ನವದೆಹಲಿ: ಜಾಗತಿಕ ವಾಣಿಜ್ಯ ಸಮರ ಆರಂಭವಾಗುವ ಸಾಧ್ಯತೆ ಇದ್ದು ಅದರ ತೀವ್ರತೆಯನ್ನು ತಗ್ಗಿಸಲು ಭಾರತ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಹೇಳಿದೆ.
ಅಮೆರಿಕ ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಯಿಂದ ಜಾಗತಿಕ ವಾಣಿಜ್ಯ ಸಮರ ಆರಂಭವಾಗುವ ಆತಂಕ ಮೂಡಿದೆ. ವಿಶ್ವ ವ್ಯಾಪಾರ ಸಂಘಟನೆಯನ್ನು (ಡಬ್ಲ್ಯುಟಿಒ) ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಹಾಗೂ ಬಹುಪಕ್ಷೀಯ ಸಂಸ್ಥೆಗಳನ್ನು ಬಲಿಷ್ಠಗೊಳಿಸುವ ಅಗತ್ಯ ಈಗ ಹೆಚ್ಚಿದೆ.
‘ಅಮೆರಿಕವು ‘ಡಬ್ಲ್ಯುಟಿಒ’ವನ್ನು ಗುರಿಯಾಗಿಸಿಕೊಂಡಿರುವುದು ಹಾಗೂ ಚೀನಾದಿಂದ ಆಮದಾಗುವ ಸರಕುಗಳಿಗೆ ಗರಿಷ್ಠ ತೆರಿಗೆ ವಿಧಿಸಲು ಮುಂದಾಗಿದೆ. ಇಂತಹ ಸವಾಲುಗಳನ್ನು ಎದುರಿಸಲು ದೇಶಗಳು ಸೇಡಿನ ಕ್ರಮಗಳ ಬದಲಿಗೆ ಹೊಸ ರೀತಿಯಲ್ಲಿ ಚಿಂತನೆ ನಡೆಸಬೇಕಿದೆ’ ಎಂದು ಡಬ್ಲ್ಯುಟಿಒದ ಪ್ರಧಾನ ನಿರ್ದೇಶಕ ರಾಬರ್ಟ್ ಅಜೆವೆಡೊ ಅವರು ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ‘ಡಬ್ಲ್ಯುಟಿಒ’ದ ಸಚಿವರ ಮಟ್ಟದ ಅನೌಪಚಾರಿಕ ಸಮ್ಮೇಳನದಲ್ಲಿ ಹೇಳಿದ್ದರು.
‘ವಾಣಿಜ್ಯ ಸಮರದಿಂದ ಜಾಗತಿಕ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಸಮರದ ಉಪಶಮನಕ್ಕೆ ಎಲ್ಲಾ ದೇಶಗಳನ್ನೂ ಒಗ್ಗೂಡಿಸಿ ಮಾರ್ಗದರ್ಶನ ಮಾಡುವ ಮಹತ್ವದ ಪಾತ್ರವನ್ನು ಭಾರತ ನಿರ್ವಹಿಸಬೇಕಿದೆ’ ಎಂದು ‘ಫಿಕ್ಕಿ’ ಅಧ್ಯಕ್ಷ ರಷೇಷ್ ಷಾ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದಲ್ಲಿ ಆಮದು ಸುಂಕ ವಿಧಿಸಿರುವುದಕ್ಕೆ ಪ್ರತೀಕಾರಾರ್ಥ ಚೀನಾ ಕೂಡ ಅಮೆರಿಕದ ಉತ್ಪನ್ನಗಳಿಗೆ ಗರಿಷ್ಠ ದರದ ಆಮದು ಸುಂಕ ವಿಧಿಸಿದೆ. ಇದು ವಾಣಿಜ್ಯ ಸಮರಕ್ಕೆ ಎಡೆಮಾಡಿಕೊಡಲಿದೆ ಎನ್ನುವ ಭೀತಿ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.