ADVERTISEMENT

ಆರ್ಥಿಕ ಚೇತರಿಕೆ ನಿರೀಕ್ಷೆಗಿಂತ ವೇಗವಾಗಿದೆ: ಎಚ್‌ಡಿಎಫ್‌ಸಿ ಲಿ., ಸಿಇಒ

ಪಿಟಿಐ
Published 11 ಅಕ್ಟೋಬರ್ 2020, 4:14 IST
Last Updated 11 ಅಕ್ಟೋಬರ್ 2020, 4:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶದ ಆರ್ಥಿಕತೆಯು ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿನ ಬೆಳವಣಿಗೆಯು ಹಿಂದಿನ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದ ಬೆಳವಣಿಗೆಯನ್ನೂ ಮೀರಿಸಲಿದೆ ಎಂದು ’ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಸಿಇಒ ಕೇಕಿ ಮಿಸ್ತ್ರಿ ಹೇಳಿದ್ದಾರೆ.

‘ಕೊರೊನಾ ವೈರಸ್‌ನ ಎರಡನೇ ಅಲೆ ಬರುವುದೇ ಅಥವಾ ಇಲ್ಲವೇ ಎನ್ನುವುದರ ಮೇಲೆ ಬಹಳಷ್ಟು ಅಂಶಗಳು ಅವಲಂಬಿತವಾಗಿವೆ. ಇನ್ನೊಂದು ಲಾಕ್‌ಡೌನ್‌ ಸಹಿಸುವುದು ಕಷ್ಟ ಎನ್ನುವುದು ಸರ್ಕಾರಕ್ಕೂ ತಿಳಿದಿದೆ. ಉದ್ಯೋಗ ಸೃಷ್ಟಿ ಮತ್ತು ಜನರ ಬಳಿ ಹಣ ಇರುವಂತೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಉಪಭೋಗದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಚೇತರಿಕೆಗೆ ಮುಂದಾಗಬೇಕು’ ಎಂದು ತಿಳಿಸಿದ್ದಾರೆ.

ಆಲ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ (ಎಐಎಂಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿತಕಾರಿ ಮಟ್ಟದ ಬಡ್ಡಿದರವು ಈಗಿರುವಂತೆಯೇ ಮುಂದುವರಿಯಲಿದೆ. ಆರ್ಥಿಕ ಚಟುವಟಿಕೆಗಳು ಹೆಚ್ಚಿನ ವೇಗ ಪಡೆದುಕೊಂಡ ಮೇಲೆ ಹಾಗೂ ಹಣದುಬ್ಬರ ದರ ಏರಿಕೆಯಾದರೆ ಮಾತ್ರವೇ ಬಡ್ಡಿದರದಲ್ಲಿ ಏರಿಕೆ ಆಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಸುವ ವಲಯಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಬೇಕಿದೆ ಎಂದಿದ್ದಾರೆ. ಕೃಷಿಯ ನಂತರ ಗೃಹ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರವು ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ವಲಯಗಳಾಗಿವೆ. ತಯಾರಿಕಾ ವಲಯಕ್ಕೂ ಬೆಂಬಲ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.