ADVERTISEMENT

ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:35 IST
Last Updated 15 ಸೆಪ್ಟೆಂಬರ್ 2011, 19:35 IST

ನವದೆಹಲಿ (ಪಿಟಿಐ):  ಸೆಪ್ಟೆಂಬರ್ 3ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವು ಅಲ್ಪ ಇಳಿಕೆ ಕಂಡಿದ್ದು, ಶೇ 9.55ರಿಂದ ಶೇ 9.47ಕ್ಕೆ ಇಳಿಕೆ ಕಂಡಿದೆ.

ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಹಾಲು, ಹಣ್ಣು ತರಕಾರಿ ಇತರೆ ಅಗತ್ಯ ವಸ್ತುಗಳ ದರಗಳು ಶೇ 15ರಷ್ಟು ಹೆಚ್ಚಾಗಿವೆ. ವಾರದಿಂದ ವಾರಕ್ಕೆ ಸರಕುಗಳ ದರಗಳು ಅಲ್ಪ ಇಳಿಕೆ ಕಾಣುತ್ತಿದ್ದರೂ, ವಾರ್ಷಿಕ ಆಧಾರದಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ಗರಿಷ್ಠ ಮಟ್ಟದಲ್ಲಿದೆ. ಈ ಅವಧಿಯಲ್ಲಿ  ಬೇಳೆಕಾಳು ಮತ್ತು ಗೋಧಿ ದರಗಳು ಕ್ರಮವಾಗಿ ಶೇ 2.45 ಮತ್ತು ಶೇ 2ರಷ್ಟು ಕುಸಿತ ಕಂಡಿವೆ.

ಈರುಳ್ಳಿ ಧಾರಣೆ ಶೇ 42ರಷ್ಟು ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಆಲೂಗಡ್ಡೆ ಶೇ 21ರಷ್ಟು ತುಟ್ಟಿಯಾಗಿದೆ.  ಇತರೆ ತರಕಾರಿಗಳು ಶೇ 17 ಮತ್ತು ಹಣ್ಣುಗಳ ಬೆಲೆ ಶೇ 22ರಷ್ಟು ಹೆಚ್ಚಿದೆ. ಹಾಲಿನ ದರ ಶೇ 10ರಷ್ಟು ಏರಿಕೆಯಾಗಿದೆ.

ಸೆಪ್ಟೆಂಬರ್ 3ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಪ್ರಾಥಮಿಕ ಸರಕುಗಳ ಹಣದುಬ್ಬರ ದರ ಶೇ 13.34ರಿಂದ ಶೇ 13.04ಕ್ಕೆ ಇಳಿಕೆ ಕಂಡಿರುವುದು ಗಮನಾರ್ಹ. ಪ್ರಾಥಮಿಕ ಸರಕುಗಳ ಬೆಲೆಗಳು ಒಟ್ಟಾರೆ ಹಣದುಬ್ಬರ ದರಕ್ಕೆ ಶೇ 20ರಷ್ಟು ಕೊಡುಗೆ ನೀಡುತ್ತವೆ.

ಆಗಸ್ಟ್ 20ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಎರಡಂಕಿ ತಲುಪಿ ಶೇ 11.3ರಷ್ಟಾಗಿತ್ತು. ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 2010ರಿಂದ 11 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.