ADVERTISEMENT

ಲೆಕ್ಕಪರಿಶೋಧಕರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 12:20 IST
Last Updated 19 ಡಿಸೆಂಬರ್ 2010, 12:20 IST

ಬೆಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಆಶ್ರಯದಲ್ಲಿ ಬೆಂಗಳೂರು ಶಾಖೆ (ಎಸ್‌ಐಆರ್‌ಸಿ) ಆಯೋಜಿಸಿರುವ ಎರಡು ದಿನಗಳ ‘ಸಿಪಿಇ-ಜ್ಞಾನಾರ್ಜನೆ’ ಸಮ್ಮೇಳನವನ್ನು ಶನಿವಾರ ವಿಧಾನ ಪರಿಷತ್ ಅಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಇಲ್ಲಿ ಉದ್ಘಾಟಿಸಿದರು. ‘ಲೆಕ್ಕ ಪರಿಶೋಧನೆ ಕ್ಷೇತ್ರ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಮತ್ತು ಮಹತ್ವವನ್ನು ಪಡೆದುಕೊಂಡಿದೆ. ವೃತ್ತಿನಿರತರು ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳಬೇಕು. ಜ್ಞಾನಾರ್ಜನೆಗೆ ಎಂದೂ ಕೊನೆಯಿಲ್ಲ’ ಎಂದು ಅವರು ಹೇಳಿದರು.

‘ಲೆಕ್ಕಪರಿಶೋಧಕರು ಸಮಾಜದ ಪ್ರಮುಖ ಅಂಗ. ದೇಶದ ಆರ್ಥಿಕ ನಿರ್ವಹಣೆಯಲ್ಲಿ ಅವರ ಪಾತ್ರ ದೊಡ್ಡದು. ಎಲ್ಲಾ ವೃತ್ತಿಗಳಿಗೂ ನಿರಂತರ ಕಲಿಕೆ ಅಗತ್ಯ. ಸಂವಾದ, ಸಮ್ಮೇಳನ, ಓದಿನ ಮೂಲಕ ಲೆಕ್ಕಪರಿಶೋಧಕರು ಹೊಸ ವಿಷಯಗಳನ್ನು ಕಲಿತುಕೊಳ್ಳಬೇಕು’. ಎಂದು ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಭೆಯ ಉಪ ಸಭಾಪತಿ ಕೆ. ರೆಹಮಾನ್ ಖಾನ್ ಅಭಿಪ್ರಾಯಪಟ್ಟರು.

ಲೆಕ್ಕಪರಿಶೋಧನೆಯ ಮೂಲತತ್ವಗಳು ಹಾಗೂ ಈ ಕ್ಷೇತ್ರದ ವಿವಿಧ ಒಳನೋಟಗಳೊಂದಿಗೆ ಡಿಸೆಂಬರ್ 18 ಮತ್ತು 19ರಂದು ಎರಡು ದಿನಗಳ ಸಮ್ಮೇಳನ ನಡೆಯಲಿದೆ. ಸರಕು ಮತ್ತು ಸೇವಾ ತೆರಿಗೆ, ‘ಟಿಡಿಎಸ್’ ವಿದೇಶಿ ವಿನಿಮಯ, ಕಾರ್ಮಿಕ ಕಾನೂನು ಇತ್ಯಾದಿ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ನಡೆಯಲಿದೆ.ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಎಸ್‌ಐಆರ್‌ಸಿ ಬೆಂಗಳೂರು ಶಾಖೆಯ ಅಧ್ಯಕ್ಷ ಎಚ್. ಶಂಭು ಶರ್ಮಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.