ಬೆಂಗಳೂರು:ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಪ್ರಮುಖ ಕಂಪನಿ ಎನಿಸಿರುವ ಎವರೆಸ್ಟ್, ಬೆಂಗಳೂರಿನಲ್ಲಿ ‘ಎವರೆಸ್ಟ್ಉಕ್ಕುಉತ್ಪನ್ನಗಳ ಸಮಗ್ರ ನಿರ್ಮಾಣಸೇವೆ’ಗೆ ಚಾಲನೆ ನೀಡಿದೆ.
‘ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಉಕ್ಕಿನ ಮಹತ್ವವನ್ನು ನಮ್ಮ ಕಂಪನಿ ಅರಿತಿದೆ. ಉಕ್ಕಿನಿಂದ ಕಟ್ಟಿದ ಕಟ್ಟಡಗಳು ಸುರಕ್ಷಿತ ಮತ್ತು ಬಲಿಷ್ಠವಾಗಿಯೂ ಇರುತ್ತವೆ. ಅಲ್ಪಾವಧಿಯಲ್ಲಿ ಕಟ್ಟಲು ಸಾಧ್ಯವಾಗುವುದರಿಂದ ಸಮಯ ಮತ್ತು ಮಾನವಶ್ರಮ ಉಳಿತಾಯವಾಗುತ್ತದೆ. ಉಕ್ಕಿನ ಬಳಕೆಯಿಂದ ಪರಿಸರದ ಮೇಲೂ ಹಾನಿಯಾಗುವುದಿಲ್ಲ’ ಎಂದು ಎವರೆಸ್ಟ್ ಸ್ಟೀಲ್ ಬಿಲ್ಡಿಂಗ್ ಸಲ್ಯೂಷನ್ಸ್ನ ಸಿಇಓ ಎಸ್. ಕೃಷ್ಣಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕೈಗಾರಿಕಾ ಹಾಗೂ ವಾಣಿಜ್ಯ ಕಟ್ಟಡ, ಆಡಳಿತ ಕಚೇರಿ, ಕ್ಯಾಂಟೀನ್, ಅತಿಥಿಗೃಹ, ಮನೋರಂಜನಾ ಕೇಂದ್ರ ನಿರ್ಮಾಣ ಸೇವೆ ಒದಗಿಸುವುದಲ್ಲದೆ, ಪ್ರಿ–ಎಂಜಿನಿಯರ್ಡ್ ಕಟ್ಟಡ, ಹಗುರವಾದ ಸ್ಟೀಲ್ ಫ್ರೇಮಿಂಗ್ ಕಟ್ಟಡ, ಸೌರ ಘಟಕ, ಗೋಡೆ, ಕ್ಲ್ಯಾಡಿಂಗ್, ಕಟ್ಟಡದ ಮುಂಭಾಗ, ಚಾವಣಿ ನಿರ್ಮಾಣಕ್ಕೆ ಬೇಕಾದ ಪರಿಕರಗಳನ್ನು ಕಂಪನಿ ತಯಾರಿಸುತ್ತಿದೆ’ ಎಂದರು.
‘ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ನಮ್ಮ ಕಂಪನಿಯು ಒಂದೇ ಚಾವಣಿಯಡಿ ಒದಗಿಸುತ್ತದೆ. ಪ್ರತಿವರ್ಷ ಕಂಪನಿಯು 2 ಸಾವಿರದಿಂದ 4 ಸಾವಿರ ಮೆಟ್ರಿಕ್ ಟನ್ ಸಾಮಗ್ರಿಗಳನ್ನು ಪೂರೈಸುತ್ತದೆ. ಈ ಕ್ಷೇತ್ರದಲ್ಲಿ ಶೇ 15ರಷ್ಟು ಪಾಲು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಕರ್ನಾಟಕದಿಂದಲೇ ವಾರ್ಷಿಕ ₹50 ಕೋಟಿ ವಹಿವಾಟು ನಡೆಸುವ ಗುರಿಯನ್ನು ಕಂಪನಿ ಹೊಂದಿದೆ’ ಎಂದು ಕೃಷ್ಣಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.