಬೇಡಿ. ಆಯುಕ್ತರ ಮಟ್ಟದಲ್ಲೇ ಇತ್ಯರ್ಥಪಡಿಸಿರಿ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.

`ಒಂದು ತೆರಿಗೆ ಪ್ರಕರಣದಲ್ಲಿ ಕಾನೂನು ಸಮಸ್ಯೆಯ ಯಾವುದೇ ಅಂಶ ಇಲ್ಲದಿದ್ದರೆ ಅದನ್ನು ಅನಗತ್ಯವಾಗಿ ನ್ಯಾಯಾಲಯದವರೆಗೆ ಎಳೆದೊಯ್ಯುವ ಅಗತ್ಯವಿಲ್ಲ. ತೆರಿಗೆ ಪಾವತಿಸುವವರ ಮತ್ತು ತೆರಿಗೆ ಸಂಗ್ರಹಿಸುವವರ ಹಕ್ಕುಗಳ ಕುರಿತು ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ಕಾಳಜಿಯಿಂದ ವರ್ತಿಸಬೇಕು~ ಎಂದು ಗಮನ ಸೆಳೆದಿದ್ದಾರೆ.

2.45 ಲಕ್ಷ ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಬರಬೇಕಿದ್ದು, ಇದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಬೇಕಿವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.