ಸಂಕೇಶ್ವರ (ಬೆಳಗಾವಿ ಜಿಲ್ಲೆ): ಸಮೀಪದ ಕುರಣಿ ಗ್ರಾಮದ ರೈತ ಅಡಿವೆಪ್ಪ ಶಿವಪ್ಪ ಕಾಚಿ ಅವರು 30 ಗುಂಟೆ ಜಮೀನಿನಲ್ಲಿ 12 ಕ್ವಿಂಟಲ್ ಸೋಯಾಬಿನ್ ಇಳುವರಿ ಪಡೆದಿದ್ದಾರೆ. ತಾವೇ ಕಾದಿಟ್ಟ ಬಿತ್ತನೆ ಬೀಜಗಳಿಗೆ ಸರಿಯಾಗಿ ಪೋಷಣೆ, ಜತೆಗೆ ಸಕ್ಕರೆ ಕಾರ್ಖಾನೆಯಿಂದ ಹೊರಬರುವ ವ್ಯರ್ಥ ಮೊಲಾಸಿಸ್ ಅನ್ನು ಬಿತ್ತನೆ ವೇಳೆ ಬಳಸುವ ಮೂಲಕ ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿ ವರ್ಷ ರೈತರಿಗೆ ವಿವಿಧ ಕಂಪನಿಗಳು ಬಿತ್ತನೆ ಬೀಜ ನೀಡುತ್ತವೆ. ಆದರೆ, ಅಡಿವೆಪ್ಪ ಕಂಪನಿ ಬೀಜಗಳಿಂದ ದೂರ. ಹಿಂದಿನ ವರ್ಷ ತಾವೇ ಬೆಳೆದ ಬೆಳೆಯಲ್ಲಿನ ಕೆಲ ಭಾಗವನ್ನು ಬಿತ್ತನೆ ಬೀಜಕ್ಕಾಗಿ ಇಟ್ಟುಕೊಳ್ಳುವುದು ಅವರ ರೂಢಿ. ಕಾಯ್ದಿಟ್ಟುಕೊಂಡಿದ್ದ ಸೋಯಾಬಿನ್ ಬೀಜಗಳಿಂದಲೇ ಈಗ ಭರ್ಜರಿ ಇಳುವರಿ ಪಡೆದಿದ್ದಾರೆ.
ಸೋಯಾಬಿನ್ಗೆ ನೀರಾವರಿ ಅವಶ್ಯಕತೆ ಇಲ್ಲ ಎಂಬ ಕಾರಣಕ್ಕೆ ಒಣಭೂಮಿಯ ರೈತರೇ ಹೆಚ್ಚಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಒಂದು ಎಕರೆಗೆ (40 ಗುಂಟೆ) ಗರಿಷ್ಠ 7ರಿಂದ 8 ಕ್ವಿಂಟಲ್ನಷ್ಟು ಇಳುವರಿ ಬರುತ್ತದೆ. ಆದರೆ, ಅಡಿವೆಪ್ಪ ಅವರು ಮಾಡಿದ ಪ್ರಯೋಗ ಉತ್ತಮ ಫಸಲು ನೀಡಿದೆ.
ಸೋಯಾ ಬೀಜ ಬಿತ್ತನೆ ಮಾಡುವ ವೇಳೆ ಸಕ್ಕರೆ ಕಾರ್ಖಾನೆಯಿಂದ ಬರುವ ಮೊಲಾಸಿಸ್ ನೀರನ್ನು ಹಾಕಿದ್ದರು. ವಾರದ ಬಳಿಕ ಕೊಟ್ಟಿಗೆ ಗೊಬ್ಬರ ನೀಡಿದ್ದರು. ನಂತರ ಒಂದು ಚೀಲ ಡಿಎಪಿ ಗೊಬ್ಬರ, ತಿಂಗಳ ಬಳಿಕ 19:19:19 ಗೊಬ್ಬರ, ಮೂರನೇ ತಿಂಗಳಿಗೆ 00:00:50 ಪೊಟ್ಯಾಷ್ ಲಿಕ್ವಿಡ್ ಗೊಬ್ಬರ ಉಣಿಸಿದ್ದಾರೆ. ಜೂನ್ನಲ್ಲಿ ಬಿತ್ತನೆ ಮಾಡಿದ ಬೆಳೆ ಈಗ ಕಟಾವು ನಡೆದಿದೆ. ಹೊಲದ ತುಂಬೆಲ್ಲ ಸೋಯಾ ಗೊಂಚಲಿನಲ್ಲಿ ದಪ್ಪನೆ ಗಾತ್ರದ ಕಾಯಿಗಳು ಸಮೃದ್ಧವಾಗಿ ಕಟ್ಟಿವೆ.
‘ಒಳ್ಳೆಯ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಬಿತ್ತನೆ ಮಾಡುವಾಗ ಕೊಟ್ಟಿಗೆ ಗೊಬ್ಬರ ಬಳಸಬೇಕು. ಬೆಳೆ ಮೇಲೆ ಬಂದಾಗ ಸರಿಯಾದ ಸಮಯಕ್ಕೆ ಪೋಷಕಾಂಶಗಳನ್ನು ನೀಡಬೇಕು. ಜತೆಗೆ ಮೊಲಾಸಿಸ್ ಬಳಕೆ ಯಶಸ್ವಿಯಾಗಿದೆ’ ಎನ್ನುವುದು ಅಡಿವೆಪ್ಪ ಅವರ ಅನುಭವ.
ಆಸಕ್ತ ರೈತರು ಅವರನ್ನು (9008718952) ಸಂಪರ್ಕಿಸಬಹುದು.
ರೋಗಾಣುಗಳು ಅಂಟಿಕೊಳ್ಳದಂತೆ ಬೀಜಗಳಿಗೆ ಹೆಚ್ಚು ಪೋಷಣೆ ಸಿಗುವಂತೆ ಮಾಡಲು ನಾನು ಮೊಲಾಸಿಸ್ ಉಪಯೋಗಿಸಿದ್ದೆ–ಅಡಿವೆಪ್ಪ ಶಿವಪ್ಪ, ಕಾಚಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.