ADVERTISEMENT

ಹೊಸ ಬ್ಯಾಂಕ್ ಆರಂಭ ಪರ್ವ

ಗಿರೀಶ.ಕೆ.ಎಸ್.
Published 2 ಜನವರಿ 2013, 12:27 IST
Last Updated 2 ಜನವರಿ 2013, 12:27 IST

ಬ್ಯಾಂಕಿಂಗ್ ಸೇವಾ ಸುಧಾರಣಾ ಮಸೂದೆ (ಬ್ಯಾಂಕಿಂಗ್ ತಿದ್ದುಪಡಿ ಮಸೂದೆ)ಗೆ ಲೋಕಸಭೆ  ಮತ್ತು ರಾಜ್ಯಸಭೆ ಚಳಿಗಾಲದ ಅಧಿವೇಶನದಲ್ಲಿ ತನ್ನ ಅನುಮೋದನೆ ನೀಡಿವೆ. ಈ ಸುಧಾರಣೆ ವಿರೋಧಿಸಿ ಇತ್ತೀಚೆಗೆ (ಡಿ. 20) ಬ್ಯಾಂಕಿನ ಸಿಬ್ಬಂದಿ ಒಂದು ದಿನ ಮುಷ್ಕರ ನಡೆಸಿದ್ದರು. ಆದರೂ ಸರ್ಕಾರ ಬ್ಯಾಂಕಿಂಗ್ ಸುಧಾರಣಾ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಯಿತು.

ಈ ಮಸೂದೆಯನ್ನು ಕಳೆದ ವರ್ಷದ ಮಾರ್ಚ್‌ನಲ್ಲಿಯೇ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ನಂತರ ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು. ಒಂದು ವರ್ಷದಷ್ಟು ದೀರ್ಘ ಸಮಯದ ಬಳಿಕ ಸ್ಥಾಯಿ ಸಮಿತಿ ಕೆಲವು ಬದಲಾವಣೆಗಳನ್ನು ಸೂಚಿಸಿತು. ಅಂತಿಮವಾಗಿ ಡಿಸೆಂಬರ್ 20ರಂದು ಲೋಕಸಭೆ ಇದಕ್ಕೆ ಒಪ್ಪಿಗೆ ಸೂಚಿಸಿತು.
ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಸೂದೆಯ ನಂತರ ಯುಪಿಎ ಸರ್ಕಾರ ತರುತ್ತಿರುವ ಅತಿ ಮಹತ್ವದ ಮಸೂದೆ ಇದೆಂದು ವಿಶ್ಲೇಷಿಸಲಾಗುತ್ತಿದೆ.

ಈ ಮಸೂದೆಯನ್ನು ವಿರೋಧಿಸಿ ನಾಲ್ಕು ಸಂಘಟನೆಗಳಿಗೆ ಸೇರಿದ ಬ್ಯಾಂಕ್ ನೌಕರರು ಡಿ. 20ರಂದು ನಡೆಸಿದ ಮುಷ್ಕರದಲ್ಲಿ ಅಧಿಕಾರಿಗಳೂ  ಪಾಲ್ಗೊಂಡಿದ್ದರು. ದೇಶದ ಬ್ಯಾಂಕ್‌ಗಳ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದರೆ ಅತ್ತ ಹಣಕಾಸು ಸಚಿವರು ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು.

ಮಸೂದೆ ಪ್ರಮುಖ ಅಂಶ
1. ಟಾಟಾ, ರಿಲಯನ್ಸ್ ಮೊದಲಾದ ಕಾರ್ಪೊರೇಟ್ ಸಂಸ್ಥೆಗಳು ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸುವುದಕ್ಕೆ ಅನುಮತಿ.

2. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಖಾಸಗಿ ಹೂಡಿಕೆದಾರರ ಮತದಾನದ ಹಕ್ಕನ್ನು ಶೇ 1ರಿಂದ 10ಕ್ಕೆ ಹೆಚ್ಚಿಸುವುದು.

3. ಖಾಸಗಿ ವಲಯದ ಬ್ಯಾಂಕುಗಳಲ್ಲಿನ ಹೂಡಿಕೆದಾರರ ಮತದಾನದ ಹಕ್ಕನ್ನು ಶೇ 10ರಿಂದ ಶೇ 26ಕ್ಕೆ ಹೆಚ್ಚಿಸುವುದು.

4. ಖಾಸಗಿ ವಲಯದ ಬ್ಯಾಂಕುಗಳ ಆಡಳಿತ ಮಂಡಳಿಗಳನ್ನು ಸೂಪರ್‌ಸೀಡ್ ಮಾಡುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ನೀಡುವುದು.

5. ಇಡೀ ಬ್ಯಾಂಕಿಂಗ್ ವಲಯವನ್ನು ಸ್ಪರ್ಧಾತ್ಮಕ ಆಯೋಗದ (Competition Commission of India) ವ್ಯಾಪ್ತಿಗೆ  ತರುವುದು.

6. ಹೊಸ ಬ್ಯಾಂಕುಗಳನ್ನು ಸ್ಥಾಪಿಸುವುದಕ್ಕೆ `ಆರ್‌ಬಿಐ' ಪರವಾನಗಿ ನೀಡುವುದಕ್ಕೆ ಅವಕಾಶ.

7. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಹೆಚ್ಚಳ ಹಾಗೂ ಹೊಸ ಬ್ಯಾಂಕುಗಳ ಸ್ಥಾಪನೆಗೆ ವಿದೇಶಿ ಹೂಡಿಕೆದಾರರಿಗೆ ಅನುಮತಿ ನೀಡುವುದು.

8. ಬ್ಯಾಂಕುಗಳು ಇಟ್ಟುಕೊಳ್ಳಲೇ ಬೇಕಾದ `ಆಥರೈಸ್ಡ್ ಕ್ಯಾಪಿಟಲ್'(ಅಧಿಕೃತ ಬಂಡವಾಳ) ಮೇಲಿನ ರೂ. 3 ಸಾವಿರ ಕೋಟಿಯ ಮಿತಿಯನ್ನು ರದ್ದುಗೊಳಿಸುವುದು.
ಆದರೆ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವುದಕ್ಕೆ ಬ್ಯಾಂಕ್‌ಗಳಿಗೆ ಅನುಮತಿ ನೀಡುವ ಅಂಶವನ್ನು ಮಾತ್ರ ಈ ಮಸೂದೆಯಿಂದ ಹೊರಗಿಡಲಾಗಿದೆ.

ವಿಶ್ಲೇಷಣೆ: ಪ್ರಸ್ತುತ ಬ್ಯಾಂಕಿಂಗ್ ತಿದ್ದುಪಡಿ ಮಸೂದೆಯ ಅವಶ್ಯಕತೆ ಇತ್ತೇ? ಈ ಪ್ರಶ್ನೆ ಸಹಜವಾಗಿ ಮೂಡುವುದುಂಟು. ಬ್ಯಾಂಕಿಂಗ್ ವಲಯಕ್ಕೆ ಇನ್ನಷ್ಟು ಚೈತನ್ಯ ತುಂಬುವ ಜರೂರು ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರ ಎದುರಿಗಿತ್ತು. ಏಕೆಂದರೆ, ಸದ್ಯ ಒಂದು ಅಂದಾಜಿನ ಪ್ರಕಾರ ದೇಶದ ರಾಷ್ಟ್ರೀಕೃತ ಬ್ಯಾಂಕುಗಳ  ಸಾಲಗಳಲ್ಲಿ ದೊಡ್ಡ ಮೊತ್ತ `ವಸೂಲಿಯಾಗದ ಸಾಲ'ದ(ಬ್ಯಾಡ್ ಲೋನ್ಸ್) ಲೆಕ್ಕಕ್ಕೆ ಸೇರಿದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಎನಿಸಿದ ಎಸ್‌ಬಿಐ 2012 ಸೆಪ್ಟೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಲಾಭ ದಾಖಲಿಸಿದ್ದರೂ ಅದು ಅತ್ಯಲ್ಪ ಪ್ರಮಾಣದ್ದಾಗಿದೆ.

ದೇಶದ ಬ್ಯಾಂಕಿಂಗ್ ವಲಯದ ಆರೋಗ್ಯಕರ ಸ್ಥಿತಿಗಾಗಿ, ಸ್ಪರ್ಧೆ ಹೆಚ್ಚಿಸುವ ಮೂಲಕ ಗುಣಮಟ್ಟ ಸುಧಾರಣೆಗಾಗಿ ಬ್ಯಾಂಕಿಂಗ್ ನಿಯಮಗಳಿಗೆ ತಿದ್ದುಪಡಿ ತರಬೇಕಾದ ಅಗತ್ಯವಿದ್ದಿತು.

ಜತೆಗೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚು ಬ್ಯಾಂಕುಗಳ ಅವಶ್ಯಕತೆ ಇದ್ದಿತು. ಈ ಅವಶ್ಯಕತೆಯನ್ನು ಹೊಸ ಬ್ಯಾಂಕ್‌ಗಳ ಆರಂಭಕ್ಕೆ ಅನುಮತಿ ನೀಡುವ ಮೂಲಕ ಪೂರೈಸಿಕೊಳ್ಳಬೇಕಿದ್ದಿತು. ಇದಕ್ಕಾಗಿ ದೇಶದ ಕಾರ್ಪೊರೇಟ್ ಶಕ್ತಿ ಹಾಗೂ ವಿದೇಶಿ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡಬೇಕಿದ್ದಿತು. ಹಾಗಾಗಿಯೇ ಈಗ ಬ್ಯಾಂಕಿಂಗ್ ತಿದ್ದುಪಡಿ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯಲಾಗಿದೆ.

`ಖಾಸಗಿ ಹಣಕಾಸು ಸಂಸ್ಥೆಗಳಷ್ಟೇ ಅಲ್ಲ, ಸರ್ಕಾರಿ ಹಣಕಾಸು ಸಂಸ್ಥೆಗಳೂ ಬ್ಯಾಂಕಿಂಗ್ ವಲಯ ಪ್ರವೇಶಿಸಬಹುದು' ಎಂದು ಚಿದಂಬಂರಂ ಅವರು ಒತ್ತಿ ಹೇಳುವ ಮೂಲಕ ತಾವು ಖಾಸಗಿ ಲಾಬಿಗೆ ಒಳಪಟ್ಟಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಬ್ಯಾಂಕುಗಳ ಖರೀದಿ-ವಿಲೀನ ಪ್ರಕ್ರಿಯೆ ಚುರುಕುಗೊಂಡಲ್ಲಿ ನಷ್ಟದಲ್ಲಿರುವ ಬ್ಯಾಂಕುಗಳ ಸಮಸ್ಯೆಯೂ ನಿವಾರಣೆ ಆದಂತೆ ಆಗುತ್ತದೆ ಎಂಬುದು ಅವರ ಅಭಿಮತ.
ಹೊಸ ಬ್ಯಾಂಕ್‌ಗಳ ಆರಂಭ ಮತ್ತು ವಿಲೀನ ಪ್ರಕ್ರಿಯೆಯಿಂದ ಹಳೆಯ ಬ್ಯಾಂಕ್‌ಗಳ ಸಾಮರ್ಥ್ಯ ಹೆಚ್ಚಳ ಕ್ರಮವು ಬ್ಯಾಂಕುಗಳ ಮಧ್ಯೆ ಸ್ಪರ್ಧೆ ಹೆಚ್ಚುವಂತೆ ಮಾಡುತ್ತದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗುವುದಂತೂ ದಿಟ.

ಆದರೆ ಇದೇ ಸಮಯದಲ್ಲಿ ಕಾರ್ಪೊರೇಟ್ ಶಕ್ತಿಗಳ ಅಸಾಮಾನ್ಯ ಸ್ಪರ್ಧೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮುಚ್ಚಿಹೋಗಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಲಾಭವನ್ನೇ ಮುಖ್ಯವಾಗಿಟ್ಟುಕೊಂಡು ಬರುವ ಕಾರ್ಪೊರೇಟ್ ಶಕ್ತಿಗಳಿಗೆ ದೇಶದ ಬಹುಜನರು ವಾಸಿಸುವ ಗ್ರಾಮೀಣ ಪ್ರದೇಶ ಕಾಣಲಾರದೇ ಹೋಗಬಹುದು. ಹೀಗಾಗಿ ಸರ್ಕಾರ ಸಮತೋಲನವನ್ನು ಕಾಯ್ದುಕೊಳ್ಳಲು ತನ್ನ ಹದ್ದಿನ ಕಣ್ಣನ್ನು ಬ್ಯಾಂಕಿಂಗ್ ವಲಯದ ಮೇಲಿಡಲೇಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಮುಂದೆ ಹೆಚ್ಚಲಿದೆ.

ಚಿದಂಬರಂ ಉವಾಚ
ಬ್ಯಾಂಕಿಂಗ್ ಸುಧಾರಣಾ ಮಸೂದೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಣಕಾಸು ಸಚಿವ ಪಿ.ಚಿದಂಬರಂ ಅವರು ಹೇಳುವಂತೆ, `ದೇಶದಲ್ಲಿ ಈಗಿರುವ ಬ್ಯಾಂಕುಗಳ ಸಂಖ್ಯೆ ಜನಸಂಖ್ಯೆಗೆ ಹೋಲಿಸಿದರೆ ಏನೇನೂ ಸಾಲದು. ಹಾಗಾಗಿ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಲೇಬೇಕು. 20 ಅತ್ಯುತ್ತಮ ಜಾಗತಿಕ ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಒಂದು ಬ್ಯಾಂಕ್ ಸಹ ಸ್ಥಾನ ಪಡೆದಿಲ್ಲ. 


ಆದರೆ ಚೀನಾದ 3 ಬ್ಯಾಂಕುಗಳು ಸ್ಥಾನ ಪಡೆದಿವೆ. ಹಾಗಾಗಿ ಜಾಗತಿಕ ಹಾಗೂ ದೇಶೀಯ ಹಣಕಾಸು ಸವಾಲುಗಳನ್ನು ಎದುರಿಸಲು ಭಾರತದ ಕನಿಷ್ಠ ಎರಡು  ಬ್ಯಾಂಕ್‌ಗಳಾದರೂ `ವಿಶ್ವದ ಅತ್ಯುತ್ತಮ ಬ್ಯಾಂಕ್'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲೇ ಬೇಕಿದೆ. ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ಹೊಸ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ ನೀಡಬೇಕು'.

`ದಿನಕ್ಕೆ 18ರಿಂದ 19 ಶಾಖೆಗಳಂತೆ 2011-12ರ ಅವಧಿಯಲ್ಲಿ ದೇಶದಲ್ಲಿ 6489 ಬ್ಯಾಂಕ್ ಶಾಖೆಗಳು ಹೊಸದಾಗಿ ಆರಂಭವಾಗಿವೆ. ಆದರೂ ಈ ಪ್ರಮಾಣ ಸಾಲದು. ನಾವು ಇನ್ನಷ್ಟು ಬ್ಯಾಂಕ್‌ಗಳನ್ನು ಹೊಂದಬೇಕಿದೆ'.

`ವಿಲೀನ ಕ್ರಮ ಕೈಬಿಡಬೇಕು'
`ಪ್ರಸ್ತುತ ಬ್ಯಾಂಕಿಂಗ್ ತಿದ್ದುಪಡಿ ಮಸೂದೆ ಬ್ಯಾಂಕಿಂಗ್ ನೌಕರರ ಪಾಲಿಗೆ ಮಾತ್ರವಲ್ಲ ದೇಶದ ಆರ್ಥಿಕತೆಗೂ ಅನೂಕೂಲಕರವಲ್ಲ.  ಕಾರ್ಪೊರೇಟ್ ಶಕ್ತಿಗಳಿಗೆ ಬ್ಯಾಂಕ್ ಸ್ಥಾಪನೆ ಮಾಡುವುದಕ್ಕೆ ಲೈಸೆನ್ಸ್ ನೀಡುವ ಕ್ರಮವನ್ನು ಹಾಗೂ ಬ್ಯಾಂಕ್‌ಗಳ ವಿಲೀನ ಕ್ರಮ ತಕ್ಷಣ ಕೈಬಿಡಬೇಕು'.
-ವೇಣುಗೋಪಾಲ್
ಅಧ್ಯಕ್ಷ, ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಸಂಘ

`ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಹೆಚ್ಚು ಹೆಚ್ಚು ಹರಿದುಬರುವಂತೆ ಮಾಡುವ ಕ್ರಮವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮಾರಕ'.
ಸಿ.ಎಚ್.ವೆಂಕಟಾಚಲಂ
ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ

ADVERTISEMENT

`ದೇಶದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಇರುವಂತಹವು  ರಾಷ್ಟ್ರೀಕೃತ ಬ್ಯಾಂಕುಗಳೆ ಆಗಿವೆ. ಈ ಸಂಸ್ಥೆಗಳೇ ದೇಶದ ಬ್ಯಾಂಕಿಂಗ್ ಕ್ಷೇತ್ರದ ಬೆನ್ನೆಲುಬು. ಸೇವೆಗಿಂತ ಲಾಭವನ್ನೇ ಗುರಿಯಾಗಿಟ್ಟು ದಾಂಗುಡಿ ಇಡುವ ಕಾರ್ಪೊರೇಟ್ ಶಕ್ತಿಗಳಿಂದ ಬ್ಯಾಂಕಿಂಗ್ ಕ್ಷೇತ್ರದ ಬೆನ್ನೆಲುಬೇ ಆಗಿರುವ ರಾಷ್ಟ್ರೀಕೃತ ಬ್ಯಾಂಕುಗಳ ಶಕ್ತಿಯನ್ನೇ ಕುಗ್ಗಿಸುವ ಹುನ್ನಾರವಿದು'.
ವಿಶ್ವಾಸ ಉತ್ತಗಿ
ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ನೌಕರರ ಸಂಘ

`ಮಸೂದೆ ಪರಿಣಾಮ ಬೀರದು'
`ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ನ ವ್ಯವಸ್ಥಾಪಕ ನಿರ್ದೇಶಕ ವಿಭಿನ್ನ ನಿಲುವು ತಳೆದಿದ್ದಾರೆ.  ಪ್ರಸ್ತುತ ತರುತ್ತಿರುವ ಬ್ಯಾಂಕಿಂಗ್ ತಿದ್ದುಪಡಿ ಮಸೂದೆಯು ವಿಶೇಷವಾಗಿ ತಮ್ಮ ಬ್ಯಾಂಕ್ ಮೇಲೆ ಯಾವುದೇ ಮಾರಕ ಪರಿಣಾಮ ಬೀರದು' ಎಂಬುದು `ಎಸ್‌ಬಿಐ' ವ್ಯವಸ್ಥಾಪಕ ನಿರ್ದೇಶಕ ದಿವಾಕರ್ ಗುಪ್ತ ಅವರ ಸ್ಪಷ್ಟ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.