ADVERTISEMENT

ಹರಾಜಿನಲ್ಲಿ ಮತ್ತೆ ಭಾಗಿ: ಯುನಿನಾರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ಬೆಂಗಳೂರು: `2ಜಿ~ ತರಂಗಾಂತರ ಲೈಸನ್ಸ್ ರದ್ದಾದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ಸರ್ಕಾರ ತನಗೆ ಅಗತ್ಯ ಸಹಕಾರ ನೀಡಲಿದೆ ಎಂದು ಮೊಬೈಲ್ ಸೇವಾ ಸಂಸ್ಥೆ ಯುನಿನಾರ್ ಹೇಳಿಕೊಂಡಿದೆ.

ಸದ್ಯದ ಬಿಕ್ಕಟ್ಟಿನಿಂದ ಹೊರ ಬರಲು ಕೇಂದ್ರ ಸರ್ಕಾರವು ಸಂಸ್ಥೆಗೆ ಸೂಕ್ತ ರೀತಿಯಲ್ಲಿ ನೆರವಾಗಲಿದೆ. ದೂರಸಂಪರ್ಕ ಸಚಿವ  ಕಪಿಲ್ ಸಿಬಲ್ ಅವರನ್ನು ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ತಮಗೆ ಈ ಭರವಸೆ ನೀಡಿದ್ದಾರೆ ಎಂದು ಯುನಿನಾರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಟೆಲಿನಾರ್‌ನ ಏಷ್ಯಾ ವಿಭಾಗದ ಮುಖ್ಯಸ್ಥ ಸಿಗ್ವೆ ಬ್ರೆಕ್ಕೆ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೇಂದ್ರ ಸರ್ಕಾರವು ದೋಷಪೂರಿತ ದೂರಸಂಪರ್ಕ ನೀತಿಯನ್ನು (ತರಂಗಾಂತರ ಹಂಚಿಕೆ) ಜಾರಿಗೆ ತಂದಿರುವುದನ್ನು ಕೋರ್ಟ್ ಟೀಕಿಸಿದೆಯೇ ಹೊರತು ಯುನಿನಾರ್ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ತಪ್ಪು ಕಂಡು ಹಿಡಿದಿಲ್ಲ ಎಂದು ಅವರು ನುಡಿದರು.

ಟೆಲಿನಾರ್‌ನ ಹಿತಾಸಕ್ತಿ ರಕ್ಷಿಸಲು ಮತ್ತು ಮೊಬೈಲ್ ಸೇವೆಯು ಅಬಾಧಿತವಾಗಿ ಮುಂದುವರೆಯಲು ಕಾರ್ಯಸಾಧ್ಯವಾದ ಕ್ರಮಗಳನ್ನೆಲ್ಲ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ನಾರ್ವೆಯ ಐ.ಟಿ ಸಚಿವ ರಿಗ್ಮೊರ್ ಆಸ್ರುಡ್ ಅವರಿಗೂ ಭರವಸೆ ನೀಡಿದೆ ಎಂದರು.

ಹರಾಜು ಪ್ರಕ್ರಿಯೆ: ರದ್ದಾದ ಲೈಸನ್ಸ್‌ಗಳಿಗೆ ಪ್ರತಿಯಾಗಿ ಹೊಸದಾಗಿ ನಡೆಯಲಿರುವ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಸಂಸ್ಥೆಯು ಭಾಗಿಯಾಗಲಿದೆ. ಕೋರ್ಟ್ ತೀರ್ಪಿನಿಂದ ತರಂಗಾಂತರ ಕಳೆದುಕೊಂಡ ಮತ್ತು ಹೊಸ ಸಂಸ್ಥೆಗಳಿಗೆ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸರ್ಕಾರ ಅನುಮತಿ ನೀಡಬೇಕು. ಹಳೆಯ ದೈತ್ಯ ಸಂಸ್ಥೆಗಳಿಗೆ ಅನುಮತಿ ನೀಡಬಾರದು ಎನ್ನುವ ಸಂಸ್ಥೆಯ ಒತ್ತಾಯವನ್ನು ಸರ್ಕಾರ ಪಾಲಿಸದಿದ್ದರೂ ಹರಾಜಿನಲ್ಲಿ ತೊಡಗಲಿದೆ ಎಂದರು.

ಗ್ರಾಹಕರ ಸಂಖ್ಯೆ ಹೆಚ್ಚಿಸಲು ಕ್ರಮ:
ಯುನಿನಾರ್ ಸಂಸ್ಥೆಯು ದೀರ್ಘಾವಧಿಯ ಬಂಡವಾಳ ಹೂಡಿಕೆ ಯೋಜನೆ ಹಮ್ಮಿಕೊಂಡಿದೆ. ಇದುವರೆಗೆ ಸಂಸ್ಥೆರೂ 14 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿದೆ. ಸಂಸ್ಥೆಗೆ 4 ಕೋಟಿಗಳಷ್ಟು ಚಂದಾದಾರರು ಇದ್ದಾರೆ. 2011ರಲ್ಲಿ ಸಂಸ್ಥೆಯು ಕರ್ನಾಟಕ ವೃತ್ತದಲ್ಲಿ 8.5 ಲಕ್ಷದಷ್ಟು ಹೊಸ ಗ್ರಾಹಕರನ್ನು ಸೆಳೆದುಕೊಂಡಿದೆ. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಚಂದಾದಾರರನ್ನಾಗಿ ಮಾಡಿಕೊಳ್ಳುವ ಪ್ರಯತ್ನ ಮುಂದುವರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.