ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ.) ಆದ್ಯತಾ ವಲಯದ ಅಡಿಯಲ್ಲಿ ಸಾಲ ನೀಡುವುದನ್ನು ಪರಿಗಣಿಸಬೇಕು. ಇದರಿಂದ ಜನರಿಗೆ ಈ ವಾಹನಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂದು ವಿದ್ಯುತ್ ಚಾಲಿತ ವಾಹನಗಳ ತಯಾರಕರ ಸಂಘವು (ಎಸ್ಎಂಇವಿ) ಸರ್ಕಾರವನ್ನು ಒತ್ತಾಯಿಸಿದೆ.
ವಿದ್ಯುತ್ ಚಾಲಿತ ವಾಹನಗಳಿಗೆ ಸಂಬಂಧಿಸಿದಂತೆ ಸಂಘವು ಕೇಂದ್ರ ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದೆ. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಹಣಕಾಸಿನ ನೆರವು ನೀಡುವಂತೆ ಕೇಳಿದೆ.
ವಾಹನೋದ್ಯಮ ಮತ್ತು ವಾಹನ ಬಿಡಿಭಾಗಗಳಿಗಾಗಿ ಅನುಕೂಲ ಆಗುವಂತೆ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಗೆ (ಪಿಎಲ್ಐ) ತಿದ್ದುಪಡಿ ತರುವ ಅಗತ್ಯ ಇದೆ ಅದು ಹೇಳಿದೆ. ಸದ್ಯ ಇರುವ ಯೋಜನೆಯಲ್ಲಿ ದೊಡ್ಡ ಕಂಪನಿಗಳಿಗೆ ಮಾತ್ರವೇ ಪ್ರಯೋಜನ ಸಿಗುತ್ತಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೂ ಯೋಜನೆಯ ಪ್ರಯೋಜನ ಸಿಗುವಂತೆ ಆಗಬೇಕು ಎಂದು ಅದು ಹೇಳಿದೆ.
ಕನಿಷ್ಠ ₹ 10 ಸಾವಿರ ಕೋಟಿ ವರಮಾನ ಹೊಂದಿರುವ ವಾಹನ ತಯಾರಿಕಾ ಕಂಪನಿ ಅಥವಾ ಸಮೂಹ ಕಂಪನಿಯು ಸದ್ಯ ಇರುವ ಪಿಎಲ್ಐ ಅಡಿ ಬರುತ್ತದೆ. ವಾಹನ ಬಿಡಿಭಾಗಕ್ಕೆ ಸಂಬಂಧಿಸಿದಂತೆ ₹ 500 ಕೋಟಿ ವರಮಾನ ಹೊಂದಿರಬೇಕು. 2021ರ ಮಾರ್ಚ್ 31ರ ಅಂತ್ಯಕ್ಕೆ ಲೆಕ್ಕಪರಿಶೋಧಿತ ಹಣಕಾಸು ಮಾಹಿತಿಯ ಪ್ರಕಾರ, ವಾಹನೋದ್ಯಮ ಅಥವಾ ವಾಹನ ಬಿಡಿಭಾಗ ತಯಾರಿಕೆಯಲ್ಲಿ ಇಲ್ಲದೇ ಇರುವ ಕಂಪನಿ ಅಥವಾ ಸಮೂಹ ಕಂಪನಿಯ ಜಾಗತಿಕ ನಿವ್ವಳ ಮೌಲ್ಯವು ₹ 1,000 ಕೋಟಿ ಇದ್ದರೆ ಅಂತಹ ಕಂಪನಿಯು ಯೋಜನೆಯ ಪ್ರಯೋಜನ ಪಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.