ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ ಲಿಮಿಟೆಡ್ (ಎಂಆರ್ಪಿಎಲ್) ಹತ್ತಿ, ಜೋಳ ಮೊದಲಾದ ಕೃಷಿ ತ್ಯಾಜ್ಯ ಬಳಸಿ ಎಥೆನಾಲ್ ಉತ್ಪಾದಿಸಲು ಮುಂದಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 2ಜಿ ಎಥೆನಾಲ್ ಘಟಕ ಸ್ಥಾಪಿಸಿ, 2025ರ ವೇಳೆಗೆ ಪ್ರತಿನಿತ್ಯ 60 ಸಾವಿರ ಲೀಟರ್ ಎಥೆನಾಲ್ ಉತ್ಪಾದಿಸುವ ಗುರಿ ಹೊಂದಿದೆ.
ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಈ ಕುರಿತು ಮಾಹಿತಿ ನೀಡಿದ ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಅವರು, ‘ಡೀಸೆಲ್ ಹಾಗೂ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಿ, ಎಥೆನಾಲ್ ಮತ್ತಿತರ ಪರ್ಯಾಯ ಇಂಧನ ಉತ್ಪಾದನೆ ಬಗ್ಗೆ ಗಮನ ಹರಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ವೈದ್ಯಕೀಯ ಕ್ಷೇತ್ರದ ಕೆಲವು ಅಗತ್ಯಗಳಿಗೆ ವಿದೇಶಿ ಉತ್ಪನ್ನಗಳನ್ನು ಅವಲಂಬಿಸಬೇಕಾದ ಸ್ಥಿತಿ ಬಂದಿತ್ತು. ಈ ಅನುಭವವು ಪೆಟ್ರೊ ಕೆಮಿಕಲ್ ಕ್ಷೇತ್ರದಲ್ಲಿ ಸ್ವಾವಲಂಬನೆಯ ಅಗತ್ಯವನ್ನು ತಿಳಿಸಿದೆ’ ಎಂದರು.
‘ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಡೀಸೆಲ್, ಪೆಟ್ರೋಲ್ ಮಾರಾಟದ 500 ಹೊಸ ರಿಟೇಲ್ ಔಟ್ಲೆಟ್ ಆರಂಭಿಸಲು ಕಂಪನಿ ಯೋಚಿಸಿದೆ. ಈಗಾಗಲೇ ವಿವಿಧೆಡೆಗಳಲ್ಲಿ 47 ರಿಟೇಲ್ ಔಟ್ಲೆಟ್ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.