ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ತನ್ನ ಎಲ್ಲಾ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕಕ್ಕೆ ವಿನಾಯಿತಿ ನೀಡಿದೆ.
ಉಳಿತಾಯ ಖಾತೆ, ವೇತನ ಖಾತೆ, ಅನಿವಾಸಿ ಭಾರತೀಯ (ಎನ್ಆರ್ಐ) ಖಾತೆ ಸೇರಿ ಎಲ್ಲಾ ರೀತಿಯ ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಕನಿಷ್ಠ ತಿಂಗಳ ಮೊತ್ತವನ್ನು (ಎಎಂಬಿ) ಕಾಯ್ದುಕೊಳ್ಳಬೇಕಿತ್ತು. ಈ ನಿಯಮ ಪಾಲಿಸದಿದ್ದರೆ ದಂಡ ಶುಲ್ಕ ವಿಧಿಸಲಾಗುತ್ತಿತ್ತು.
ಜೂನ್ 1ರಿಂದ ಅನ್ವಯವಾಗುವಂತೆ ಇದಕ್ಕೆ ವಿನಾಯಿತಿ ನೀಡಲಾಗಿದೆ. ಇದರಿಂದ ಗ್ರಾಹಕರಿಗೆ ಇನ್ನು ಮುಂದೆ ತಮ್ಮ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕು ಎಂಬ ಪ್ರಮೇಯವೇ ಎದುರಾಗುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ವೇತನ ವರ್ಗ, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಎನ್ಆರ್ಐ ಮತ್ತು ಮೊದಲ ಬಾರಿಗೆ ಬ್ಯಾಂಕಿಂಗ್ ಸೇವೆ ಬಳಸುವವರು ಒಳಗೊಂಡಂತೆ ಬ್ಯಾಂಕ್ನ ಲಕ್ಷಾಂತರ ಗ್ರಾಹಕರಿಗೆ ಈ ನಿಯಮದಿಂದ ಅನುಕೂಲವಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.