ಕೇಂದ್ರ ಸರ್ಕಾರದ ಬಜೆಟ್ ಮಂಡಣೆಯಾದ ನಂತರ ಷೇರುಪೇಟೆಯು ಸೋಮವಾರದಂದು ಮಧ್ಯಂತರದಲ್ಲಿ ಸುಮಾರು 590 ಪಾಯಿಂಟುಗಳ ಮುನ್ನಡೆಯಿಂದ ವಿಜೃಂಭಿಸಿ ಸ್ವಲ್ಪ ಸಮಯದ ನಂತರ ಭಾರಿ ಮಾರಾಟದ ಒತ್ತಡದಿಂದ 470 ಪಾಯಿಂಟುಗಳಷ್ಟು ಕುಸಿತ ಕಂಡಿದ್ದಾಗಲಿ ನಂತರದ ದಿನ ಏಕಮುಖವಾಗಿ 623 ಪಾಯಿಂಟುಗಳ ಏರಿಕೆಯಾಗಲಿ ಪರಿಶೀಲಿಸಿದಾಗ ಪೇಟೆಯ ಹರಿತ ಎಷ್ಟರಮಟ್ಟಿಗೆ ಊಹಿಸಲಸಾಧ್ಯವೆಂದು ತಿಳಿಯುತ್ತದೆ.
ಬಜೆಟ್ನಲ್ಲಿ ಆಟೋ ವಲಯದ ಕಂಪೆನಿಗಳ ಮೇಲಿನ ಅಬ್ಕಾರಿ ಶುಲ್ಕ, ಸಿಗರೇಟ್ ಕಂಪೆನಿಗಳ ಮೇಲಿನ ಶುಲ್ಕಗಳು ಹೆಚ್ಚಿಸಬಹುದೆಂಬ ನಿರೀಕ್ಷೆ ಹುಸಿಯಾದ್ದರಿಂದ ಆ ವಲಯದ ಕಂಪೆನಿಗಳು ಬೃಹತ್ ಮುನ್ನಡೆಯನ್ನು ಸಾಧಿಸಿದವು. ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯು ಒಂದೇ ವಾರದಲ್ಲಿ ರೂಪಾಯಿ 100ಕ್ಕೂ ಹೆಚ್ಚಿನ ಮುನ್ನಡೆ ಸಾಧಿಸಿದರೆ, ಟಾಟಾ ಮೋಟಾರ್ಸ್ ಸುಮಾರು 140 ರೂಪಾಯಿಗಳ ಮುನ್ನಡೆ ಗಳಿಸಿತು. ಇಂತಹ ವಾತಾವರಣವು ಹೆಚ್ಚಿನ ಮೌಲ್ಯ ಕುಸಿತ ಕಂಡಿದ್ದ ಮಧ್ಯಮ ಶ್ರೇಣಿ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳ ಏರಿಕೆಗೂ ಪೂರಕವಾಯಿತು.
ನಕಾರಾತ್ಮಕ ಬೆಳವಣಿಗೆ ನಿರೀಕ್ಷೆಯಿಂದ ಪ್ರಮುಖ ಕಂಪೆನಿಗಳ ಬೆಲೆಗಳು ಭಾರಿ ತುಳಿತಕ್ಕೊಳಗಾಗಿದ್ದು ನಿರೀಕ್ಷೆ ಹುಸಿಯಾದ ಕಾರಣ ದಿಢೀರ್ ಚೇತರಿಕೆ ಕಾಣುವಂತಾಯಿತು. ಹಿಂದಿನವಾರ ಅಮೆರಿಕದ ನಿಯಂತ್ರಕರಿಂದ ಆಮದು ಎಚ್ಚರಿಕೆಯ ಕ್ರಮದ ಕಾರಣ ಭಾರಿ ಕುಸಿತಕ್ಕೊಳಗಾಗಿದ್ದ ಅರವಿಂದೋ ಫಾರ್ಮ ಕಂಪೆನಿಯ ಪರಿಹಾರ ಕಂಡುಕೊಳ್ಳುವ ಕಾರ್ಯದಲ್ಲಿ ಮತ್ತೊಂದು ಬಹುರಾಷ್ಟ್ರೀಯ ಸಂಸ್ಥೆ ಸಹಾಯ ಮಾಡಲಿದೆ ಎಂಬ ಸುದ್ದಿಯಿಂದ ಸುಮಾರು ರೂ 25ರ ಚೇತರಿಕೆಯನ್ನು ಅರವಿಂದೋ ಫಾರ್ಮ ಕಂಡಿತು. ಅಗ್ರಮಾನ್ಯ ಕಂಪೆನಿಗಳು ಎಂತಹ ಕಾರಣದಿಂದ ಕುಸಿತ ಕಂಡರೂ ಮತ್ತೊಂದು ಕಾರಣದಿಂದ ಚಿಗುರಿಕೊಳ್ಳುವುದು.
ಹಿಂದಿನವಾರ ಒಟ್ಟಾರೆ 785 ಪಾಯಿಂಟುಗಳಷ್ಟು ಸಂವೇದಿ ಸೂಚ್ಯಂಕ ಏರಿಕೆ ಕಂಡು ಮಧ್ಯಮಶ್ರೇಣಿ ಸೂಚ್ಯಂಕವನ್ನು 238 ಪಾಯಿಂಟುಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 204 ಪಾಯಿಂಟುಗಳ ಏರಿಕೆ ಕಾಣುವಂತೆ ಮಾಡಿತು. ವಿದೇಶೀ ವಿತ್ತೀಯ ಸಂಸ್ಥೆಗಳು ರೂ ,193 ಕೋಟಿ ಹೂಡಿಕೆ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ 279 ಕೋಟಿ ಹೂಡಿಕೆ ಮಾಡಿವೆ. ಈ ಸಂದರ್ಭದಲ್ಲಿ ಗಮನಾರ್ಹ ಅಂಶವೆಂದರೆ ಹಿಂದಿನ ವಾರ ವಿದೇಶಿ ವಿತ್ತೀಯ ಸಂಸ್ಥೆಗಳು ರೂ 4,469 ಮಾರಾಟ ಮಾಡಿದರೂ ಸ್ಥಳೀಯ ವಿತ್ತೀಯ ಸಂಸ್ಥೆಗಳ ಕೊಳ್ಳುವಿಕೆಯಿಂದ ಸೂಚ್ಯಂಕವು 510 ಪಾಯಿಂಟು ಕುಸಿದಿದ್ದ ಈ ವಾರ ರೂ 1193 ಕೋಟಿ ಖರೀದಿಯು 785 ಪಾಯಿಂಟುಗಳ ಮುನ್ನಡೆ ಪಡೆದಿರುವುದು ಚಟುವಟಿಕೆಯು ಭಾರಿ ಕುಸಿತ ಕಂಡಿದ್ದ ಸೂಚ್ಯಂಕದ ಕಂಪೆನಿಗಳಲ್ಲಿ ಕೇಂದ್ರೀಕೃತವಾಗಿತೆನ್ನಬಹುದಾಗಿದೆ. ಈ ವಾರದ ಚಟುವಟಿಕೆಯು ಷೇರುಪೇಟೆ ಬಂಡವಾಳೀಕರಣ ಮೌಲ್ಯವು ರೂ 65.29 ಲಕ್ಷ ಕೋಟಿಗೆ ಏರಿಕೆ ಕಾಣುವಂತೆ ಮಾಡಿತ್ತು. ಹಿಂದಿನವಾರ ಇದು ರೂ 62.89 ಲಕ್ಷ ಕೋಟಿಗಳಲ್ಲಿತ್ತು.
ಹೊಸ ಷೇರಿನ ವಿಚಾರ
ಟೆಕ್ಸ್ಮ್ಯಾಕೋ ಕಂಪೆನಿಯ ಹೆವಿ ಇಂಜಿನಿಯರಿಂಗ್ ಸ್ಟೀಲ್ ಫೌಂಡ್ರಿ ವಿಭಾಗವನ್ನು ಬೇರ್ಪಡಿಸಿ ಟೆಕ್ಸ್ಮ್ಯಾಕೊ ರೇಲ್ ಅಂಡ್ ಇಂಜಿನಿಯರಿಂಗ್ ಲಿ. ಎಂದು ರೂ 1ರ ಮುಖಬೆಲೆಯುಳ್ಳ ಷೇರನ್ನು ನೀಡಲಾಗಿತ್ತು. ಈ ಷೇರುಗಳು ಮಾರ್ಚ್ 3 ರಿಂದ ‘ಟಿ’ ಗುಂಪಿನಲ್ಲಿ ವಹಿವಾಟು ಆರಂಭಿಸಿದೆ. ಆರಂಭದ ದಿನ ರೂ 64.35 ರಿಂದ ರೂ 95 ರವರೆಗೂ ಏರಿಳಿತ ಕಂಡು ರೂ 69.15 ರಲ್ಲಿ ವಾರಾಂತ್ಯ ಕಂಡಿತು.
ಬೋನಸ್ ಷೇರಿನ ವಿಚಾರ
*ಸನ್ವಾರಿಯಾ ಆಗ್ರೊ ಆಯಿಲ್ಸ್ ಲಿ. ಕಂಪೆನಿಯು 1:1ರ ಅನುಪಾತದ ಬೋನಸ್ ಪ್ರಕಟಿಸಿದ್ದು ಮಾರ್ಚ್ 29ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯಲಿದೆ.
*ಶ್ರೀನಾಥ್ ಕಮರ್ಷಿಯಲ್ ಅಂಡ್ ಫೈನಾನ್ಸ್ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ 17 ನಿಗದಿತ ದಿನವಾಗಿದೆ.
*ಶಕ್ತಿ ಪಂಪ್ಸ್ ಕಂಪೆನಿಯು ಮಾರ್ಚ್ 11 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
*ಆನ್ ಮೊಬೈಲ್ ಗ್ಲೋಬಲ್ ಕಂಪೆನಿಯು ಮಾರ್ಚ್ 7 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
* ಮಿನಾಲ್ ಇಂಡಸ್ಟ್ರೀಸ್ ಕಂಪೆನಿಯು ಜುಲೈ 9 ರಂದು ಪ್ರಕಟಿಸಿದ್ದ 2:3ರ ಅನುಪಾತದ ಬೋನಸ್ ಷೇರಿಗೆ, ದೃಢೀಕರಣದ ನಂತರ ಮಾರ್ಚ್ 12ನ್ನು ನಿಗಧಿತ ದಿನಾಂಕವೆಂದು ಪ್ರಕಟಿಸಿದೆ.
ಲಾಭಾಂಶ ವಿಚಾರ
ಅಬ್ಬಾಟ್ ಇಂಡಿಯಾ ಶೇ. 170 (ನಿಗದಿತ ದಿನ 21.04.11) ಬರ್ಜರ್ ಪೇಂಟ್ಸ್ ಶೇ. 25 (ಮುಖಬೆಲೆ ರೂ 2, ನಿಗದಿತ ದಿನ 15.03.11) ಬಾಷ್ ಶೇ. 400, ಗುಡ್ರಿಕ್ ಗ್ರೂಪ್ ಶೇ. 50, ಗುಜರಾತ್ ಗ್ಯಾಸ್ ಶೇ. 600 (ಮುಖಬೆಲೆ ರೂ 2, ನಿಗಧಿತ ದಿನ ಮಾರ್ಚ್ 23, 2011) ಜಾಲಿ ಬೋರ್ಡ್ ಶೇ. 60.
ಹಕ್ಕಿನ ಷೇರು ವಿಚಾರ
ತುಳಸಿಯಾನ್ ಎನ್ಇಸಿ ಲಿ. ಕಂಪೆನಿಯು ್ಙ 49.50 ರಂತೆ 2:1ರ ಅನುಪಾತದ ಹಕ್ಕಿನ ಷೇರು ವಿತರಿಸಲಿದೆ ಮಾರ್ಚ್ 12 ನಿಗದಿತ ದಿನವಾಗಿದೆ.
ಮುಖಬೆಲೆ ಸೀಳಿಕೆ ವಿಚಾರ
* ಡ್ಯಾಝಲ್ ಕಾನ್ಫಿನ್ ಡೈವ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ. 1ಕ್ಕೆ ಸೀಳಲಿದೆ.
* ‘ಟಿ’ ಗುಂಪಿನ ಪರಾನ್ ಲಿಮಿಟೆಡ್ ಕಂಪೆನಿಯ ಸಧ್ಯದ ರೂ 100ರ ಮುಖಬೆಲೆಯ ಷೇರನ್ನು ್ರೂ 1ಕ್ಕೆ ಸೀಳಲಿದೆ.
ಕಂಪೆನಿ ಹೆಸರಿನ ಬದಲಾವಣೆ
ಆಕಾಂಕ್ಷ ಫೈನ್ ವೆಸ್ಟ್ ಕಂಪೆನಿಯ ಹೆಸರನ್ನು ಆಕಾಂಕ್ಷ ಸೆಲ್ಲುಲಾರ್ ಲಿಮಿಟೆಡ್ ಎಂದು ಬದಲಿಸಲಾಗಿದೆ.
ಬಜೆಟ್ನಲ್ಲಿನ ಪರಿಣಾಮಕಾರಿ ಅಂಶಗಳು
*ಕಂಪೆನಿಗಳು ಇದುವರೆಗೂ ಶೇ. 7.2 ರಷ್ಟು ಮೇಲ್ತೆರಿಗೆ ನೀಡುತ್ತಿದ್ದು ಅದನ್ನು ಶೇ. 5ಕ್ಕೆ ಇಳಿಸಲಾಗಿದೆ.
*ಕಂಪೆನಿಗಳ ಮೇಲೆ ವಿಧಿಸುವ ಕನಿಷ್ಠ ಪರ್ಯಾಯ ತೆರಿಗೆಯನ್ನು ಶೇ. 18 ರಿಂದ ಶೇ. 18.5ಕ್ಕೆ ಹೆಚ್ಚಿಸಲಾಗಿದೆ.
*ವಿದೇಶೀ ವಿತ್ತೀಯ ಸಂಸ್ಥೆಗಳು ಸ್ಥಳೀಯ ಮ್ಯುಚುಯಲ್ ಫಂಡ್ಗಳಲ್ಲಿ ಹಣ ತೊಡಗಿಸಲು ಅನುಮತಿಸಲಾಗಿದೆ.
*ಶಿಪ್ಪಿಂಗ್ ಕಂಪೆನಿಗಳು ತಮ್ಮ ಅವಶ್ಯಕತೆಯ ಬಿಡಿ-ಭಾಗಗಳನ್ನು ಶುಲ್ಕರಹಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ.
* ಬ್ರಾಂಡೆಡ್ ಗಾರ್ಮೆಂಟ್ಸ್ಗಳ ಮೇಲೆ ಅಬ್ಕಾರಿ ಶುಲ್ಕ ವಿಧಿಸಲಾಗಿರುವುದು. ಇವುಗಳು ದುಬಾರಿಯಾಗಲಿದೆ.
* ಆರೋಗ್ಯ ವಲಯದ ಮೀಸಲಾತಿ ಮಿತ್ತವನ್ನು ಶೇ. 20 ರಷ್ಟು ಹೆಚ್ಚಿಸಿರುವುದು. ಆ ವಲಯದ ಕಂಪೆನಿಗಳಿಗೆ ವರದಾನ.
ವಾರದ ಪ್ರಶ್ನೆ
ಇಂದಿನ ದಿನಗಳಲ್ಲಿ ಷೇರುಗಳು ಹೆಚ್ಚಿನ ಏರಿಳಿತ ವೇಗವಾಗಿ ಕಾಣುವುದರಿಂದ ರೀಟೇಲ್ ಇನ್ವೆಸ್ಟರ್ಸ್ಗೆ ನಿರ್ಧರಿಸುವುದು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಯಾವ ಮಾರ್ಗ ಸೂಕ್ತವೆಂಬುದನ್ನು ದಯವಿಟ್ಟು ತಿಳಿಸಿರಿ.?
ಉತ್ತರ: ಷೇರುಪೇಟೆಯಲ್ಲಿ ಹೆಚ್ಚಿನ ಪ್ರಭಾವ, ವಿಶೇಷವಾಗಿ ಜಾಗತೀಕರಣದ ನಂತರ ವಿದೇಶೀ ವಿತ್ತೀಯ ಸಂಸ್ಥೆಗಳ ಮತ್ತು ಸ್ಥಳೀಯ ವಿತ್ತೀಯ ಸಂಸ್ಥೆಗಳ ಚಟುವಟಿಕೆಗಳಿಂದಾಗುತ್ತಿದ್ದು ಜಾಗತಿಕ ಮಟ್ಟದ ಬೆಳವಣಿಗೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುತ್ತದೆ. ಈಗಿನ ಸುದ್ದಿಗಳ ಪ್ರಭಾವದ ತೀವ್ರತೆಯನ್ನು ಇತ್ತೀಚಿನ ದಿನಗಳಲ್ಲಿ ಎಂಫೆಸಿಸ್ ಲಿಮಿಟೆಡ್, ಅರವಿಂದೋ ಫಾರ್ಮ, ಆರ್ಕಿಡ್ ಕೆಮಿಕಲ್ಸ್, ಮಹೀಂದ್ರ ಅಂಡ್ ಮಹೀಂದ್ರಗಳ, ಷೇರಿನ ದರಗಳು ಕುಸಿತದಿಂದ ಅರಿಯಬಹುದಾಗಿದೆ. ಕುಸಿತಕ್ಕೆ ಕಾರಣಗಳು ವೈವಿಧ್ಯಮಯವಾಗಿದೆ ಒಂದರಲ್ಲಿ ಕಾರ್ಪೊರೇಟ್ ನೀತಿ ಪಾಲನೆಯಲ್ಲಿನ ಲೋಪವೆಂದರೆ, ಮತ್ತೊಂದರಲ್ಲಿ ಅಮೆರಿಕಾದ ನಿಯಂತ್ರಕರ ಕ್ರಮ ಕಾರಣವಾಯಿತು.
ಒಂದರಲ್ಲಿ ಹೂಡಿಕೆದಾರರ ಭಾರಿ ಮಾರಾಟದ ಕಾರಣ ಕುಸಿತ ಕಂಡರೆ ಮತ್ತೊಂದು ಬಜೆಟ್ನಲ್ಲಿ ವಿಧಿಸಬಹುದಾದ ಡ್ಯುಟಿಯ ಹೆದರಿಕೆ ಕಾರಣವಾಗಿತ್ತು. ಅಂದರೆ ಪ್ರತಿಯೊಂದು ಕಂಪೆನಿಯು ಒಂದಲ್ಲ ಒಂದು ರೀತಿ ಸುದ್ದಿಯ ಕಾರಣ ತಮ್ಮ ಷೇರಿನ ಬೆಲೆಗಳ ಏರಿಳಿತಕ್ಕೆ ಗುರಿಯಾಗುತ್ತವೆ. ಸಣ್ಣ ಹೂಡಿಕೆದಾರರು ಇಂತಹ ಭಾರಿ ಕುಸಿತ ಕಂಡಂತಹ ಉತ್ತಮ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಕ್ಷೇಮ. ಕಳೆದ ಒಂದು ತಿಂಗಳಲ್ಲಿ ಲಾರ್ಸನ್ ಅಂಡ್ ಟೋಬ್ರೊದಂತಹ ಕಂಪೆನಿಯು ರೂ 15000ರ ರೊಳಗೆ ಎರಡು ಮೂರು ಭಾರಿ ಕುಸಿದು ರೂ 1670.80ರವರೆಗೂ ಏರಿಕೆ ಕಂಡು ರೂ 1615.20ರ ಸಮೀಪದಲ್ಲಿದೆ.
ಇಂತಹ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡ ಷೇರು ಆಕರ್ಷಕ ಏರಿಕೆ ಕಂಡಾಗ ಮಾರಾಟ ಮಾಡಿ ನಿರ್ಗಮಿಸುವುದು ಮತ್ತೊಂದು ಅವಕಾಶಕ್ಕೆ ದಾರಿಯಾಗುತ್ತದೆ. ಅಲ್ಪ ಮೌಲ್ಯದ ಷೇರುಗಳಿಂದ ದೂರವಿರುವುದು ಸೂಕ್ತ. ಮಧ್ಯಮ ಶ್ರೇಣಿಯ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕಗಳು ನವೆಂಬರ್ ಎರಡನೇ ವಾರದಲ್ಲಿ 52 ವಾರಗಳ ಗರಿಷ್ಠ ಮಟ್ಟ ತಲುಪಿ ಫೆಬ್ರುವರಿ ಎರಡನೇ ವಾರದಲ್ಲಿ 52 ವಾರಗಳ ಕನಿಷ್ಟ ಮಟ್ಟಕ್ಕೆ ಕುಸಿದಿರುವುದು ಈ ವಲಯದ ಷೇರುಗಳ ಬೆಲೆಗಳ ಏರಿಳಿತ ಎಷ್ಟು ಕೃತಕಮಯವೆಂಬುದನ್ನು ಬಿಂಬಿಸುತ್ತದೆ.
ಹಣ ಕೈಲಿದ್ದರೆ ಗಾಬರಿ, ಅವಸರ ಬೇಡ, ಅವಕಾಶಕ್ಕಾಗಿ ಕಾದು ವಿನಿಯೋಗಿಸಿರಿ. ಒಂದು ಮಾತು ಸದಾ ನೆನಪಿರಲಿ ಚಟುವಟಿಕೆಯ ಭರದಲ್ಲಿ ಅಪಾಯದ ಅರಿವನ್ನು ಮರೆಯದಿರಿ. ವಿಶ್ಲೇಷಣೆಗಳನ್ನು ಆಧರಿಸಿ ಹೂಡಿಕೆ ಮಾಡುವಾಗ ಅದರ ಸತ್ಯಾಸತ್ಯತೆ ಬಗ್ಗೆ ಅರಿತು ನಿರ್ಧರಿಸಿರಿ. ಶುಭವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.