ADVERTISEMENT

ಹುಸಿ ಭಯ ಸೃಷ್ಟಿಸಿದ ಜಾಗತಿಕ ಸಂಗತಿಗಳು

ಕೆ.ಜಿ ಕೃಪಾಲ್
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಷೇರು ಪೇಟೆಯಲ್ಲಿನ ಸಧೃಡ ಚಿತ್ತದ ಹೂಡಿಕೆದಾರರ ಮನೋಸ್ಥೈರ್ಯವನ್ನು ಅಲುಗಾಡಿಸಿ ಹೆದರಿಸಿದ ವಾತಾವರಣವನ್ನು ಈ ವಾರ ಕಾಣುವಂತಾಯಿತು. ಜಪಾನಿನ ಭೂಕಂಪ ಮತ್ತು ಸುನಾಮಿಗಳು ಭಾರಿ ಪ್ರಭಾವ ಬೀರುವುದೆಂಬ ಹೆದರಿಕೆಯನ್ನು ಮೂಡಿಸಿ ಆರಂಭವಾದ ಪೇಟೆ ಸೋಮವಾರದಂದು 265 ಪಾಯಿಂಟುಗಳ ಮುನ್ನಡೆಯನ್ನು ದಾಖಲಿಸಿತು. ಮಂಗಳವಾರಷೇರುಪೇಟೆಗಳು ಈ ಭೂಕಂಪ ಮತ್ತು ಸುನಾಮಿಗಳನ್ನು ಕಡೆಗಣಿಸಿದವೆಂಬ ಮಾಧ್ಯಮಗಳ ಪ್ರಚಾರವು ನಿರುಪಯುಕ್ತವಾಗಿ ಸೂಚ್ಯಂಕವು 271 ಪಾಯಿಂಟುಗಳ ಇಳಿಕೆ ಕಂಡಿತು. ಬುಧವರ ಆರ್‌ಬಿಐ. 17 ರಂದು ಪ್ರಕಟಿಸಬಹುದಾದ ಸಾಲ ನೀತಿಯ ನಿರೀಕ್ಷೆಯಿಂದ ಬ್ಯಾಂಕಿಂಗ್ ವಲಯದ ಷೇರುಗಳು ಇತರೆ ಸಮೂಹದೊಡನೆ 191 ಪಾಯಿಂಟು ಏರಿಕೆ ಕಾಣುವಂತೆ ಮಾಡಿತು. ಆದರೆ ಗುರುವಾರ ಆರ್‌ಬಿಐ ಕೇವಲ 25 ಮೂಲಾಂಶಗಳ ರಿಪೊ ಹಾಗೂ ರಿವರ್ಸ್ ರಿಪೊ ದರಗಳನ್ನು ಹೆಚ್ಚಿಸಿತು. ‘ಸಿಆರ್‌ಆರ್’ ಮತ್ತು ‘ಎಸ್‌ಎಲ್‌ಆರ್’ ಗಳನ್ನು ಬದಲಿಸುವ ಗೋಜಿಗೆ ಹೋಗಲಿಲ್ಲವಾದರೂ ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡದಿಂದ ಸೂಚ್ಯಂಕವು 208 ಪಾಯಿಂಟುಗಳ ಇಳಿಕೆಯಿಂದ ವಾರದಲ್ಲಿ ಒಟ್ಟಾರೆ 295 ಪಾಯಿಂಟುಗಳ ಕುಸಿತವನ್ನು ದಾಖಲಿಸಿತು.

ದಿನ ಬಿಟ್ಟು ದಿನ ಏರಿಕೆ - ಇಳಿಕೆಗಳ ಉಯ್ಯಾಲೆಯಲ್ಲಿದ್ದ ಸೂಚ್ಯಂಕದ ಪಥದಿಂದ ಹೂಡಿಕೆದರರು ಅದರಲ್ಲೂ ಸಣ್ಣ ಹೂಡಿಕೆದಾರರು ಷೇರು ಪೇಟೆಯಲ್ಲಿ ನಿರಾಸಕ್ತರಾಗಿದ್ದರೂ ವಹಿವಾಟುದಾರರು ಜಾಗತಿಕ ಬೆಳವಣಿಗೆಗೆ, ಜಪಾನಿನ ವಿಕಿರಣ, ಸ್ಥಳೀಯವಾಗಿ ಪ್ರಭಾವಿಯಾದ ರಾಜಕೀಯ ಗೊಂದಲಗಳು ಎಲ್ಲದರ ಜೊತೆಗೆ ಗಮನಕ್ಕೆ ಬಾರದೆ ಎಲೆ ಮರೆ ಕಾಯಿಯ ಪ್ರಭಾವ ಬೀರುತ್ತಿರುವ ಆರ್ಥಿಕ ವರ್ಷಂತ್ಯಗಳ ಕಾರಣ ನೀರಸ ಚಟುವಟಿಕೆಯಿಂದ ಚಟುವಟಿಕೆಯನ್ನು ಕ್ಷಿಣಿತಗೊಳಿಸುವಂತೆ ಮಾಡಿತು. ಮಧ್ಯಮ ಶ್ರೇಣಿಯ ಸೂಚ್ಯಂಕ 19 ಪಾಯಿಂಟುಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 102 ಪಾಯಿಂಟು ಕುಸಿತ ಕಂಡಿತು. ವಿದೇಶೀ ವಿತ್ತೀಯ ಸಂಸ್ಥೆಗಳು ಒಟ್ಟಾರೆ ್ಙ1224 ಕೋಟಿ ಮಾರಾಟ ಮಾಡಿದರೆ ಸ್ಥಳೀಯ ಸಂಸ್ಥೆಗಳು     ರೂ. 1629 ಕೋಟಿ ಹೂಡಿಕೆ ಮಾಡಿವೆ. ಷೇರು ಪೇಟೆ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ ರೂ. 64.66 ಲಕ್ಷ ಕೋಟಿಯಿಂದ ರೂ. 64.24 ಲಕ್ಷ ಕೋಟಿಗೆ ಇಳಿದಿದ್ದು ನೀರಸ ವಾತಾವರಣಕ್ಕೆ ಸಾಕ್ಷಿಯಾಗಿದೆ.

ಲಾಭಾಂಶ ವಿಚಾರ
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಶೇ. 132.50, ಬೆಸ್ಟ್ ಈಸ್ಟರ್ನ್ ಹೋಟೆಲ್ಸ್ ಶೇ. 15, ಇಂಜಿನಿಯರ್ಸ್ ಇಂಡಿಯಾ ಶೇ. 20 (ಮುಖ ಬೆಲೆ ರೂ. 5), ಹೈಟೆಕ್ ಗೇರ್ಸ್‌ ಶೇ. 15, ಶ್ರೀರಾಯಲ್ ಸೀಮಾ ಹೈಸ್ಟ್ರೇಂತ್ ಶೇ. 15, ಸೆಲಾನ್ ಎಕ್ಸ್‌ಪ್ಲೊರೇಷನ್ ಶೇ. 15, ಸಿಂಪ್ಲೇರ್ ಹೋಟೆಲ್ಸ್ ಶೇ. 35 (ನಿಗದಿತ ದಿನಾಂಕ ಮಾರ್ಚ್ 29).

ಬೋನಸ್ ಷೇರಿನ ವಿಚಾರ
* ಎಸ್‌ವಿಸಿ ರಿಸೋರ್ಸಸ್ ಲಿ. ಕಂಪೆನಿ ವಿತರಿಸಲಿರುವ 1:3 ಬೋನಸ್‌ಗೆ 22ನೇ ಮಾರ್ಚ್ ನಿಗದಿತ ದಿನವಾಗಿದೆ.

* ‘ಟಿ’ಗುಂಪಿನ ಮೊನೊಟೊನ ಸೆಕ್ಯುರಿಟೀಸ್ ಲಿಮಿಟೆಡ್ 4:5 ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಏಪ್ರಿಲ್ 18 ವಿಶೇಷ ಸಾಮಾನ್ಯ ಸಭೆ ಕರೆದಿದೆ.

ಹೊಸ ಷೇರಿನ ವಿಚಾರ
* ಧನುಸಿರಿ ಪೆಟ್ರೋ ಕಂ ಲಿಮಿಟೆಡ್ ಕಂಪೆನಿಯ ಜಯಪುರ್ ಪಾಪೇಟ್ ಫ್ಯಾಕ್ಟರಿ ಅಂಡ್ ಇನ್‌ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ಗೆ ವರ್ಗಾಯಿಸಿದ ನಂತರದ ಧನುಸೇರಿ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ 12 ರಿಂದ ‘ಟಿ’ ಗ್ರೂಪ್‌ನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ಇತ್ತೀಚೆಗೆ ಪ್ರತಿ ಷೇರಿಗೆ ರೂ. 195-205 ಗಳ ಅಂತರದಲ್ಲಿ ಸಾರ್ವಜನಿಕ ವಿತರಣೆ ಮಾಡಿದ ಲೌವೆಬಲ್ ಲಿಂಗರಿ ಲಿಮಿಟೆಡ್ ವಿತರಣೆ ಬೆಲೆಯನ್ನು ರೂ. 205ಕ್ಕೆ ನಿಗದಿ ಪಡಿಸಿದೆ.

ಮುಖಬೆಲೆ ಸೀಳಿಕೆ ವಿಚಾರ
* ಅಟೋರ್ ಫಾಂಟೆಕ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 2ಕ್ಕೆ ಸೀಳಲು ಮಾರ್ಚ್ 29 ನಿಗದಿತ ದಿನವಾಗಿದೆ.

* ನೌವಿಯು ಮಲ್ಟಿ ಮೀಡಿಯಾ ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ. 10 ರಿಂದ ರೂ. 1ಕ್ಕೆ ಸೀಳಲು ಏಪ್ರಿಲ್ 8 ನಿಗದಿತ ದಿನವಾಗಿದೆ.

ಹಕ್ಕಿನ ಷೇರಿನ ವಿಚಾರ
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸಲಿರುವ ಪ್ರತಿ ಷೇರಿಗೆ ರೂ. 103 ರಂತೆ, ಹಕ್ಕಿನ ಷೇರು ಯೋಜನೆ 24ನೇ ಮಾರ್ಚ್‌ನಿಂದ ಏಪ್ರಿಲ್ 7ರ ವರೆಗೂ ತೆರೆದಿರುತ್ತದೆ.

* ಎಲ್‌ಪೋರ್ಚ್ ಲಿ. ಕಂಪೆನಿಯು 1,29,44,286 ಷೇರುಗಳನ್ನು ಹಕ್ಕಿನ ರೂಪದಲ್ಲಿ ವಿತರಿಸಲಿದೆ. ಪ್ರತಿ ಷೇರಿಗೆ 3 ರಂತೆ ಮುಖಬೆಲೆ ರೂ. 10 ರಂತೆ ವಿತರಿಸಲು ನಿರ್ಧರಿಸಿದೆ.

ಷೇರು ಹಿಂಕೊಳ್ಳುವಿಕೆ ವಿಚಾರ
ಎಚ್.ಇ.ಜಿ. ಲಿಮಿಟೆಡ್ ಕಂಪೆನಿಯು ಕಂಪೆನಿ ಆ್ಯಕ್ಟ್ 1956ನ ಸೆಕ್ಷನ್ 77 ಎ (2) (ಬಿ) ಯಂತೆ ಪ್ರತಿ ಷೇರಿಗೆ ರೂ. 350ರ ವರೆಗೂ. ರೂ. 67.50 ಕೋಟಿ ಮೀರದಂತೆ ಷೇರುಗಳನ್ನು ಹಿಂಕೊಳ್ಳಲು ತೀರ್ಮಾನಿಸಿದೆ.

ಕಂಪೆನಿ ವಿಲೀನ ವಿಚಾರ
ಸೀಮನ್ಸ್ ಹೆಲ್ತ್‌ಕೇರ್ ಡಯಾಗ್ನಾಸ್ಟಿಕ್ಸ್ ಲಿಮಿಟೆಡ್ ಕಂಪೆನಿಯಲ್ಲಿ ಸೀಮನ್ಸ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಿಕೊಳ್ಳಲು 23ನೇ ಮಾರ್ಚ್ ನಿಗದಿತ ದಿನವಾಗಿದ್ದು 22 ರಿಂದ ಸೀಮನ್ಸ್ ಹೆಲ್ತ್‌ಕೇರ್ ಡಯಾಗ್ನಾಸ್ಟಿಕ್ಸ್ ಲಿಮಿಟೆಡ್ ಷೇರು ವಹಿವಾಟು ನಿಲ್ಲಿಸಲಾಗುವುದು. ಪ್ರತಿ ಒಂದು ಸೀಮನ್ಸ್ ಹೆಲ್ತ್‌ಕೇರ್ ಡಯಾಗ್ನಿಸ್ಟಿಕ್ಸ್ ಲಿ. ಷೇರಿಗೆ 2 ಸೀಮನ್ಸ್ ಲಿ. ಷೇರು ನೀಡಲಾಗುವುದು.

ಮುಖ ಬೆಲೆ ಕ್ರೋಢೀಕರಣ
ಗುಜರಾತ್ ಮೆಟಾಲಿಕ್ ಕೋಲ್ ಅಂಡ್ ಕೋಕ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 100ಕ್ಕೆ ಕ್ರೋಡೀಕರಿಸಿದ್ದು ಮೊದಲಿನ ರೂ. 10ರ ಮುಖಬೆಲೆಯ 10 ಷೇರನ್ನು ಈಗ ರೂ. 100ರ ಮುಖಬೆಲೆಯ 1 ಷೇರಾಗಿ ಪರಿವರ್ತಿಸಲಾಗಿದ್ದು, 18ನೇ ಮಾರ್ಚ್‌ನಿಂದ ‘ಬಿ’ ಗುಂಪಿನಲ್ಲಿ ಹೊಸ ಅವತಾರದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಕಂಪೆನಿ ಹೆಸರಿನ ಬದಲಾವಣೆ
* ಆಟ್ಕೊ ಕಾರ್ಪೊರೇಷನ್ ಲಿ. ಕಂಪೆನಿಯ ಹೆಸರನ್ನು ವಾರದ್ ವೆಂಚರ್ಸ್ ಲಿ. ಎಂದು ಬದಲಿಸಲಾಗಿದೆ.

ವಾರದ ಪ್ರಶ್ನೆ
ಈಗ್ಗೆ ಮೂರು ವರ್ಷಗಳ ಹಿಂದೆ ನಾನು ರೂ. 50 ಸಾವಿರವನ್ನು ಎಲ್‌ಐಸಿಯ ಯೋಜನೆಯೊಂದರಲ್ಲಿ ತೊಡಗಿಸಿದ್ದೇನೆ. ಆ ಸಂದರ್ಭದಲ್ಲಿ ನನಗೆ ಮೂರು ವರ್ಷಗಳಲ್ಲಿ ಹಣ ಎರಡು ಪಟ್ಟಾಗುವುದೆಂಬ ಭರವಸೆ ನೀಡಿದ್ದರು. ಆದರೆ ಈಗ ಅದನ್ನು ಎನ್‌ಕ್ಯಾಶ್ ಮಾಡಲು ವಿಚಾರಿಸಿದಾಗ ಕೇವಲ ನಲವತ್ತು ಸಾವಿರದಷ್ಟು ಮಾತ್ರ ದೊರೆಯುವುದೆನ್ನುತ್ತಿದ್ದಾರೆ. ಹೂಡಿಕೆ ಹಣವೂ ಬರುವುದಿಲ್ಲ. ದಯವಿಟ್ಟು ಏನು ಮಾಡುವುದೆಂದು ತಿಳಿಸಿರಿ.

ಉತ್ತರ: ಯಾವುದೇ ಯೋಜನೆಗಳಲ್ಲಿ ಹಣ ತೊಡಗಿಸುವಾಗ ಸಂಪೂರ್ಣ ಮಾಹಿತಿ ಪಡೆದು ಕಾರ್ಯ ಪ್ರವೃತ್ತರಾಗುವುದು ಅತ್ಯವಶ್ಯಕ. ಕಾರಣ ಈಗಿನ ದಿನಗಳಲ್ಲಿ ಷೇರುಪೇಟೆ ಸಂಬಂಧಿತ ಯೋಜನೆಗಳೇ ಹೆಚ್ಚು ಪ್ರಚಲಿತವಾಗಿವೆ. ಹೂಡಿಕೆ ಸಂದರ್ಭದಲ್ಲಿ ಹಲವರು ಕೇವಲ ವ್ಯವಹಾರಿಕವಾಗಿ ವಿವರಿಸಿದರೂ ಅಂತರ್ಗತ ಸತ್ಯ ವಿವರಗಳನ್ನು ತಿಳಿಯಬೇಕಾಗುವುದು ಅನಿವಾರ್ಯ. ಷೇರು ಪೇಟೆಗಳು ಇತ್ತೀಚಿನ ದಿನಗಳಲ್ಲಿ ಅನಿಶ್ಚತೆ ಮತ್ತು ಅಪಾರ ಏರಿಳಿತ ಪ್ರದರ್ಶಿಸುತ್ತಿದ್ದು, ಈ ಏರಿಳಿತಗಳು ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಕಂಪೆನಿಗಳಲ್ಲಿ ಅತಿ ಹೆಚ್ಚಾಗಿರುತ್ತದೆ. ಹಲವಾರು ಭಾರಿ ಉತ್ತಮ ಕಂಪೆನಿಗಳಲ್ಲಿಯೂ ಈ ಏರಿಳಿತಗಳು ತೀವ್ರವಾಗಿರುತ್ತವೆ.

ಉದಾಹರಣೆಗೆ ಅಮೆರಿಕದ ಎಫ್.ಡಿ.ಎ.ಯ ಕ್ರಮದ ಕಾರಣ ರೂ. 156ರವರೆಗೂ ಕುಸಿದಿದ್ದ ಅರವಿಂದೋ ಫಾರ್ಮ ಕೆಲವೇ ದಿನಗಳಲ್ಲಿ ರೂ. 200ನ್ನು ದಾಟಿದೆ. ಟಾಟಾ ಕಾಫಿ ಷೇರು ಒಂದೇ ತಿಂಗಳ ಅವಧಿಯಲ್ಲಿ ರೂ. 557 ರಿಂದ  ಒಂದು ಸಾವಿರ ರೂಪಾಯಿ ದಾಟಿತು ಈ ವಾರ ರಿಲೈಯನ್ಸ್ ಇಂಡಸ್ಟ್ರೀಸ್, ಬಿ.ಎಚ್.ಇ.ಎಲ್, ಮಾರುತಿ ಸುಜುಕಿ ಯಂತಹ ಷೇರುಗಳೂ ಸಹ ಇದೇ ರೀತಿ ತೀವ್ರವಾದ ಏರಿಳಿತ ಕಂಡಿವೆ. ಪೇಟೆಯಲ್ಲಿ ಸ್ಥಿರತೆ ಎಂಬುದು ಕಾಣುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ವಹಿವಾಟು ನಡೆಸುವ ಸಂಸ್ಥೆಗಳು ಮತ್ತು ಅವುಗಳ ಗಾತ್ರ ಅತಿ ದೊಡ್ಡದಾಗಿರುವುದಾಗಿದೆ. ಮಾರ್ಚ್ ವರ್ಷಾಂತ್ಯದ ನಂತರ ಮುಂದಿನ ವಿತ್ತೀಯ ವರ್ಷದಲ್ಲಿ ಪೇಟೆಯು ಏರಿಕೆ ಏನಾದರೂ ಕಂಡರೆ, ನಿಮ್ಮ ಹೂಡಿಕೆಯ ಎನ್‌ಎವಿಯೂ ಹೆಚ್ಚುತ್ತದೆ. ನಿಮ್ಮ ಹೂಡಿಕೆಯ ಎನ್‌ಎವಿಯಲ್ಲಿ ಹೆಚ್ಚಾಗಿದ್ದಾಗ ನೀವು ‘ಎನ್‌ಕ್ಯಾಶ್’ ಮಾಡಿ ಹೊರಬನ್ನಿರಿ. ಅಲ್ಲಿಯವರೆಗೂ ಎನ್‌ಎವಿ ಬಗ್ಗೆ ಹೆಚ್ಚಿನ ನಿಗಾವಹಿಸಿರಿ. ‘ಅರಿತು ಹೂಡಿಕೆ ಮಾಡಿ ಅನುಸರಿಸಬೇಡಿ’ ಎಂಬುದು ಈಗ ಅತಿ ಮುಖ್ಯವಾದ ಅಂಶ.

ADVERTISEMENT

 98863-13380
 (ಮಧ್ಯಾಹ್ನ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.