ನವದೆಹಲಿ: ಜಿಎಸ್ಟಿಯಲ್ಲಿ ಲಾಭಕೋರತನ ನಿಯಮದಡಿ ಸಂಗ್ರಹಿಸುವ ದಂಡವು ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯಗಳಿಗೆ ಸಮಾನ ಹಂಚಿಕೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವುದನ್ನು ಪತ್ತೆ ಮಾಡಲು ಲಾಭಕೋರತನ ತಡೆ ಪ್ರಾಧಿಕಾರ ಜಾರಿಗೆ ತರಲಾಗಿದೆ. ಇಂತಹವರಿಗೆ ದಂಡ ವಿಧಿಸುವ, ಪರವಾನಗಿ ರದ್ದು ಪಡಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ.
ಒಂದೊಮ್ಮೆ ತೆರಿಗೆ ಪ್ರಯೋಜನದ ಲಾಭದಿಂದ ಯಾರು ವಂಚಿತರಾಗಿದ್ದಾರೆ ಎನ್ನುವುದನ್ನು ಗುರುತಿಸಲು ಸಾಧ್ಯವಾಗದೇ ಇದ್ದರೆ ನಿರ್ದಿಷ್ಟ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ವರ್ಗಾಯಿಸುವಂತೆ ಪ್ರಾಧಿಕಾರ ಸಲಹೆ ನೀಡಬಹುದು.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಿಎಸ್ಟಿ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಶೇ 50 ರಷ್ಟು ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಹಾಗೂ ಇನ್ನುಳಿದ ಮೊತ್ತವನ್ನು ಸಂಬಂಧಪಟ್ಟ ರಾಜ್ಯವು ಸ್ಥಾಪಿಸಿರುವ ನಿಧಿಗೆ ವರ್ಗಾವಣೆ ಮಾಡಬೇಕು.
ಲಾಭಕೋರತನ ತಡೆ ಪ್ರಾಧಿಕಾರ: ಗ್ರಾಹಕರಿಗೆ ವ್ಯವಸ್ಥೆಯ ಬಗ್ಗೆ ಭರವಸೆ ಮೂಡಿಸುವ ಉದ್ದೇಶದಿಂದ ಈ ಪ್ರಾಧಿಕಾರ ರಚನೆ ಮಾಡಲಾಗಿದೆ. ‘ಜಿಎಸ್ಟಿ’ಯಲ್ಲಿ ಕಡಿತ ಮಾಡಲಾದ ತೆರಿಗೆ ದರಗಳನ್ನು ಯಾವುದೇ ಸಂಸ್ಥೆಯು ಬಳಕೆದಾರರಿಗೆ ವರ್ಗಾಯಿಸದೇ ಇದ್ದರೆ ಆ ಬಗ್ಗೆ ಗ್ರಾಹಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.
ಸ್ಥಳೀಯ ದೂರಗಳನ್ನು ಮೊದಲಿಗೆ ರಾಜ್ಯಮಟ್ಟದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದ ದೂರುಗಳನ್ನು ಪ್ರಾಧಿಕಾರದ ‘ಸ್ಥಾಯಿ ಸಮಿತಿ’ಯ ಗಮನಕ್ಕೆ ತರಲಾಗುತ್ತಿದೆ.
ದೂರಿನಲ್ಲಿ ಸತ್ಯಾಂಶ ಇರುವುದು ಕಂಡು ಬಂದರೆ ಈ ಸಮಿತಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸುರಕ್ಷತಾ ಮಹಾ ನಿರ್ದೆಶಕರಿಗೆ (ಡಿಜಿಎಸ್) ಶಿಫಾರಸು ಮಾಡಲಿವೆ. ಸುರಕ್ಷತಾ ಮಹಾ ನಿರ್ದೇಶಕರು ತನಿಖೆ ಪೂರ್ಣಗೊಳಿಸಿ ಮೂರು ತಿಂಗಳಲ್ಲಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.