ADVERTISEMENT

ಬಂದರು ಅಭಿವೃದ್ಧಿಗೆ ಬಜೆಟ್‌ನಲ್ಲಿ ಕೊಡುಗೆ

ರಾಜ್ಯ ಬಜೆಟ್‌ನಲ್ಲಿ ನಿರೀಕ್ಷಿತ ಯೋಜನೆಗಳ ಉಲ್ಲೇಖವಿಲ್ಲ: ಮುಖಂಡರ ಅಸಮಾಧಾನ

ಸದಾಶಿವ ಎಂ.ಎಸ್‌.
Published 6 ಮಾರ್ಚ್ 2020, 9:55 IST
Last Updated 6 ಮಾರ್ಚ್ 2020, 9:55 IST

ಕಾರವಾರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಮೀನುಗಾರಿಕೆ ಮತ್ತುಬಂದರುಗಳ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆದರೆ, ಡೀಸೆಲ್ ಮೇಲಿನ ತೆರಿಗೆ ಏರಿಕೆಯಿಂದ ಯಾಂತ್ರೀಕೃತ ದೋಣಿ ಮಾಲೀಕರಿಗೆ ಹೊರೆಯಾಗಲಿದೆ ಎಂಬ ಅಸಮಾಧಾನವೂವ್ಯಕ್ತವಾಗಿದೆ.

ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಒದಗಿಸಲು ₹ 4 ಕೋಟಿ ಮೀಸಲಿಡಲಾಗಿದೆ. ಮತ್ಸ್ಯೋದ್ಯಮದಲ್ಲಿ ಆಧುನಿಕತಂತ್ರಜ್ಞಾನಗಳನ್ನು ಅಳವಡಿಕೆಯನ್ನು ಪ್ರೋತ್ಸಾಹಿಸಲುರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ‘ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ’ ಜಾರಿ ಮಾಡಲಿದ್ದು, ₹ 1.5 ಕೋಟಿ ಮೀಸಲಿಡಲಾಗುವುದು ಎಂದು ಯಡಿಯೂರಪ್ಪತಿಳಿಸಿದ್ದಾರೆ.

ಮೀನುಗಾರ ಮಹಿಳೆಯರಿಗೆ ದೈನಂದಿನ ವ್ಯವಹಾರಗಳನ್ನು ಸುಲಭವಾಗಿ ಮುನ್ನಡೆಸಲು ಸಹಾಯವಾಗುವಂತೆ‘ಮಹಿಳಾ ಮೀನುಗಾರರ ಸಬಲೀಕರಣ ಯೋಜನೆ’ ಘೋಷಿಸಿದ್ದಾರೆ. ಅದರಡಿ1,000 ಫಲಾನುಭವಿಗಳಿಗೆ ₹ 5 ಕೋಟಿ ವೆಚ್ಚದಲ್ಲಿ ದ್ವಿಚಕ್ರ ವಾಹನಗಳನ್ನು ನೀಡುವುದಾಗಿ ಹೇಳಿದ್ದಾರೆ.

ADVERTISEMENT

ಭಟ್ಕಳ ತಾಲ್ಲೂಕಿನತೆಂಗಿನಗುಂಡಿ ಬಂದರಿನ ಅಳಿವೆಯಲ್ಲಿ ಹೂಳು ತುಂಬಿಕೊಂಡು ದೋಣಿಗಳ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇಲ್ಲಿ ಹೂಳು ತೆಗೆಯಲು ₹ 5 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

‘ಹೆಚ್ಚು ಬಳಕೆಯಾಗದು’:ಮೀನುಗಾರರಿಗೆ ಪ್ರಕಟಿಸಿರುವ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖಂಡ ಕೆ.ಟಿ.ತಾಂಡೇಲ, ಬಜೆಟ್‌ನಿಂದ ನಿರೀಕ್ಷೆ ಮಾಡಿದಂತಹ ಯೋಜನೆಗಳನ್ನು ಉಲ್ಲೇಖಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಕಾರವಾರದ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಹಣ ಮೀಸಲಿಟ್ಟಿರುವುದು ಸ್ವಾಗತಾರ್ಹ. ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಅವು ಈಜಿಲ್ಲೆಗೆ ಹೆಚ್ಚು ಬಳಕೆಯಾಗದು. ಅದರ ಬದಲು ಮೀನು ಮಾರಾಟ ಮಾಡುವ ಮಹಿಳೆಯರಿಗೆ ವ್ಯವಹಾರದಲ್ಲಿ ನಷ್ಟ ತಡೆಯಲು ಯೋಜನೆ ಬೇಕಿತ್ತು. ರಿಯಾಯಿತಿ ದರದಲ್ಲಿ ಮೀನು ಖರೀದಿಗೆವ್ಯವಸ್ಥೆ ಪ್ರಕಟಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮೀನುಗಾರಿಕೆ ನಷ್ಟವಾಗಿ ಕೆಲಸ ಕಳೆದುಕೊಂಡ ಯುವಕರಿಗೆ, ಮತ್ಸ್ಯಕ್ಷಾಮದಿಂದ ಕಂಗೆಟ್ಟಿರುವ ನಾಡದೋಣಿಯವರಿಗೆ ಬಜೆಟ್‌ನಲ್ಲಿ ಏನೂ ಹೇಳಿಲ್ಲ. ಕಳೆದ ಬಾರಿ ಪ್ರಕಟಿಸಿದ ಮೀನುಗಾರರ ಸಾಲಮನ್ನಾದ ಪ್ರಯೋಜನ ಇನ್ನೂ ಹಲವರಿಗೆ ಸಿಕ್ಕಿಲ್ಲ. ಅಂತೆಯೇ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ವಿಚಾರವೂ ಯಶಸ್ವಿಯಾಗಲಿಲ್ಲ. ಮೀನುಗಾರಿಕೆ ಯೋಜನೆಗಳಿಗೆ ಸಲಹಾ ಸಮಿತಿರಚಿಸುವ ಪ್ರಸ್ತಾವಕ್ಕೂ ಮನ್ನಣೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆಟ್‌ನಲ್ಲಿ ಜಿಲ್ಲೆಗೆ ಮತ್ತೇನಿದೆ?:

*₹ 2,500 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪಾವಿನಕುರ್ವೆ, ಬೇಲೆಕೇರಿ ಬಂದರುಗಳ ಅಭಿವೃದ್ಧಿಗೆ ಬಿಡ್ ಆಹ್ವಾನ.

* ಕಾರವಾರ ಬಂದರಿನಲ್ಲಿ ₹ 19 ಕೋಟಿ ಅಂದಾಜಿನಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಕೆಗೆ ಕ್ರಮ.‌

* ಜಿಲ್ಲೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ರಾಜ್ಯದ ಮೊದಲ ‘ಕಡಲಧಾಮ’ವನ್ನು (Marine Eco Park) ಸ್ಥಾಪನೆ.

* ಕರಾವಳಿ ಸಂರಕ್ಷಣೆ ಮತ್ತು ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪಿಸಿದಕರ್ನಾಟಕ ಜಲಸಾರಿಗೆಯ ಸಮಗ್ರ ಯೋಜನೆ ಜಾರಿ.

* ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಕಾಳಿ, ಶರಾವತಿ ನದಿಗಳಲ್ಲಿ ಜಲಸಾರಿಗೆ ಮಾರ್ಗಗಳು ಹಾಗೂ ದ್ವೀಪಗಳ ಅಭಿವೃದ್ಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.