ಮುಂಬೈ: ನೌಕರರ ಮೂಲ ವೇತನದ ಜತೆಗೆ ಇತರ ಎಲ್ಲಾ ಬಗೆಯ ಭತ್ಯೆಗಳನ್ನು ಸೇರಿಸಿದಾಗ ಬರುವ ಮೊತ್ತಕ್ಕೆ ಭವಿಷ್ಯ ನಿಧಿ ಪ್ರಮಾಣ ಲೆಕ್ಕ ಹಾಕುವ ಕ್ರಮವನ್ನು ಜಾರಿಗೊಳಿಸಬೇಕು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಸುತ್ತೋಲೆ ಹೊರಡಿಸಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನ ಸಂಸ್ಥೆಯಾದ ಇಪಿಎಫ್ಒ ನ.30ರಂದು ಇಲ್ಲಿ ನಡೆದ ಆಂತರಿಕ ಅವಲೋಕನಾ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು, ವಿವಿಧ ರಾಜ್ಯಗಳಲ್ಲಿರುವ ತನ್ನ ಕಚೇರಿಗಳಿಗೆ ಸುತ್ತೋಲೆ ಕಳುಹಿಸಿದೆ.
ಪ್ರಸ್ತುತ ನೌಕರರ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೊತ್ತದ ಶೇ 12ರಷ್ಟು ಹಣವು ಭವಿಷ್ಯ ನಿಧಿ ಹಾಗೂ ಪಿಂಚಣಿ ಯೋಜನೆಗಾಗಿ ಇಪಿಎಫ್ಒ ಗೆ ಸಂದಾಯವಾಗುತ್ತಿದೆ. ಆದರೆ, ಇನ್ನು ಮುಂದೆ, ಮೂಲ ವೇತನ, ತುಟ್ಟಿ ಭತ್ಯೆಯ ಜತೆಗೆ ಇತರೆ ಬಗೆಯ ಭತ್ಯೆಗಳನ್ನೂ ಒಟ್ಟುಗೂಡಿಸಿದಾಗ ಬರುವ ಮೊತ್ತದ ಶೇ 12ರಷ್ಟನ್ನು ಇಪಿಎಫ್ಒ ಗೆ ಸಂದಾಯ ಮಾಡಬೇಕಾಗುತ್ತದೆ.
ಹೀಗಾಗಿ ಒಟ್ಟಾರೆ ಪಿಎಫ್ ಕಡಿತ ಹೆಚ್ಚಳವಾಗಿ, ನೌಕರರ ಕೈಗೆ ಸಿಗುವ ಮಾಸಿಕ ವೇತನ ಕಡಿಮೆ ಆಗಲಿದೆ. ಆದರೆ, ನೌಕರರ ಪಾಲಿನಷ್ಟೇ ಮೊತ್ತವನ್ನು ಕಂಪೆನಿಗಳು ಕೂಡ ಪಾವತಿಸಬೇಕಿರುವುದರಿಂದ ದೀರ್ಘಾವಧಿಯಲ್ಲಿ ನೌಕರರ ನಿಧಿಗೆ ಹೆಚ್ಚು ಹಣ ಸೇರಲಿದೆ.
ಈವರೆಗೆ ಹಲವು ಕಂಪೆನಿಗಳು ಪಿಎಫ್ಗೆ ಭರಿಸಬೇಕಾದ ತಮ್ಮ ಪಾಲನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ನೌಕರರ ವೇತನವನ್ನು ಹಲವು ಶೀರ್ಷಿಕೆಗಳಡಿ ವಿಂಗಡಿಸುತ್ತಿದ್ದವು.
ಆದರೆ ಇನ್ನು ಮುಂದೆ ಸಂಚಾರ ಭತ್ಯೆ, ಶೈಕ್ಷಣಿಕ ಭತ್ಯೆ, ವೈದ್ಯಕೀಯ ಭತ್ಯೆ ಇನ್ನಿತರ ಭತ್ಯೆಗಳನ್ನೂ ಸೇರಿಸಿದಾಗ ಬರುವ ಮೊತ್ತಕ್ಕೇ ಕಂಪೆನಿಗಳು ಕೂಡ ಪಾಲು ಭರಿಸಬೇಕಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.