ADVERTISEMENT

ರಾಮನಗರ: ಮಾವು ಇಳುವರಿ ಶೇ 50 ಕುಸಿತ

​ಪ್ರಜಾವಾಣಿ ವಾರ್ತೆ
Published 7 ಮೇ 2014, 19:30 IST
Last Updated 7 ಮೇ 2014, 19:30 IST
ಸಾಂದರ್ಭಿಕ ಚಿತ್ರ/ ಎಂ ಆರ್ ಮಂಜುನಾಥ
ಸಾಂದರ್ಭಿಕ ಚಿತ್ರ/ ಎಂ ಆರ್ ಮಂಜುನಾಥ   

ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಯಾದ ಮಾವಿಗೆ ಈ ಬಾರಿ ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯ ತೀವ್ರವಾಗಿ ಕಾಡಿದ್ದು, ಇಳುವರಿ ಶೇ 50ರಷ್ಟು ಕುಸಿದಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ವಿ.ವೆಂಕಟೇಶ್‌ ಮತ್ತು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಎಚ್‌.ಎನ್‌.ಹೇಮಾ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾ­ಡಿದ ಅವರು, ಜಿಲ್ಲೆಯಲ್ಲಿ 23,995 ಹೆಕ್ಟೇರ್‌ಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಬಾದಾಮಿ, ರಸಪುರಿ, ಸೇಂದೂರ, ತೋತಾಪುರಿ, ಮಲ್ಲಿಕಾ ತಳಿ ಹೆಚ್ಚಿವೆ. ಈ ಬಾರಿ ಆರಂಭದಲ್ಲಿ ಮಾವು ಹೂವಾಗಿದ್ದನ್ನು ಗಮನಿಸಿದರೆ ಅಂದಾಜು ಮೂರು ಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ ಕೇವಲ 1.50 ಲಕ್ಷ ಟನ್‌ ಬೆಳೆ ಬಂದಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಬಹುತೇಕ ಭಾಗದಲ್ಲಿ ಮಾವು ಬೆಳೆಯಲ್ಲಿ ಕುಸಿತವಾಗಿದೆ. ಹಾಗಾಗಿ ಬೆಲೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದ್ದು, ರೈತರಿಗೆ ಉತ್ತಮ ಬೆಲೆ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ ಎಂದರು.ಮಳೆ ಕೊರತೆ, ಬತ್ತಿ ಹೋಗಿರುವ ಅಂತರ್ಜಲ, ಹವಾ­ಮಾನ ವೈಪರೀತ್ಯ­ದಿಂದ ಜಿಲ್ಲೆಯಲ್ಲಿ ಶೇ 10ರಷ್ಟು ಮಾವಿನ ಗಿಡಗಳು ನಾಶವಾಗಿವೆ. ರೈತರು ಬೆಳೆ ಹಾಗೂ ಗಿಡಗಳಿಗೆ ವಿಮೆ ಮಾಡಿಸಿದ್ದರೆ ಅವರ ನಷ್ಟದ ಪ್ರಮಾಣ ತಗ್ಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.