ADVERTISEMENT

ದ್ವಿದಳ ಧಾನ್ಯ ಕೃಷಿಗೆ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST
ದ್ವಿದಳ ಧಾನ್ಯ ಕೃಷಿಗೆ ವಿಶೇಷ ಕೊಡುಗೆ
ದ್ವಿದಳ ಧಾನ್ಯ ಕೃಷಿಗೆ ವಿಶೇಷ ಕೊಡುಗೆ   

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನಲ್ಲಿ 1.90 ಕೋಟಿ ಟನ್ ಬೇಳೆಕಾಳು ಉತ್ಪಾದನೆ ನಿರೀಕ್ಷಿಸಲಾಗಿದ್ದು, ಈ ನಿಟ್ಟಿನಲ್ಲಿ  ದ್ವಿದಳ ಧಾನ್ಯ ಬೆಳೆ ಉತ್ತೇಜಿಸಲು 16 ರಾಜ್ಯಗಳಲ್ಲಿ ಸರ್ಕಾರ `ವಿಶೇಷ ನೆರವಿನ ಯೋಜನೆ~ ಪ್ರಕಟಿಸಿದೆ.

ಪ್ರಸಕ್ತ ಮುಂಗಾರಿನಲ್ಲಿ ಈ ಪ್ಯಾಕೇಜ್ ಜಾರಿಗೆ ಬರಲಿದೆ. ಉದ್ದು, ತೊಗರಿ, ನೆಲಗಡಲೆ, ಹೆಸರುಕಾಳು ಮುಂತಾದ ದ್ವಿದಳ ಧಾನ್ಯಗಳನ್ನು ಹತ್ತಿ, ಜೋಳ, ಸೂರ್ಯಕಾಂತಿ ಸೇರಿದಂತೆ ಇತರೆ  ಕೃಷಿಯಲ್ಲಿ ಮಿಶ್ರ ಬೆಳೆಯಾಗಿಸಲು ಉತ್ತೇಜನ ನೀಡಲಾಗುತ್ತದೆ. ತಂತ್ರಜ್ಞಾನ ಅಳವಡಿಕೆ, ಸಂಶೋಧನಾ ಘಟಕ ಆರಂಭ, ಹನಿ ನೀರಾವರಿ ನೆರವು ಇತ್ಯಾದಿ ಅಂಶಗಳು ಪ್ಯಾಕೇಜ್‌ನಲ್ಲಿವೆ.

ಬೀದರ್ `ಏರಿ ವಿಧಾನ~: ಎರಡೂ ಕಡೆ ರೆಕ್ಕೆಗಳಿರುವ ನೇಗಿಲಿನ (ರಿಡ್ಜ್) ಮೂಲಕ ಹೊಲದ ಮಣ್ಣನ್ನು ಚಿಕ್ಕದಾಗಿ ಏರಿ ಹಾಕಿದಂತೆ ಮಾಡಿ ದ್ವಿದಳ ಧಾನ್ಯ ಬೆಳೆಯುವ ವಿಧಾನವನ್ನು ಕರ್ನಾಟಕದ ಬೀದರ್‌ನಲ್ಲಿ ಅನುಸರಿಸಲಾಗುತ್ತಿದೆ. ಈ ವಿಧಾನವನ್ನು ಉಳಿದೆಡೆಗೂ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ (ಟಿಎನ್‌ಎಯು) ದ್ವಿದಳ ಧಾನ್ಯ ಬೆಳೆಗೆಂದೇ ಅಭಿವೃದ್ಧಿಪಡಿಸಿರುವ `ಪಲ್ಸ್ ವಂಡರ್~ ಸಿಂಚನ ಯಂತ್ರವನ್ನೂ ಬಳಸುವ ಕುರಿತು ಚಿಂತನೆ ನಡೆಸುತ್ತಿದೆ.

ಈ ಯಂತ್ರದ ಬಳಕೆಯಿಂದ ಶೇ 20ರಷ್ಟು ಹೆಚ್ಚು ಇಳುವರಿ ಪಡೆಯಬಹುದು ಎಂದು `ಟಿಎನ್‌ಎಯು~ ಹೇಳಿದೆ.
16 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ ಈ ಪ್ರಯೋಗಳು ನಡೆಯಲಿವೆ. ಸಣ್ಣ ರೈತರ ಕೃಷಿ ವಾಣಿಜ್ಯ ವೇದಿಕೆ (ಎಸ್‌ಎಫ್‌ಎಸಿ) ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ರೈತರಿಗೆ ನೆರವು ನೀಡಲಿದೆ.
 
ರಾಷ್ಟ್ರೀಯ ಆಹಾರ ಭದ್ರತೆ ಅಭಿಯಾನ(ಎನ್‌ಎಫ್‌ಎಸ್‌ಎಂ) ಮೂಲಕ  ಪ್ಯಾಕೇಜ್‌ನ ಹಣ ಬಿಡುಗಡೆಯಾಗಲಿದೆ. 16 ರಾಜ್ಯಗಳಿಗೆ ದ್ವಿದಳ ಧಾನ್ಯ ಬೆಳೆಗೆ ಹೆಚ್ಚುವರಿಯಾಗಿ ರೂ.107.3 ಕೋಟಿಯಷ್ಟು ನೆರವು ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.