ADVERTISEMENT

ದಿವಾಳಿ ಅಂಚಿನಲ್ಲಿ 8 ಸಹಕಾರಿ ಬ್ಯಾಂಕ್‌ಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ದೇಶದ ಎಂಟು ಸಹಕಾರಿ ಬ್ಯಾಂಕುಗಳು ಗ್ರಾಹಕರ ಠೇವಣಿ ಹಣ ಮರು ಪಾವತಿಸುವಲ್ಲಿ ವಿಫಲವಾಗಿದ್ದು, ದಿವಾಳಿ ಅಂಚಿನಲ್ಲಿವೆ ಎಂದು `ಆರ್‌ಬಿಐ~ನ ಠೇವಣಿ ವಿಮೆ ಮತ್ತು ಸಾಲ ಖಾತರಿ  ನಿಗಮದ (ಡಿಐಸಿಜಿಸಿ) ವರದಿ ತಿಳಿಸಿದೆ.

ಮಹಾರಾಷ್ಟ್ರದ ನಾಲ್ಕು, ಗುಜರಾತ್‌ನ ಒಂದು ಮತ್ತು ಕರ್ನಾಟಕದ ಮೂರು ಸಹಕಾರಿ ಬ್ಯಾಂಕ್‌ಗಳು ಈ ದಿವಾಳಿ ಪಟ್ಟಿಯಲ್ಲಿವೆ. ಕಳೆದ ಹಣಕಾಸು ವರ್ಷದಲ್ಲಿ ಹಣಕಾಸು ಮುಗ್ಗಟ್ಟಿನಿಂದ ದೇಶದಾದ್ಯಂತ ಒಟ್ಟು 26 ಸಹಕಾರಿ ಬ್ಯಾಂಕುಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.

ಠೇವಣಿ ವಿಮೆ ಮತ್ತು ಸಾಲ ಖಾತರಿ  ನಿಗಮದ ಪ್ರಕಾರ, ಸಹಕಾರಿ ಬ್ಯಾಂಕುಗಳು ಆರ್ಥಿಕ ಮುಗ್ಗಟ್ಟಿನ (ದಿವಾಳಿ) ಕಾರಣಕ್ಕೆ ಗ್ರಾಹಕರ ಠೇವಣಿ ಮೊತ್ತವನ್ನು ಮರು ಪಾವತಿಸಲು ವಿಫಲವಾದರೆ, ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸಿ ಗ್ರಾಹಕರಿಗೆ ಗರಿಷ್ಠ ರೂ. 1 ಲಕ್ಷದವರೆಗೆ ಹಣ ಮರು ಪಾವತಿಸುತ್ತದೆ.

ADVERTISEMENT

ಮಹಾರಾಷ್ಟ್ರದ ಈಚಲಕರಂಜಿ ಮತ್ತು ಸಮತಾ ಸಹಕಾರಿ ಬ್ಯಾಂಕ್‌ಗೆ `ಡಿಐಸಿಜಿಸಿ~ ಕ್ರಮವಾಗಿ ಗರಿಷ್ಠ ರೂ. 48.7 ಮತ್ತು ರೂ. 38.83 ಕೋಟಿ ಹಣ ಪಾವತಿಸಿದೆ.

ಕರ್ನಾಟಕದ ಚಡಚಣ ಶ್ರೀ ಸಂಗಮೇಶ್ವರ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್  ಮತ್ತು ಮಹಾರಾಷ್ಟ್ರದ  ಲಕ್ಷ್ಮಿ ಸಹಕಾರಿ ಬ್ಯಾಂಕ್ ಕ್ರಮವಾಗಿ ರೂ. 2.5 ಕೋಟಿ ನೆರವು ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.