ADVERTISEMENT

ಶಿವಮೊಗ್ಗದಲ್ಲಿ ಅಡಿಕೆ ವಹಿವಾಟು ಮತ್ತೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಶಿವಮೊಗ್ಗ: ಕೆಲ ದಿನಗಳಿಂದ ಚೇತರಿಕೆ ಕಂಡಿದ್ದ ಇಲ್ಲಿಯ ಅಡಿಕೆ ಮಾರುಕಟ್ಟೆಯಲ್ಲಿ ಸೋಮವಾರ ವಹಿವಾಟು ಮತ್ತೆ ಸ್ಥಗಿತಗೊಂಡಿದೆ. ಗುಟ್ಕಾ ಪ್ಲಾಸ್ಟಿಕ್ ಪ್ಯಾಕೆಟ್ ನಿಷೇಧಕ್ಕೆ ಸುಪ್ರೀಂಕೋರ್ಟ್ ಮಾರ್ಚ್ 1ರ ಗಡುವು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ವಹಿವಾಟು ಅನಿರ್ದಿಷ್ಟಾವಧಿ ಸ್ಥಗಿತಗೊಂಡಿದೆ. ಪ್ಲಾಸ್ಟಿಕ್ ಪ್ಯಾಕೆಟ್ ನಿಷೇಧ ಆದೇಶ ಜಾರಿಗೆ ಬರುವ ಮುನ್ನಾದಿನವೇ ವರ್ತಕರು ವಹಿವಾಟು ಸ್ಥಗಿತಗೊಳಿಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು.

ಸೋಮವಾರ ಯಾವ ವರ್ತಕರೂ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಇದರಿಂದ ಇಡೀ ದಿನ ವಹಿವಾಟು ಸ್ಥಗಿತಗೊಂಡಿತ್ತು.ಈ ಸಂಬಂಧ ಮೂರ್ನಾಲ್ಕು ದಿನಗಳ ಹಿಂದೆಯೇ ಅಡಿಕೆ ಮಂಡಿ ವರ್ತಕರು ಸಭೆ ಸೇರಿ, ಯಾರೊಬ್ಬರೂ ವಹಿವಾಟಿನಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಧರಿಸಿದ್ದರು. ಅದರಂತೆ ಬಹುತೇಕರು ವಹಿವಾಟಿನಲ್ಲಿ ಪಾಲ್ಗೊಳ್ಳದೆ ಪುಸ್ತಕದಲ್ಲಿ ‘ನೋ ಟೆಂಡರ್’ ಎಂದು ಸೂಚಿಸಿದ್ದಾರೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು.

ಎಪಿಎಂಸಿಯಲ್ಲಿ ಸುಮಾರು 200 ಅಡಿಕೆ ಮಂಡಿ ವರ್ತಕರಿದ್ದಾರೆ. ಅವರಾರೂ ಅಡಿಕೆ ಖರೀದಿಸಲು ಮುಂದೆ ಬರುತ್ತಿಲ್ಲ. ‘ಖರೀದಿಸಿದರೂ ಮಾರಾಟ ಮಾಡುವುದು ಯಾರಿಗೆ? ಕೊಳ್ಳುವವರು ಯಾರು? ಎಂದು ಪ್ರಶ್ನಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.ಆದರೂ, ಎರಡು-ಮೂರು ವರ್ತಕರು ವಹಿವಾಟಿನಲ್ಲಿ ಪಾಲ್ಗೊಂಡಿದ್ದರೂ ದರ ತುಂಬಾ ಕಡಿಮೆ ಇದೆ. ಮ್ಯಾಮ್‌ಕೋಸ್ ಮತ್ತಿತರ ಅಡಿಕೆ ಸಹಕಾರಿ ಸಂಸ್ಥೆಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಲಿದೆ. ಬಹುಶಃ ಅಲ್ಲಿಯವರೆಗೂ ಮಾರುಕಟ್ಟೆ ಇದೇ ರೀತಿ ಸಾಗಲಿದೆ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.