ನವದೆಹಲಿ: ಭಾರತವನ್ನು 2024–25ರೊಳಗೆ ಐದು ಟ್ರಿಲಿಯನ್ ಡಾಲರ್ಗಳ ಅರ್ಥ ವ್ಯವಸ್ಥೆಯನ್ನಾಗಿ ಬೆಳೆಸುವುದಾಗಿ ಕೇಂದ್ರ ಸರ್ಕಾರ ಹೇಳಿರುವುದು ‘ಮಹತ್ವಾಕಾಂಕ್ಷೆಯದ್ದಾಗಿ ಕಾಣಿಸುತ್ತಿದೆ, ಲೆಕ್ಕಾಚಾರ ಮಾಡಿ ಹೇಳಿದಂತೆ ಕಾಣುತ್ತಿಲ್ಲ’ ಎಂದು ಅರ್ಥಶಾಸ್ತ್ರಜ್ಞ, ಆರ್ಬಿಐನ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಬಗ್ಗೆ 2021–22ನೇ ಸಾಲಿನ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜನ್, ‘ಖಾಸಗೀಕರಣವನ್ನು ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ, ಬ್ಯಾಂಕ್ಗಳನ್ನು ಕೈಗಾರಿಕಾ ಸಂಸ್ಥೆಗಳಿಗೆ ಮಾರಾಟ ಮಾಡುವುದು ಬಹುದೊಡ್ಡ ತಪ್ಪಾಗುತ್ತದೆ’ ಎಂದು ಹೇಳಿದ್ದಾರೆ. ಹಾಗೆಯೇ, ಬ್ಯಾಂಕ್ಗಳನ್ನು ವಿದೇಶಿ ಬ್ಯಾಂಕ್ಗಳಿಗೆ ಮಾರಾಟ ಮಾಡುವುದು ರಾಜಕೀಯ ಕಾರಣಗಳಿಂದಾಗಿ ಆಗದ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಖಾಸಗಿ ವಲಯದ ಬ್ಯಾಂಕ್ಗಳು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖರೀದಿಸುವ ಸ್ಥಿತಿಯಲ್ಲಿ ಇದ್ದಿರಬಹುದು. ಆದರೆ, ಯಾವ ಬ್ಯಾಂಕ್ಗೆ ಹಾಗೆ ಖರೀದಿಸುವ ಶಕ್ತಿ ಇದೆ ಎನ್ನಲು ತಮ್ಮಿಂದಾಗದು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.