ನವದೆಹಲಿ (ಪಿಟಿಐ): ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಿಂದಿರುಗುವಂತೆ ಸೋಮವಾರ ಮುಷ್ಕರ ನಿರತ ಪೈಲಟ್ಗಳಿಗೆ ಸೂಚಿಸಿರುವ ದೆಹಲಿಯ ಹೈಕೋರ್ಟ್, ಬೇಡಿಕೆಗಳನ್ನು ಪರಿಗಣಿಸುವಂತೆ ಆಡಳಿತ ಮಂಡಳಿಗೆ ನಿರ್ದೇಶಿಸುವುದಾಗಿ ಹೇಳಿದೆ.
ಏರ್ ಇಂಡಿಯಾ ಆಡಳಿತ ಮಂಡಳಿ ಪೈಲಟ್ಗಳ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸೋಮವಾರ ಮಧ್ಯಾಹ್ನವೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ.‘ಈ ಮುಷ್ಕರ ನಾಳೆಗೆ ಮುಂದುವರಿಯಬಾರದು’ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಡಿ. ಅಹ್ಮದ್ ಮತ್ತು ಬೀನಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.
ಮಧ್ಯಾಹ್ನ 2.15ಕ್ಕೆ ಅರ್ಜಿಯ ವಿಚಾರಣೆ ಮುಗಿಯುವುದರ ಒಳಗಾಗಿ ಒಳಗಾಗಿ ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗಬೇಕು. ಈ ಕುರಿತ ಪೈಲಟ್ಗಳ ನಿರ್ಧಾರವನ್ನು ತಮಗೆ ತಿಳಿಸುವಂತೆ ನ್ಯಾಯಮೂರ್ತಿಗಳು ಪೈಲಟ್ಗಳ ಪರ ವಕೀಲರಿಗೆ ತಿಳಿಸಿದರು.
ಕಳೆದ ಬುಧವಾರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಮಿತ್ತಲ್ ಅವರು, ಸಾರ್ವಜನಿಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲಿಟ್ಟುಕೊಂಡು ಕೆಲಸಕ್ಕೆ ಹಾಜರಾಗುವಂತೆ ಮುಷ್ಕರನಿರತ ಪೈಲಟ್ಗಳಿಗೆ ಸೂಚನೆ ನೀಡಿದ್ದರು. ಆದರೆ, ಪೈಲಟ್ಗಳು ಆದೇಶ ಪಾಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಿತ್ತಲ್ ಅವರು ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದ್ದರು.
ಆದೇಶ ಪಾಲಿಸದ ಪೈಲಟ್ಗಳ ವರ್ತನೆಯನ್ನು ನ್ಯಾಯಾಂಗ ನಿಂದನೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.