ಬೆಂಗಳೂರು: ‘ಕರ್ನಾಟಕದ ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳು ಹಾಗೂ ವ್ಯಾಪಾರಸ್ಥರು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಸಮೀಕ್ಷೆ ನಡೆಸಲಾಗುವುದು’ ಎಂದುಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್ಕೆಸಿಸಿಐ) ಅಧ್ಯಕ್ಷ ಸಿ.ಆರ್. ಜನಾರ್ಧನ ಅವರು ತಿಳಿಸಿದ್ದಾರೆ.
‘ಚೀನಾದಿಂದ ಅತಿ ಕಡಿಮೆ ಬೆಲೆಯ ವಸ್ತುಗಳ ಆಮದು ಹಾಗೂ ಕೈಗಾರಿಕೆಗಳು ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಪಟ್ಟಿ ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಎಫ್ಕೆಸಿಸಿಐ ಸಹ ಇದಕ್ಕೆ ಕೈಜೋಡಿಸಿದೆ.ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ಮಾಹಿತಿ ಪಡೆದುಕೊಳ್ಳಲಾಗುವುದು.
‘ಚೀನಾ ಬಂಡವಾಳ ಹಾಗೂ ‘ಕಾಂಪಿಟ್ ವಿತ್ ಚೀನಾ’ ಕುರಿತು ಜುಲೈನಲ್ಲಿ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗುವುದು. ವಿಷಯ ತಜ್ಞರನ್ನು ಕರೆಸಿ ಚರ್ಚೆ, ಮಾತುಕತೆ ನಡೆಸಲಾಗುವುದು.ರಾಜ್ಯ ಸರ್ಕಾರ ರಚಿಸಿರುವ ಹೂಡಿಕೆ ಕಾರ್ಯಪಡೆಯಲ್ಲಿ ಎಫ್ಕೆಸಿಸಿಐಗೆ ಪ್ರಾತಿನಿಧ್ಯ ನೀಡಲು ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಕೋರಿಕೆಯನ್ನು ಸರ್ಕಾರ ಇನ್ನೂ ಪರಿಗಣಿಸಿಲ್ಲ. ಈ ವಿಷಯವನ್ನು ಕೈಗಾರಿಕಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಮನಕ್ಕೆ ತರಲಾಗಿದೆ. ನಮ್ಮ ಬೇಡಿಕೆ ಪರಿಗಣಿಸಲು ಆಗ್ರಹಿಸುತ್ತೇನೆ’ ಎಂದು ಹೇಳಿದ್ದಾರೆ.
ಹೊಸ ಕೈಗಾರಿಕಾ ನೀತಿಯಲ್ಲಿ ಬಂಡವಾಳ ಆಕರ್ಷಣೆ ಹಾಗೂ ಕಾಂಪಿಟ್ ವಿತ್ ಚೀನಾ ಯೋಜನೆಗಳಿಗೆ ವಿಶೇಷ ಗಮನ ಹರಿಸಿ ಪ್ಯಾಕೇಜ್ ಘೋಷಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.