ಬೆಂಗಳೂರು: ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 7.30ಕ್ಕೆ ಏರಿಕೆ ಆಗಿರುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ಸಮೀಕ್ಷೆ ತಿಳಿಸಿದೆ.
ಅಂದರೆ, ಹಣದುಬ್ಬರದ ಕುರಿತು ಆರ್ಬಿಐ ಹಾಕಿಕೊಂಡಿರುವ ಗರಿಷ್ಠ ಮಿತಿಯಾದ ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿಯೇ ಇರಲಿದೆ ಎಂದೂ ಹೇಳಿದೆ.
ಅತಿಯಾದ ಮಳೆ ಮತ್ತು ರಷ್ಯಾ–ಉಕ್ರೇನ್ ಸಂಘರ್ಷದಿಂದಾಗಿ ಎದುರಾಗಿರುವ ಪೂರೈಕೆ ಸಮಸ್ಯೆಗಳಿಂದಾಗಿ ಧಾನ್ಯಗಳು ಮತ್ತು ತರಕಾರಿ ಬೆಲೆಯು ಎರಡು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.
ಭಾರತದ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಗಳಿಕೆಯ ದೊಡ್ಡ ಮೊತ್ತವನ್ನು ಆಹಾರ ವಸ್ತುಗಳಿಗೆ ವೆಚ್ಚ ಮಾಡುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂಕಷ್ಟದಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಈ ವರ್ಗಗಳ ಜನರಿಗೆ ಆಹಾರ ವಸ್ತುಗಳ ಬೆಲೆ ಏರಿಕೆಯು ಇನ್ನಷ್ಟು ಸಂಕಷ್ಟ ಉಂಟುಮಾಡಲಿದೆ ಎಂದು ಸಮೀಕ್ಷೆಯು ಹೇಳಿದೆ.
ಹಣದುಬ್ಬರದ ಕುರಿತಾಗಿ ಅಕ್ಟೋಬರ್ 3ರಿಂದ 7ರವರೆಗೆ 47 ಆರ್ಥಿಕ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಆಗಸ್ಟ್ನಲ್ಲಿ ಶೇ 7ರಷ್ಟು ಇದ್ದಿದ್ದು ಸೆಪ್ಟೆಂಬರ್ನಲ್ಲಿ ಶೇ 7.30ಕ್ಕೆ ಏರಿಕೆ ಆಗಿದೆ ಎಂದು ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.