ನವದೆಹಲಿ: ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್ಗಳ ಕಾರ್ಯಕ್ಷಮತೆಯನ್ನು ಹಣಕಾಸು ಸಚಿವಾಲಯ ಶೀಘ್ರವೇ ಪರಾಮರ್ಶೆ ನಡೆಸಲಿದೆ.
ಬ್ಯಾಂಕಿಂಗ್ ಕ್ಷೇತ್ರದ ಸುಧಾರಣಾ ಕ್ರಮಗಳ ಅಂಗವಾಗಿ ಕೈಗೊಳ್ಳಲಾಗಿರುವ ‘ಸಕಾಲಿಕ ಸರಿಪಡಿಸುವ ಕ್ರಮ’ಗಳಡಿ (ಪಿಸಿಎ) ಗುರುತಿಸಿರುವ ಬ್ಯಾಂಕ್ಗಳ ಕಾರ್ಯನಿರ್ವಹಣೆ ಪರಾಮರ್ಶೆಗೆ ಒಳಪಡಲಿದೆ. ಈ ಕ್ರಮದ ಅಂಗವಾಗಿ ಈ ಬ್ಯಾಂಕ್ಗಳ ನಿರ್ದೇಶಕ ಮಂಡಳಿಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್, ಈ 12 ಬ್ಯಾಂಕ್ಗಳ ಕಾರ್ಯನಿರ್ವಹಣೆ ಮೇಲೆ ಈಗಾಗಲೇ ನಿಗಾ ಇರಿಸಿದೆ. ಹಲವಾರು ಮಾನದಂಡಗಳ ಪ್ರಕಾರ ಈ ಬ್ಯಾಂಕ್ಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಕಂಡುಬಂದಿದೆ.
ಗರಿಷ್ಠ ಪ್ರಮಾಣದ ವಸೂಲಾಗದ ಸಾಲ (ಎನ್ಪಿಎ), ಕಡಿಮೆ ಮಟ್ಟದ ಬಂಡವಾಳ, ಮಂಜೂರಾದ ಸಾಲಗಳಿಂದ ಕಡಿಮೆ ಪ್ರಮಾಣದ ಲಾಭ ಪಡೆಯುವ ಮಾನದಂಡಗಳ ಪ್ರಕಾರ ಬ್ಯಾಂಕ್ಗಳ ಹಣಕಾಸು ಪರಿಸ್ಥಿತಿ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳು ಬ್ಯಾಂಕ್ಗಳ ಹಣಕಾಸು ಪರಿಸ್ಥಿತಿ ಕಳಪೆಯಾಗಿರುವುದನ್ನು ಸೂಚಿಸುತ್ತವೆ. ಬ್ಯಾಂಕ್ಗಳನ್ನು ಸರಿದಾರಿಗೆ ತರಲು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನೂ ಇವು ಮನದಟ್ಟು ಮಾಡಿಕೊಡುತ್ತವೆ.
ಪರಾಮರ್ಶೆ ಸಂದರ್ಭದಲ್ಲಿ ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳನ್ನು ಈ ಬ್ಯಾಂಕ್ಗಳು ಸಾಬೀತುಪಡಿಸಬೇಕಾಗುತ್ತದೆ. ಈ ವಿಷಯದಲ್ಲಿ ಅವುಗಳ ಸಾಧನೆ ಅತ್ಯುತ್ತಮ ಆಗಿದ್ದರೆ ಅವುಗಳಿಗೆ ಪುರಸ್ಕಾರ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
‘ಪಿಸಿಎ’ ಮಾರ್ಗದರ್ಶಿ ಸೂತ್ರಗಳ ಅನ್ವಯ, ಆರ್ಬಿಐ ಮೊದಲು ಐಡಿಬಿಐ ಬ್ಯಾಂಕ್ನ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸಿತ್ತು. ಇತ್ತೀಚಿಗೆ ಅಲಹಾಬಾದ್ ಬ್ಯಾಂಕ್ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.