ನವದೆಹಲಿ: ಲಾಕ್ಡೌನ್ನಿಂದಾಗಿ ರಸ್ತೆ ಸಾರಿಗೆ ವಲಯವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಸಾಲದ ಕಂತು ಪಾವತಿಸಲು ಡಿಸೆಂಬರ್ 31ರವರೆಗೂ ವಿನಾಯಿತಿ ನೀಡುವಂತೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಆರ್ಬಿಐಗೆ ಮನವಿ ಮಾಡಿದೆ.
ಸಾಲದ ಕಂತು ಮರುಪಾವತಿ ಮುಂದೂಡಲು ಇದ್ದ ಅವಕಾಶವು ಇದೇ ತಿಂಗಳಿಗೆ ಅಂತ್ಯವಾಗಲಿದೆ. ಹೀಗಾಗಿ ಅದನ್ನು ಇನ್ನಷ್ಟು ವಿಸ್ತರಿಸುವಂತೆ ಒತ್ತಾಯ ಕೇಳಿಬರುತ್ತಿದೆ.
‘ಕೊರೊನಾ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್ಡೌನ್ನಿಂದಾಗಿ ರಸ್ತೆ ಸಾರಿಗೆ ವಲಯ ಅತಿ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. ಪ್ರಸ್ತಕ ಹಣಕಾಸು ವರ್ಷದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಈ ವಲಯದ ಆರ್ಥಿಕ ಬಿಕ್ಕಟ್ಟಿನಿಂದಾಗಿ ನೇರ ಮತ್ತು ಪರೋಕ್ಷವಾಗಿ 20 ಕೋಟಿ ಜನರ ಮೇಲೆ ಪರಿಣಾಮ ಉಂಟಾಗುತ್ತಿದೆ’ ಎಂದು ಆರ್ಬಿಐ ಗವರ್ನರ್ ಅವರಿಗೆ ಬರೆದಿರುವ ಪತ್ರದಲ್ಲಿ ಎಐಎಂಟಿಸಿ ತಿಳಿಸಿದೆ.
‘ಬೇಡಿಕೆ ಕಡಿಮೆ ಆಗಿರುವುದು ಮತ್ತು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಸಾಗಿಸಿದರೆ ಹಿಂದಿರುಗುವಾಗ ಖಾಲಿ ಬರಬೇಕಾಗಿರುವುದರಿಂದ ರಾಜ್ಯಗಳ ಮಧ್ಯೆ ಲಾರಿ ಸಂಚಾರಿ ಕಡಿಮೆಯಾಗಿದೆ. ಸರಕು ಮತ್ತು ಪ್ರಯಾಣಿಕ ಉದ್ದೇಶದ ವಾಹನಗಳನ್ನು ಹೊಂದಿರುವ ಸಣ್ಣ ಪ್ರಮಾಣದ ಉದ್ದಿಮೆಗಳು ಹೆಚ್ಚಿನ ಸಂಕಷ್ಟದಲ್ಲಿವೆ’ ಎಂದು ಎಐಎಂಟಿಸಿ ಅಧ್ಯಕ್ಷ ಕುಲ್ತರಾನಾ ಸಿಂಗ್ ಅತ್ವಾಲ್ ತಿಳಿಸಿದ್ದಾರೆ.
‘ತೆರಿಗೆ, ಡೀಸೆಲ್ ದರ, ಭ್ರಷ್ಟಾಚಾರ ಮತ್ತು ಟೋಲ್ ಸುಂಕ ಹೆಚ್ಚುತ್ತಲೇ ಇರುವುದರಿಂದ ಕಾರ್ಯಾಚರಣೆ ವೆಚ್ಚದಲ್ಲಿಯೂ ಏರಿಕೆಯಾಗುತ್ತಿದೆ. ಆದರೆ ಬೇಡಿಕೆ ಇಲ್ಲದೇ ಇರುವುದರಿಂದ ಸರಕು ಸಾಗಣೆಯಲ್ಲಿ ಯಾವುದೇ ವ್ಯತ್ಯಾಸ ಆಗುತ್ತಿಲ್ಲ. ಸದ್ಯ ಶೇ 50ರಷ್ಟು ವಾಹನಗಳು ರಸ್ತೆಗಿಳಿದಿಲ್ಲ. ಇಎಂಐ ಪಾವತಿ ಮುಂದೂಡಿಕೆ ಅವಧಿ ಮುಕ್ತಾಯವಾದ ಬಳಿಕ ವಸೂಲಾಗದ ಸಾಲದಲ್ಲಿ ಏರಿಕೆಯಾಗುವ (ಎನ್ಪಿಎ) ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.