ನವದೆಹಲಿ : ಕೋವಿಡ್–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಇದೇ 14ರಂದು ಜಿಎಸ್ಟಿ ಮಂಡಳಿಯು ಸಭೆ ನಡೆಸಿ ಚರ್ಚಿಸುವ ಸಾಧ್ಯತೆ ಇದೆ.
ಲಾಕ್ಡೌನ್ನಿಂದಾಗಿ ವರಮಾನ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡುಬಂದಿದ್ದರೂ, ಅಗತ್ಯವಲ್ಲದ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಒಲವು ಹೊಂದಿಲ್ಲ. ಮಂಡಳಿ ಸಭೆಯುವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಒಂದು ವೇಳೆಗೆ ಅಗತ್ಯವಲ್ಲದ ವಸ್ತುಗಳ ಮೇಲಿನ ತೆರಿಗೆ ದರ ಹೆಚ್ಚಿಸಿದರೆ ಅದರಿಂದ ಬೇಡಿಕೆಯು ಇನ್ನಷ್ಟು ಕುಸಿಯಲಿದ್ದು, ಒಟ್ಟಾರೆ ಆರ್ಥಿಕತೆಯ ಮೇಲೆ ಇನ್ನೂ ಹೆಚ್ಚಿನ ನಕಾರಾತ್ಮಕ ಪರಿಣಾಮ ಉಂಟಾಗಲಿದೆ.
ಲಾಕ್ಡೌನ್ ತೆರವಾದ ಬಳಿಕ ಅಗತ್ಯ ವಸ್ತುಗಳಷ್ಟೇ ಅಲ್ಲದೆ ಎಲ್ಲಾ ದೃಷ್ಟಿಯಿಂದಲೂ ಬೇಡಿಕೆ ಸೃಷ್ಟಿಸುವ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸುಧಾರಿಸುವ ಕೆಲಸ ನಡೆಯಬೇಕಾಗಿದೆ.
ಆರ್ಥಿಕತೆಯ ಮೇಲೆ ಕೋವಿಡ್ ಉಂಟು ಮಾಡಿರುವ ಅಡ್ಡ ಪರಿಣಾಮಗಳನ್ನು ಗಮನಿಸಿದರೆ ವಿಪತ್ತು ತೆರಿಗೆ ಅಥವಾ ಸೆಸ್ ವಿಧಿಸುವುದರಿಂದ ಅಡ್ಡ ಪರಿಣಾಮವೇ ಹೆಚ್ಚು. ಇಂತಹ ನಿರ್ಧಾರಗಳು ಉತ್ಪಾದಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ. ಈಗಾಗಲೇ ಬೇಡಿಕೆ ಕುಸಿದಿದೆ. ಹೀಗಿರುವಾಗ ಈಗ ಸೆಸ್ ವಿಧಿಸಿದರೆ ಬೆಲೆಯಲ್ಲಿ ಏರಿಕೆ ಆಗಲಿದ್ದು, ಮಾರಾಟದ ಮೇಲೆ ಇನ್ನೂ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
ಮಾರ್ಚ್ನಲ್ಲಿ ನಡೆದಿದ್ದ ಸಭೆಯ ವೇಳೆಗೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಲಾಕ್ಡೌನ್ ಸಹ ಜಾರಿಯಾಗಿರಲಿಲ್ಲ. ಹೀಗಾಗಿ ದೇಶದ ಆರ್ಥಿಕತೆಯ ಮೇಲೆ ಕೊರೊನಾದಿಂದ ಆಗಲಿರುವ ಪರಿಣಾಮಗಳ ಬಗ್ಗೆ ಹೆಚ್ಚಿನ ಚರ್ಚೆ ಆಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.