ADVERTISEMENT

ಎಂಆರ್‌ಪಿಎಲ್‌ ಭಾಗಶಃ ಸ್ಥಗಿತ

ವಾರ್ಷಿಕ ನಿರ್ವಹಣೆ ಕೆಲಸ ಆರಂಭ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 5:56 IST
Last Updated 23 ಏಪ್ರಿಲ್ 2019, 5:56 IST
ಎಂಆರ್‌ಪಿಎಲ್ ಸ್ಥಾವರದ ಸಂಗ್ರಹ ಚಿತ್ರ
ಎಂಆರ್‌ಪಿಎಲ್ ಸ್ಥಾವರದ ಸಂಗ್ರಹ ಚಿತ್ರ   

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಸಂಸ್ಥೆ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ವಾರ್ಷಿಕ ನಿರ್ವಹಣಾ ಕೆಲಸಗಳಿಗಾಗಿ ತನ್ನ ಕೆಲವು ಘಟಕಗಳನ್ನು ಸ್ಥಗಿತಗೊಳಿಸಿದೆ.

ತೈಲ ಸಂಸ್ಕರಣೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕಂಪನಿ ಈ ಕ್ರಮ ಕೈಗೊಂಡಿದೆ. ಒಂದು ತಿಂಗಳವರೆಗೆ ವಾರ್ಷಿಕ ನಿರ್ವಹಣಾ ಕಾರ್ಯ ಮುಂದುವರಿಯಲಿದೆ ಎಂದು ಎಂಆರ್‌ಪಿಎಲ್‌ ಮೂಲಗಳು ತಿಳಿಸಿವೆ.

ನಗರದಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ತೈಲ ಸಂಸ್ಕರಣಾ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂಆರ್‌ಪಿಎಲ್‌ ಅಧಿಕಾರಿಗಳು, ‘ವಾರ್ಷಿಕ ನಿರ್ವಹಣಾ ಕೆಲಸವನ್ನು ಬಹಳ ಮುಂಚಿತವಾಗಿಯೇ ನಿಗದಿ ಮಾಡಲಾಗಿತ್ತು’ ಎಂದರು.

ADVERTISEMENT

‘ನೇತ್ರಾವತಿ ನದಿಯ ಪ್ರದೇಶದಲ್ಲಿ ಎಪಿಪಿಎಲ್‌ ಮತ್ತು ಆರ್‌ಎಜಿಪಿಎಲ್‌ ನಿರ್ಮಿಸಿರುವ ಜಲಾಶಯಗಳಿಂದ ನೀರು ಬಳಕೆ ಮಾಡದಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ನಾವು ಜಿಲ್ಲಾಡಳಿತದ ಆದೇಶವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೇವೆ’ ಎಂದು ಎಂಎಸ್‌ಇಜೆಡ್‌ ಅಧಿಕಾರಿಗಳು ತಿಳಿಸಿದರು.

‘ಎಂಆರ್‌ಪಿಎಲ್‌ನ ಶೇ 50ರಷ್ಟು ಘಟಕಗಳು ವಾರ್ಷಿಕ ನಿರ್ವಹಣೆಗಾಗಿ ಈಗಾಗಲೇ ಸ್ಥಗಿತಗೊಂಡಿವೆ. ಎಂಎಸ್‌ಇಜೆಡ್‌ನ ಕೆಲವು ಘಟಕಗಳನ್ನೂ ಸ್ಥಗಿತಗೊಳಿಸಲಾಗಿದ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತೀಚೆಗೆ ಸುರಿದ ಮಳೆಯಿಂದ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ತುಂಬೆ ಅಣೆಕಟ್ಟೆಯ ಮೇಲ್ಭಾಗದಲ್ಲಿರುವ ಎಎಂಆರ್‌ ಜಲಾಶಯಕ್ಕೆ ಸ್ವಲ್ಪ ನೀರು ಹರಿದುಬಂದಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.