ಆನಂದ್ (ಪಿಟಿಐ): ದೇಶದಲ್ಲಿ ಕ್ಷೀರೋತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈನುಗಾರಿಕೆ ಕ್ಷೇತ್ರವನ್ನು ಇನ್ನಷ್ಟು ಪ್ರಗತಿಪಥದಲ್ಲಿ ಕೊಂಡೊಯ್ಯುವ ಸಲುವಾಗಿ ರೂಪಿಸಲಾದ `ರಾಷ್ಟ್ರೀಯ ಹೈನುಗಾರಿಕಾ ಯೋಜನೆ~ಗೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಗುಜರಾತ್ನ ಆನಂದ್ನಲ್ಲಿ ಗುರುವಾರ ಚಾಲನೆ ನೀಡಿದರು.
ಎನ್ಡಿಡಿಬಿ ಕಚೇರಿಯಲ್ಲಿ ಯೋಜನೆ ಉದ್ಘಾಟನೆ ವೇಳೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೂ ಹಾಜರಿದ್ದರು.
2010-11ರಲ್ಲಿ ದೇಶದಲ್ಲಿ 12.28 ಕೋಟಿ ಟನ್ನಷ್ಟು ಕ್ಷೀರೋತ್ಪನ್ನಗಳಿಗೆ ಬೇಡಿಕೆ ಇದ್ದಿತು. ಇದು 2021-22ರ ವೇಳೆಗೆ 20 ಕೋಟಿ ಟನ್ಗೆ ಹೆಚ್ಚಲಿದೆ. ಈ ನಿರೀಕ್ಷಿತ ಬೇಡಿಕೆ ಪೂರೈಸಬೇಕಾದರೆ ಪ್ರತಿವರ್ಷವೂ ನಿರ್ದಿಷ್ಟ ಪ್ರಮಾಣದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲೇಬೇಕು. ಹಾಗಾಗಿಯೇ `ಮಿಷನ್ ಮಿಲ್ಕ್~ ಹೆಸರಿನಲ್ಲಿ ಹೊಸದಾಗಿ ರಾಷ್ಟ್ರೀಯ ಹೈನುಗಾರಿಕೆ ಯೋಜನೆ ರೂಪಿಸಲಾಗಿದೆ ಎಂದು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ(ಎನ್ಡಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಡಿಡಿಬಿಯ 2242 ಕೋಟಿ ಮೊತ್ತದ ಮೊದಲ ಹಂತದ ಹೈನುಗಾರಿಕಾ ಅಭಿವೃದ್ಧಿ ಯೋಜನೆ ಮುಂದಿನ ಆರು ವರ್ಷಗಳಲ್ಲಿ ಕರ್ನಾಟಕ, ಸೇರಿದಂತೆ 14 ಪ್ರಮುಖ ಹೈನುಗಾರಿಕಾ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುವಂತೆ ಯೋಜಿಸಲಾಗಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಗೆ ವಿಶ್ವಬ್ಯಾಂಕ್ನ ನೆರವೂ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.