ADVERTISEMENT

ಮತ್ತೆ ಹೂಡಿಕೆ ಹಿಂತೆಗೆತಕ್ಕೆ ಚಿಂತನೆ: ರೂ.30000 ಕೋಟಿ ಸಂಗ್ರಹ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ನವದೆಹಲಿ(ಪಿಟಿಐ): ದೊಡ್ಡ ಮೊತ್ತದ ಹಣ ಸಂಗ್ರಹ ನಿರೀಕ್ಷೆಯಲ್ಲಿ ಮತ್ತೆ ಷೇರುಪೇಟೆಯತ್ತ ಕಣ್ಣುನೆಟ್ಟಿರುವ ಕೇಂದ್ರ ಸರ್ಕಾರ, ಮತ್ತೊಂದು ಸುತ್ತಿನ ಹೂಡಿಕೆ ಹಿಂತೆಗೆತ ಕ್ರಮಕ್ಕೆ ಚಿಂತನೆ ನಡೆಸಿದೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷ 30 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನೂ ಹೊಂದಿದೆ.

ಸದ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಸಾಕಷ್ಟು ಲಾಭವನ್ನೂ ತಂದುಕೊಡುತ್ತಿರುವ ಸರ್ಕಾರಿ ಸ್ವಾಮ್ಯದ ಕೆಲವು ದೊಡ್ಡ ಸಂಸ್ಥೆಗಳಲ್ಲಿನ ತನ್ನ ಷೇರು ಪಾಲನ್ನು ಷೇರುಪೇಟೆಯಲ್ಲಿ ಮಾರಾಟಕ್ಕಿಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ತೈಲ, ಇಂಧನ, ಕಲ್ಲಿದ್ದಲು ಮತ್ತು ಉಕ್ಕು ಕ್ಷೇತ್ರದಲ್ಲಿನ ಸರ್ಕಾರಿ ಸ್ವಾಮ್ಯದ ಕಂಪನಿಗಳು ಉತ್ತಮ ಲಾಭ ತಂದುಕೊಡುತ್ತಿದ್ದು, ಈ ಸಂಸ್ಥೆಗಳಲ್ಲಿನ ಸರ್ಕಾರದ ಷೇರುಗಳು ಸದ್ಯದಲ್ಲಿಯೇ ಪೇಟೆಯಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆ ಇದೆ.

`ಹೂಡಿಕೆ ಹಿಂತೆಗೆತ ಪ್ರಸ್ತಾವನೆ ಸದ್ಯಕ್ಕಿನ್ನೂ ಕಲ್ಪನೆ ಹಂತದಲ್ಲಿಯೇ ಇದೆ. ಹೂಡಿಕೆ ಹಿಂತೆಗೆತ ಇಲಾಖೆ ಮುಂದಿನ ವಾರ ಸಭೆ ಸೇರಲಿದ್ದು, ಈ ಬಗ್ಗೆ ಚರ್ಚಿಸಲಿದೆ. ನಂತರ ಕಲ್ಲಿದ್ದಲು, ಪೆಟ್ರೋಲಿಯಂ ಸೇರಿದಂತೆ ಸಂಬಂಧಿಸಿದ ಇತರೆ ಸಚಿವಾಲಯಗಳ ಗಮನಕ್ಕೂ ಈ ವಿಚಾರವನ್ನು ತರಲಾಗುವುದು. ಅಲ್ಲಿ ಈ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ~ ಎಂದು ಹೂಡಿಕೆ ಹಿಂತೆಗೆತ ಇಲಾಖೆ ಮೂಲಗಳು ತಿಳಿಸಿವೆ.

`ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆ~ಗಳಲ್ಲಿ 220 ಕಂಪನಿಗಳಲ್ಲಿನ ಸರ್ಕಾರದ ಬಂಡವಾಳವನ್ನು ಹಿಂತೆಗೆಯುವ ಮೂಲಕ 2011-12ನೇ ಸಾಲಿನಲ್ಲಿ ಭಾರಿ ಹಣ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಕಳೆದ ಹಣಕಾಸು ವರ್ಷದಲ್ಲಿ ರೂ. 14,000 ಕೋಟಿಯನ್ನು ಮಾತ್ರ ಷೇರುಪೇಟೆಯಿಂದ ಪಡೆಯಲು ಸಾಧ್ಯವಾಯಿತು. ಈ ಬಾರಿ ಮತ್ತೊಂದು ಸುತ್ತಿನ ಹೂಡಿಕೆ ಹಿಂತೆಗೆತ ಕ್ರಮದ ಮೂಲಕ ರೂ. 30,000 ಸಾವಿರ ಕೋಟಿ ಪಡೆಯುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.