ADVERTISEMENT

ಮಾನೇಸರ್ ಗಲಭೆ: ರಾಜ್ಯಸಭೆಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ) : ಮಾರುತಿ ಸುಜುಕಿ ಇಂಡಿಯದ  ನೌಕರರನ್ನು ಬೆಂಬಲಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ನಕ್ಸಲೀಯರ ಪರವಾದ ಕೆಲವು ಸಂಘಟನೆಗಳವರು ಮತ್ತು ನಕ್ಸಲೀಯರ ಬಗ್ಗೆ ಮೃದುಧೋರಣೆ ಉಳ್ಳವರು ಇದ್ದರು ಎಂದು ಗೃಹ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಬುಧವಾರ ತಿಳಿಸಿದರು.

ಈ ಸಂಘಟನೆಗಳು ಬೆಂಬಲಿಸುತ್ತಿರುವ ಕಾರ್ಮಿಕರಲ್ಲಿ ಕೆಲವರು ಮಾನೇಸರ್ ಘಟಕದಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ಬಲಿ ತೆಗೆದುಕೊಂಡ ಜುಲೈ 18ರ ಕಾರ್ಮಿಕ ಗಲಭೆಯ ಮುಂಚೂಣಿಯಲ್ಲಿದ್ದರು ಎಂದು ಸಚಿವರು ಸದನಕ್ಕೆ ವಿವರಿಸಿದರು.

ಜುಲೈ 18ರ ಗಲಭೆ ನಂತರ ಕಾರ್ಮಿಕರನ್ನು ಬೆಂಬಲಿಸಿದ ನಡೆದ ಪ್ರತಿಭಟನೆಯನ್ನು ನಿಷೇಧಿತ ಸಿಪಿಐ-ಎಂನ ಮುನ್ನೆಲೆಯ ಸಂಘಟನೆಗಳಾದ ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯ, ಮೆಹಂತ್ಕಷ್ ಮಜ್ದೂರ್ ಮೋರ್ಚಾ ಮತ್ತು ಕಮಿಟಿ ಫಾರ್ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸ   ನರ್ಸ್  ಸಂಘಟಿಸಿದ್ದವು ಎಂದು ಸಿಂಗ್ ಮಾಹಿತಿ ನೀಡಿದರು.

ಮಾನೇಸರ್ ಘಟಕದಲ್ಲಿನ ಜುಲೈ 18ರ ಗಲಭೆಯ ಹಿಂದೆ ತೀವ್ರವಾದಿ ಎಡಪಂಥೀಯರ ಕೈವಾಡವಿದೆ ಎಂಬುದನ್ನು ಗುಪ್ತಚರ ಇಲಾಖೆಯೇನೂ ಖಚಿತಪಡಿಸಿಲ್ಲ ಎಂದೂ ಸಚಿವರ ಸ್ಪಷ್ಟಪಡಿಸಿದರು.

ಆದರೆ, ದೆಹಲಿ ವ್ಯಾಪ್ತಿಯಲ್ಲಿನ ಕಾರ್ಮಿಕ ಸಂಘಟನೆಗಳ ಮೇಲೆ ಹಿಡಿತ ಸಾಧಿಸಲು ಗಲಭೆಯ ಸಂದರ್ಭವನ್ನು ಬಳಸಿಕೊಳ್ಳುವ ಯತ್ನವೂ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.