ಬೆಂಗಳೂರು: ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಪರಿಣಾಮ ಬೀರಿರುವ ಪ್ರಯತ್ನಗಳನ್ನು ಗುರುತಿಸಿ ಕರ್ನಾಟಕ ಸರ್ಕಾರವು ಡಿಜಿಟಲ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ದಿ ಬೆಟರ್ ಇಂಡಿಯಾ ಆಯ್ಕೆ ಮಾಡಿರುವುದಕ್ಕೆ ಸ್ಥಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.
’ನಮ್ಮ ಇದುವರೆಗಿನ ಪ್ರಯತ್ನಗಳಿಗೆ ಈ ಪ್ರಶಸ್ತಿಯು ಅಂಗೀಕಾರದ ಮುದ್ರೆ ಒತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ದಿ ಬೆಟರ್ ಇಂಡಿಯಾದ ಸ್ಥಾಪಕರಾದ ಧೀಮಂತ್ ಮತ್ತು ಅನುರಾಧಾ ಪಾರೇಖ್ ಪ್ರತಿಕ್ರಿಯಿಸಿದ್ದಾರೆ. ’2008ರಿಂದ ಬದಲಾವಣೆ, ಆವಿಷ್ಕಾರ ಮತ್ತು ಸಾಮಾನ್ಯ ನಾಗರಿಕರ ಮಹಾನ್ ಸಾಧನೆಗಳನ್ನು ಡಿಜಿಟಲ್ ಸಂಸ್ಥೆ ದಿ ಬೆಟರ್ ಇಂಡಿಯಾ ಪರಿಚಯಿಸುತ್ತ ಬಂದಿದೆ.
’ದೇಶದಾದ್ಯಂತ 9 ಕೋಟಿಗೂ ಹೆಚ್ಚು ಓದುಗರನ್ನು ಹೊಂದಿರುವ ದಿ ಬೆಟರ್ ಇಂಡಿಯಾದ ವರದಿಗಳು ಇದುವರೆಗೆ ವಿದ್ಯುತ್ ಸಂಪರ್ಕ ಹೊಂದಿಲ್ಲದ ಕುಗ್ರಾಮಗಳಲ್ಲಿ ವಿದ್ಯುತ್ ದೀಪಗಳು ಬೆಳಗುವಂತೆ ಮಾಡಿವೆ. ಅತ್ಯಾಧುನಿಕ ಕಲಿಕಾ ತಂತ್ರಜ್ಞಾನವನ್ನು ಇದು ಗ್ರಾಮೀಣ ಪ್ರದೇಶದ ಶಾಲೆಗಳ ತರಗತಿಗಳಿಗೆ ತಲುಪಿಸಿದೆ. ಅವಕಾಶ ವಂಚಿತ ಹಿನ್ನೆಲೆಯಿಂದ ಬಂದಿರುವ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಕುರಿತು ರಾಜ್ಯದ ನೀತಿ ನಿಯಮಗಳನ್ನು ಪ್ರಭಾವಿಸಿದೆ. ಬಡ ಮಹಿಳೆಯರು ಸುಸ್ಥಿರ ಜೀವನೋಪಾಯ ಕಂಡುಕೊಳ್ಳಲು ನೆರವಾಗಿದೆ’ ಎಂದು ಧೀಮಂತ್ ಹೇಳಿದ್ದಾರೆ.
ಸಾಮಾಜಿಕ ಮತ್ತು ಪರಿಸರ ಪರಿಣಾಮ ಕುರಿತ ಕಾರ್ಯಕ್ರಮಗಳಿಗೆ ಸಿಕ್ಕಿರುವ ಸ್ಪಂದನೆಯಿಂದ ಸ್ಪೂರ್ತಿ ಪಡೆದಿರುವ ಸಂಸ್ಥೆಯು, ಗ್ರಾಹಕರಿಗೆ ನೇರವಾಗಿ ಪೂರೈಸುವ ಗೃಹ ಬಳಕೆಯ ಉತ್ಪನ್ನಗಳ ’ಹೋಮ್ ಕೇರ್ ಬ್ರ್ಯಾಂಡ್’ ಪರಿಚಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.