ನವದೆಹಲಿ : ವೇತನದಾರರು ಮತ್ತು ವೃತ್ತಿನಿರತರಲ್ಲಿ ಬಹುತೇಕರು ತಮ್ಮ ಹಣಕಾಸು ಪರಿಸ್ಥಿತಿ ಬಗ್ಗೆ ಹೆಚ್ಚು ಚಿಂತಿತರಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ದಿನ ನಿತ್ಯದ ವೆಚ್ಚಗಳನ್ನು ನಿಭಾಯಿಸಲು ತಾವು ಪರಿಶ್ರಮಪಡುತ್ತಿದ್ದೇವೆ ಎಂದು ಹೆಚ್ಚಿನವರು ಹೇಳಿಕೊಂಡಿದ್ದಾರೆ. ಸಾಲ ನೀಡುವ ಕಂಪನಿ ಇಂಡಿಯಾಲೆಂಡ್ಸ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 5 ಸಾವಿರ ವೃತ್ತಿನಿರತರು ವೈಯಕ್ತಿಕ ಹಣಕಾಸು ವಿಷಯದಲ್ಲಿ ತಾವು ಹೆಚ್ಚು ಜಾಗರೂಕರಾಗಿರುವುದಾಗಿ ತಿಳಿಸಿದ್ದಾರೆ. ಮುಂದಿನ ಕೆಲ ತಿಂಗಳವರೆಗೆ ತಮ್ಮೆಲ್ಲ ವೆಚ್ಚಗಳ ಬಗ್ಗೆ ಎಚ್ಚರಿಕೆಯಿಂದ ವರ್ತಿಸುವುದಾಗಿ ಶೇ 94ರಷ್ಟು ಜನರು ಹೇಳಿಕೊಂಡಿದ್ದಾರೆ.
ಕೋವಿಡ್ ಪಿಡುಗಿನಿಂದಾಗಿ ವೇತನದಾರರು ಮತ್ತು ವೈಯಕ್ತಿಕ ವೃತ್ತಿ ನಿರತರ ಹಣಕಾಸು ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ದಿನನಿತ್ಯದ ವೆಚ್ಚಗಳನ್ನು ಸರಿದೂಗಿಸಲು ತಾವು ಕಷ್ಟಪಡುತ್ತಿರುವುದಾಗಿ ಶೇ 82ರಷ್ಟು ಜನರು ತಿಳಿಸಿದ್ದಾರೆ.
ತಮ್ಮ ವೆಚ್ಚಗಳಿಗೆ ಕಡಿವಾಣ ಹಾಕಿರುವುದಾಗಿ ಶೇ 84ರಷ್ಟು ಜನರು ಹೇಳಿದ್ದಾರೆ. ಭವಿಷ್ಯದಲ್ಲಿನ ತಮ್ಮ ಉಳಿತಾಯ ಮತ್ತು ಹಣಕಾಸು ಪರಿಸ್ಥಿತಿ ಬಗ್ಗೆ ಶೇ 90ರಷ್ಟು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯದ ಬಿಕ್ಕಟ್ಟಿನ ಸಂದರ್ಭ ಎದುರಿಸಲು ಸಾಲ ಪಡೆಯಲು ತಾವು ಹಿಂದೇಟು ಹಾಕಿಲ್ಲ ಎಂದು ಅನೇಕರು ತಿಳಿಸಿದ್ದಾರೆ. ವೈಯಕ್ತಿಕ ಸಾಲ ಪಡೆಯಲು ಮುಂದಾಗಿರುವುದಾಗಿ ಶೇ 72ರಷ್ಟು ಜನರು ಹೇಳಿಕೊಂಡಿದ್ದಾರೆ. ವೈದ್ಯಕೀಯ, ಶಿಕ್ಷಣ, ಮನೆ ದುರಸ್ತಿ, ನವೀಕರಣ ಮತ್ತಿತರ ಉದ್ದೇಶಕ್ಕೆ ಸಾಲ ಮಾಡಿರುವುದಾಗಿ ತಿಳಿಸಿದ್ದಾರೆ.
‘ಕೋವಿಡ್ ಪಿಡುಗು ನಮ್ಮೆಲ್ಲರ ಕಾರ್ಯವೈಖರಿ ಬದಲಿಸಿದೆ. ವೇತನವರ್ಗ ಮತ್ತು ವೃತ್ತಿನಿರತರು ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ’ ಎಂದು ಇಂಡಿಯಾ ಲೆಂಡ್ಸ್ನ ಸಿಇಒ ಗೌರವ್ ಛೋಪ್ರಾ ಹೇಳಿದ್ದಾರೆ.
ಆದಾಯ ಮತ್ತು ಉಳಿತಾಯಗಳ ಮೇಲಿನ ಪ್ರತಿಕೂಲ ಪರಿಣಾಮಗಳಿಂದ ರಿಟೇಲ್ ಸಾಲಕ್ಕೆ ಬೇಡಿಕೆ ಹೆಚ್ಚುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಹೂಡಿಕೆ ಆಲೋಚನೆ ತಮಗೆ ಇಲ್ಲ ಎಂದು ಶೇ 76ರಷ್ಟು ಜನರು ಹೇಳಿಕೊಂಡಿದ್ದಾರೆ.
94 %: ಖರ್ಚುವೆಚ್ಚಗಳ ಬಗ್ಗೆ ಎಚ್ಚರಿಕೆ ತಳೆದವರು
90 %: ಭವಿಷ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಕಳವಳ ಹೊಂದಿದವರು
76 %: ಹೊಸ ಹೂಡಿಕೆ ಆಲೋಚನೆ ಇಲ್ಲದವರು
72 %: ವೈಯಕ್ತಿಕ ಸಾಲ ಪಡೆಯಲು ಮುಂದಾದವರು
***
5,000: ಸಮೀಕ್ಷೆಯಲ್ಲಿ ಭಾಗವಹಿಸಿದವರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.