ADVERTISEMENT

ಮಾನೇಸರ ಘಟಕ ಕಾರ್ಮಿಕ ಗಲಭೆ:ಮಾರುತಿ:ಶೀಘ್ರವೇ ಸಿಎಂ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಚಂಡೀಗಢ(ಪಿಟಿಐ): ಹರಿಯಾಣ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಅವರು `ಮಾರುತಿ ಸುಜುಕಿ~ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಿಂಜೊ ನಕಾನಿಶಿ ಅವರ ಜತೆ ಸಭೆ ನಡೆಸಿ, ಮಾನೇಸರ ಘಟಕದಲ್ಲಿನ ಜುಲೈ 18ರ ಕಾರ್ಮಿಕ ಘರ್ಷಣೆ, ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಿ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ನೆರವಾಗಲಿದ್ದಾರೆ ಎಂದು ಹರಿಯಾಣ ಕೈಗಾರಿಕಾ ಇಲಾಖೆ ಹೇಳಿದೆ.

ಮಾನೇಸರ ಘಟಕದಲ್ಲಿನ ಬೆಳವಣಿಗೆಗಳಿಂದಾಗಿ ಮುಖ್ಯಮಂತ್ರಿ  ಸಹ ಕಳವಳಗೊಂಡಿದ್ದಾರೆ. ಅವರು ನಕಾನಿಶಿ ಸೇರಿದಂತೆ ಮಾರುತಿ ಸುಜುಕಿ ಇಂಡಿಯ ಕಂಪೆನಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುವರು ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ಶನಿವಾರ ಸಂಜೆ ಸುದ್ದಿಸಂಸ್ಥೆಗೆ ತಿಳಿಸಿದರು.
ಆದರೆ, ಸಭೆಯ ದಿನ ಮತ್ತು ಸಮಯದ ಕುರಿತು ಅವರು ಮಾಹಿತಿ ನೀಡಲಿಲ್ಲ.

ತಪ್ಪು ಸಂದೇಶ: ಮೊಯ್ಲಿ
ಬೆಂಗಳೂರು(ಪಿಟಿಐ): ಮಾರುತಿ ಸುಜುಕಿ ಇಂಡಿಯದ ಮಾನೇಸರ ಘಟಕದಲ್ಲಿನ ಘರ್ಷಣೆ ಜಾಗತಿಕ ಕೈಗಾರಿಕಾ ವಲಯಕ್ಕೆ ತಪ್ಪು ಸಂದೇಶ ರವಾನಿಸುವಂತಹುದಾಗಿದೆ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಇಲ್ಲಿ ಶನಿವಾರ ಕಳವಳ ವ್ಯಕ್ತಪಡಿಸಿದರು.

ಆ ಕಾರ್ಮಿಕ ಗಲಭೆಯನ್ನು ಯಾವುದೇ ರೀತಿಯಲ್ಲಿಯೂ ಸಮರ್ಥಿಸಿಕೊಳ್ಳಲಾಗದು ಎಂದ ಅವರು, `ಅಲ್ಲಿ ಕಾನೂನಿನ ಆಡಳಿತವೇ ಇದೆ ಎಂಬುದನ್ನು ಹರ್ಯಾಣ ಸರ್ಕಾರ ಸ್ಪಷ್ಟವಾಗಿ ತೋರಿಸಿಕೊಡಬೇಕಿದೆ~ ಎಂದು ಗಮನ ಸೆಳೆದರು.ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಗೆ, `ಕಾನೂನು-ಸುರಕ್ಷತೆ ವಿಚಾರವೇನಿದ್ದರೂ ರಾಜ್ಯ ಸರ್ಕಾರದ ಜವಾಬ್ದಾರಿ~ ಎಂದು ಉತ್ತರಿಸಿದರು.

ಗ್ರಾಮಸ್ಥರ ಬೆಂಬಲ
ಮಾನೇಸರ (ಪಿಟಿಐ): ಮಾರುತಿ ಸುಜುಕಿಯ ಮಾನೇಸರ ತಯಾರಿಕೆ ಘಟಕದ ಸುತ್ತಮುತ್ತಲ ಪ್ರದೇಶಗಳಲ್ಲಿರುವ 10ಕ್ಕೂ ಹೆಚ್ಚು ಗ್ರಾಮಗಳು  ಕಂಪೆನಿಯ ಆವರಣದಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದು, ಸಂಸ್ಥೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿವೆ.

ಇಲ್ಲಿಗೆ ಸಮೀಪದ ಡಾನ ಗ್ರಾಮದ ಮುಖಂಡರೊಬ್ಬರು ಕಂಪೆನಿಯ ಅಧಿಕಾರಿಗಳನ್ನು ಶನಿವಾರ ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ.`ಘಟಕದ ಸುತ್ತಮುತ್ತಲಿನ ಗ್ರಾಮಗಳು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಮಾರುತಿ ಸುಜುಕಿ ಇಂಡಿಯದ ಮೇಲೆ ಅವಲಂಬಿತವಾಗಿವೆ. ಈ ಘಟಕ ಮಾನೇಸರದಲ್ಲೇ ಉಳಿಯಬೇಕು. ಬೇರೆ ಕಡೆಗೆ ಸ್ಥಳಾಂತರಗೊಳ್ಳಲು ಅವಕಾಶ ನೀಡುವುದಿಲ್ಲ. ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.