ಸಿಹಿ ಎಂದರೆ ಬೆಂಕಿ ಕಡ್ಡಿಗಳಿಗೂ ಇಷ್ಟ. ಅದು ಹೇಗೆ ಸಾಧ್ಯ ಎಂದು ಯೋಚಿಸುವಿರಾ. ಒಂದು ಅಗಲವಾದ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಎರಡು ಬೆಂಕಿಕಡ್ಡಿಗಳನ್ನು ತೇಲಿಬಿಡಿ. ಈಗ ಇನ್ನೊಂದು ಬೆಂಕಿಕಡ್ಡಿಯನ್ನು ಯಾವುದಾದರೂ ಸೋಪ್ ಡಿಟರ್ಜೆಂಟ್ ಪೌಡರ್ನಲ್ಲಿ ಅದ್ದಿ ಎರಡು ಬೆಂಕಿಕಡ್ಡಿಗಳ ಮಧ್ಯೆ ನೀರಿಗೆ ತಗಲಿಸಿ. ತಕ್ಷಣ ಎರಡು ಕಡ್ಡಿಗಳು ದೂರಕ್ಕೆ ಸರಿಯುವುದನ್ನು ನೋಡುವಿರಿ.
ಈಗ ಬೇರೊಂದು ಕಡ್ಡಿಯನ್ನು ಸಕ್ಕರೆಯ ದ್ರಾವಣದಲ್ಲಿ ಅದ್ದಿ ಬೆಂಕಿಕಡ್ಡಿಗಳ ಮಧ್ಯೆ ನೀರಿಗೆ ತಗುಲಿಸಿ ಹಿಡಿಯಿರಿ. ಈಗ ಎರಡೂ ಕಡ್ಡಿಗಳು ಪರಸ್ಪರ ಸಮೀಪಕ್ಕೆ ಬರುವುದನ್ನು ನೋಡುವಿರಿ. ಈಗ ಗೊತ್ತಾಯಿತೇ ಬೆಂಕಿಕಡ್ಡಿಗಳಗೂ ಸಿಹಿ ಅಂದರೆ ಪ್ರೀತಿ ಎಂದು. ಇದೊಂದು ವೈಜ್ಞಾನಿಕ ಕ್ರಿಯೆ ಅಷ್ಟೆ.
ದ್ರವದ ಕಣಗಳು ಪರಸ್ಪರ ಒಂದನ್ನೊಂದು ಆಕರ್ಷಿಸುತ್ತವೆ. ಇದರಿಂದ ದ್ರವದ ಮೇಲ್ಭಾಗ ಒಂದು ಎಳೆದು ಹಿಡಿದ ರಬ್ಬರ್ನಂತೆ ವರ್ತಿಸುತ್ತದೆ. ಆದರೆ, ಸೋಪಿನ ದ್ರಾವಣ ತಾಗಿದಾಗ ಕಣಗಳ ಸೆಳೆತವು ಗಣನೀಯವಾಗಿ ಇಳಿಯುವುದರಿಂದ ಬೆಂಕಿಕಡ್ಡಿಗಳು ದೂರ ಹೋಗುತ್ತವೆ. ಅದೇ ರೀತಿ ಸಕ್ಕರೆಯ ದ್ರಾವಣ ತಾಗಿದಾಗ ನೀರಿನ ಕಣಗಳ ಸೆಳೆತವು ಗಣನೀಯವಾಗಿ ಹೆಚ್ಚುವುದರಿಂದ ಬೆಂಕಿಯಕಡ್ಡಿಗಳು ಪರಸ್ಪರ ಹತ್ತಿರಕ್ಕೆ ಬರುವವು.
ದಾರದಿಂದ ಮಂಜುಗಡ್ಡೆ ತೂಗಿಸುವುದು...
ನೀರನ್ನು ಶೂನ್ಯ ಡಿಗ್ರಿಯಲ್ಲಿ ಶೇಖರಿಸಿ ಇಟ್ಟಾಗ ಅದು ಮಂಜುಗಡ್ಡೆಯಾಗಿ ಪರಿವರ್ತನೆಯಾಗುವುದು. ಮಂಜುಗಡ್ಡೆಗೆ ಬಿಸಿ ತಾಗಿದಾಗ ಅದು ಕೂಡಲೇ ನೀರಾಗಿ ಪರಿವರ್ತನೆಗೊಳ್ಳುವುದು.
ಒಂದು ಮಂಜುಗಡ್ಡೆಯ ತುಂಡು ತೆಗೆದುಕೊಳ್ಳಿ. ಅದರ ಮೇಲೆ ಒಂದು ದಾರದ ತುಂಡು ಹಾಕಿ. ಈಗ ಆ ದಾರದ ತುದಿಯನ್ನು ಹಿಡಿದು ಮೇಲೆತ್ತಿದರೆ ಮಂಜುಗಡ್ಡೆಯೂ ದಾರದೊಂದಿಗೆ ಮೇಲೆದ್ದು ತೂಗುವುದು. ಮಂಜುಗಡ್ಡೆಯ ತುಂಡೊಂದು ಕಟ್ಟದೆಯೇ ತೂಗುವುದು. ಇದು ಹೇಗೆ ಸಾಧ್ಯ ಎನ್ನುವೀರಾ.
ಒಂದು ಮಂಜುಗಡ್ಡೆಯ ತುಂಡನ್ನು ಮೇಜಿನ ಮೇಲಿಟ್ಟು ಅದರ ಮೇಲೆ ದಾರವೊಂದು ಹಾದು ಹೋಗುವ ಹಾಗೆ ಇಡಿ. ಈಗ ಯಾರಿಗೂ ಕಾಣದಂತೆ ಆ ದಾರದ ಮೇಲೆ ಸ್ವಲ್ಪವೇ ಸ್ವಲ್ಪ ಉಪ್ಪನ್ನು ಹಾಕಿ ಒಂದೆರಡು ಕ್ಷಣ ಹಾಗೆಯೇ ಬಿಡಿ. ಈಗ ದಾರದ ತುದಿಯನ್ನು ಹಿಡಿದು ಮೇಲೆತ್ತಬಹುದು. ಮಂಜುಗಡ್ಡೆಯು ಉಪ್ಪಿನ ಸಹಾಯದಿಂದ ದಾರಕ್ಕೆ ಅಂಟಿಕೊಳ್ಳುವುದು ಮತ್ತು ಕೆಳಕ್ಕೆ ಬೀಳಲಾರದು.
ಇದಕ್ಕೆ ವೈಜ್ಞಾನಿಕ ಕಾರಣವೊಂದಿದೆ. ಮಂಜುಗಡ್ಡೆಯ ಹೊರ ಪದರು ಕರಗಿ ನೀರಾಗುತ್ತಲೇ ಇರುತ್ತದೆ. ಆದರೆ, ದಾರವನ್ನು ಇರಿಸಿ ಉಪ್ಪು ಸೇರಿಸಿದಾಗ ನೀರು ಉಪ್ಪಿನ ಮಿಶ್ರಣವಾಗುವುದರಿಂದ 0 ಡಿಗ್ರಿಯ ಬದಲಾಗಿ 4 ಡಿಗ್ರಿಯ ಉಷ್ಣತೆಯಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಇದರಿಂದಾಗಿ ಕರಗಿದ ಮಂಜುಗಡ್ಡೆಯ ನೀರು ಪುನಃ ಮಂಜುಗಡ್ಡೆಯಾಗುತ್ತದೆ.
ಈ ಜಾದೂ ಮಾಡುವಾಗ ವಹಿಸಬೇಕಾದ ಜಾಗ್ರತೆ ಎಂದರೆ,ಯಾರಿಗೂ ಕಾಣದಂತೆ ಉಪ್ಪನ್ನು ದಾರದ ಮೇಲೆ ಚಿಮುಕಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.