ನವದೆಹಲಿ: ಓಮೈಕ್ರಾನ್ ಪ್ರಕರಣಗಳ ಹೆಚ್ಚಳ ಮತ್ತು ಆರ್ಬಿಐ ರೆಪೊ ದರ ಏರಿಕೆ ಸಾಧ್ಯತೆಯುದೇಶದ ಮ್ಯೂಚುವಲ್ ಫಂಡ್ ಉದ್ಯಮಕ್ಕೆ 2022ರಲ್ಲಿ ಸವಾಲಾಗಿ ಪರಿಣಮಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಓಮೈಕ್ರಾನ್ ತಳಿಯು ಕೊರೊನಾ ಸಾಂಕ್ರಾಮಿಕದ ಮೊದಲ ಎರಡು ಅಲೆಗಳಷ್ಟು ತೀವ್ರವಾಗಿ ಇರಲಾರದು ಎಂದೂ ಕೆಲವು ತಜ್ಞರು ಹೇಳಿದ್ದಾರೆ.
‘ಕೋವಿಡ್ ಜೊತೆ ಬದುಕುವುದನ್ನು ಜಗತ್ತು ಕಲಿತಿದೆ. ಭಾರತದಲ್ಲಿ ಲಸಿಕೆ ನೀಡುವ ಕಾರ್ಯ ಬಹಳ ವೇಗವಾಗಿ ನಡೆದಿದೆ. ಹೀಗಾಗಿ, ಆರ್ಥಿಕತೆಯ ಮೇಲೆ ಓಮೈಕ್ರಾನ್ ಪರಿಣಾಮವು ಕೊರೊನಾದ ಮೊದಲ ಎರಡು ಅಲೆಗಳಷ್ಟು ವಿನಾಶಕಾರಿ ಆಗಿರಲಾರದು’ ಎಂದು ಬರೋಡಾ ಮ್ಯೂಚುವಲ್ ಫಂಡ್ ಕಂಪನಿಯ ಸಿಇಒ ಸುರೇಶ್ ಸೋನಿ ಹೇಳಿದ್ದಾರೆ.
ಬಡ್ಡಿದರವು ಕಡಿಮೆ ಮಟ್ಟದಲ್ಲಿ ಇರುವುದರಿಂದ ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಅರಿವು ಹೆಚ್ಚಾಗುತ್ತಿದೆ. ಉತ್ತಮ ಹೂಡಿಕೆಯು ಉದ್ಯಮದ ನಿರ್ವಹಣಾ ಸಂಪತ್ತು ಹೆಚ್ಚಿಸುವಲ್ಲಿ ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಈಕ್ವಿಟಿಯಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣವು ಷೇರು ಮಾರುಕಟ್ಟೆ ಏರಿಕೆ ಕಾಣಲಿದೆಯೇ, ಇಲ್ಲವೇ ಎನ್ನುವುದರ ಮೇಲೆ ಅವಲಂಬಿತವಾಗಿರಲಿದೆ. ಸೂಚ್ಯಂಕ ಇಳಿಕೆ ಕಂಡಲ್ಲಿ ಬಂಡವಾಳದ ಹೊರಹರಿವು ಕಂಡುಬರಲಿದೆ. ಹೀಗಾಗಿ ಬಡ್ಡಿ ದರದ ಕುರಿತುಆರ್ಬಿಐ ಯಾವ ನಿರ್ಧಾರ ತಳೆಯಲಿದೆ ಎನ್ನುವುದು ಮುಖ್ಯವಾಗಲಿದೆ ಎಂದು ಪ್ರೈಮ್ ಇನ್ವೆಸ್ಟರ್ಸ್.ಇನ್ನ ಸಹ ಸ್ಥಾಪಕಿ ವಿದ್ಯಾ ಬಾಲಾ ಹೇಳಿದ್ದಾರೆ.
ಅಲ್ಪಾವಧಿಯಲ್ಲಿ ಕೊರೊನಾದ ಹೊಸ ತಳಿ ಓಮೈಕ್ರಾನ್ ಹರಡುವಿಕೆ ಯಾವ ಸ್ವರೂಪದಲ್ಲಿ ಇರಲಿದೆ ಎನ್ನುವುದು ಬಂಡವಾಳ ಹರಿವಿನ ಮೇಲೆ ಪ್ರಭಾವ ಬೀರಲಿದೆ. ಒಂದೊಮ್ಮೆ ಸಾಂಕ್ರಾಮಿಕದ ಮೂರನೇ ಅಲೆ ಬಂದಲ್ಲಿ, ಅದರಿಂದಾಗಿ ಒಂದಿಷ್ಟು ಲಾಭ ಗಳಿಕೆಯ ವಹಿವಾಟು ನಡೆಯಬಹುದು ಎಂದು ಮಾರ್ನಿಂಗ್ಸ್ಟಾರ್ ಇಂಡಿಯಾ ಸಂಸ್ಥೆಯ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.