ADVERTISEMENT

‘ಶಾಂತಿಯ ತೋಟ’ದಲ್ಲಿ ಹೆಚ್ಚುತ್ತಿರುವ ಅಸಹನೆ

ಹೊನಕೆರೆ ನಂಜುಂಡೇಗೌಡ
Published 9 ಫೆಬ್ರುವರಿ 2014, 19:30 IST
Last Updated 9 ಫೆಬ್ರುವರಿ 2014, 19:30 IST
‘ಶಾಂತಿಯ ತೋಟ’ದಲ್ಲಿ ಹೆಚ್ಚುತ್ತಿರುವ ಅಸಹನೆ
‘ಶಾಂತಿಯ ತೋಟ’ದಲ್ಲಿ ಹೆಚ್ಚುತ್ತಿರುವ ಅಸಹನೆ   

‘ಆ ಮ್‌ ಆದ್ಮಿ ಪಕ್ಷ’ದ ಮುಖಂಡರು ಮತ್ತವರ ಬೆಂಬಲಿಗರು ಕಳೆದ ತಿಂಗಳು ರಾಜಧಾನಿಯ ಮಾಳವೀಯ ನಗರ­ದಲ್ಲಿ ಉಗಾಂಡದ ಯುವತಿಯರ ಮೇಲೆ ದೌರ್ಜನ್ಯ ಎಸಗಿದರು. ಈ ಕಹಿ ಘಟನೆ ಮರೆ­ಯುವ ಮುನ್ನವೇ ಲಾಜಪತ್‌ ನಗರದಲ್ಲಿ ಅರುಣಾ­ಚಲ ಪ್ರದೇಶದ ಯುವಕ­ನನ್ನು ಕೊಲೆ ಮಾಡ­ಲಾಗಿದೆ. ನಿಡೊ ಎಂಬಾತನ ಜೀವಕ್ಕೆ ಸಂಚು ತಂದಿದ್ದು ಆತನ ಕೂದಲಿನ ಬಣ್ಣ. ನಮ್ಮವರನ್ನೇ  ಬಣ್ಣ ಮತ್ತು ಸೌಂದರ್ಯದ ಹೆಸರಿನಲ್ಲಿ ಅವ­ಮಾನಿ­ಸುವ ಬಹಳಷ್ಟು ಪ್ರಸಂಗಗಳು ನಡೆಯುತ್ತಿವೆ.

ಗಾಂಧಿ, ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಹುಟ್ಟಿದ ನೆಲದಲ್ಲಿ ಜಾತಿ, ಧರ್ಮ, ಬಣ್ಣದ ಹೆಸರಿನಲ್ಲಿ ರಕ್ತಪಾತಗಳಾಗುತ್ತಿವೆ. ಭಾಷೆ, ಗಡಿ– ದಿಕ್ಕುಗಳ ಹೆಸರಿನಲ್ಲೂ ಜೀವಗಳು ಉರು­ಳು­ತ್ತಿವೆ. ‘ಇವನ್ಯಾರವ, ಇವನ್ಯಾರವ, ಇವ­ನ್ಯಾ­ರವ ಎಂದೆಣಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಎಂದೆಣಿಸಯ್ಯಾ’ ಎಂದು ಬಸವಣ್ಣ ಬೋಧಿ­ಸಿದರು. ಆದರೆ, ನಾವು ಇವ­ನ್ಯಾರು, ಇವನ್ಯಾರು ಎಂದು ಪತ್ತೆ ಹಚ್ಚಿ ಹುಡುಕಿ ಹೊಡೆಯುತ್ತಿದ್ದೇವೆ. ಬಡಿಯುತ್ತಿದ್ದೇವೆ...

ರವೀಂದ್ರನಾಥ ಟ್ಯಾಗೋರ್  ರಾಷ್ಟ್ರಗೀತೆ­ಯಲ್ಲಿ ‘ವಿಂಧ್ಯಾ, ಹಿಮಾಚಲ, ಯಮುನಾ, ಗಂಗಾ’ ಅಂದರು. ಅವರು ಮಾತನಾಡಿದ್ದು ನಿರ್ಜೀವ ಮಣ್ಣಿನ ಬಗೆಗಲ್ಲ. ಸರ್ವ ಜನಾಂಗ ಕುರಿತು. ಅಷ್ಟೇ ಏಕೆ, ರಾಷ್ಟ್ರಕವಿ ಕುವೆಂಪು ತಮ್ಮ ಕಾವ್ಯ­ದಲ್ಲಿ ‘ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಜೈನರುದ್ಯಾನ’ ಎಂದು ಭಾರತವನ್ನು  ಕೊಂಡಾ­­ಡಿ­­ದರು. ಇಂಥ ಅನನ್ಯ ಸಂಸ್ಕೃತಿ, ಪರಂ­ಪರೆ– ಇತಿಹಾಸ ಹೊಂದಿರುವ ನಾಡಿನಲ್ಲಿ ಏನೆಲ್ಲ ಅನಾ­ಹುತಗಳು ನಡೆಯುತ್ತಿವೆ.

ಉಗಾಂಡದ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಎಲ್ಲೋ ಒಂದು ಅಪರೂಪದ ಘಟನೆ ಎಂದು ತಳ್ಳಿ ಹಾಕುವವರಿದ್ದಾರೆ. ನಿಜಕ್ಕೂ ಅದು ಅಕ್ಷಮ್ಯ. ಆಫ್ರಿಕಾ ಜನರನ್ನು ನಡೆಸಿಕೊಂಡ  ಆ ಬಗೆ ಅಮಾನವೀಯವಾದದ್ದು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತವರ ಕಾನೂನು ಸಚಿ­­ವರು ಅದಕ್ಕಾಗಿ ಕ್ಷಮೆ ಕೇಳಬೇಕಿತ್ತು. ಹಾಗೆ ಮಾಡದೆ ತಾವು ಮಾಡಿದ್ದೇ ಸರಿ ಎಂದು ಇನ್ನೂ  ಪ್ರತಿ­­­ಪಾ­ದಿ­­ಸುತ್ತಿದ್ದಾರೆ. ದೆಹಲಿಯ ಜನ ಬೇರೆಯ­ವ­ರನ್ನು ಹಿಂಸಿಸುವ ಮೂಲಕ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ.

ಆಫ್ರಿಕನ್ನರನ್ನು ಬಿಡಿ, ದೆಹಲಿಯವರು ದಕ್ಷಿಣ ಭಾರತ­­ದವರನ್ನು ‘ಮದ್ರಾಸಿಗಳು’ ಎಂದು ಕರೆ­ಯು­ತ್ತಾರೆ. ಹೀಗೆ ಕರೆಯುವುದರ ಹಿಂದೆ ಅವ­ಮಾನ­­ಗಳು ಅಡಗಿವೆ. ದಕ್ಷಿಣದ ಜನರ ಮೈ ಬಣ್ಣವೂ ಕಪ್ಪೆಂಬ ದನಿಯೂ ಅವರ ಮಾತಿನ ಹಿಂದಿದೆ. ದಕ್ಷಿಣ ಭಾರತ ಕರ್ನಾಟಕ, ಕೇರಳ, ಆಂಧ್ರ­ಗಳನ್ನೂ ಒಳಗೊಂಡಿದೆ. ಪ್ರತಿಯೊಂದು ರಾಜ್ಯ­ದವರಿಗೂ ಒಂದೊಂದು ಭಾಷೆ, ಅಸ್ತಿತ್ವ­ವಿದೆ ಎಂಬ ಸಾಮಾನ್ಯ ತಿಳಿವಳಿಕೆ ಇವರಿಗಿ­ದ್ದಂ­ತಿಲ್ಲ. ಇದು ಉತ್ಪ್ರೇಕ್ಷೆಯ ಮಾತಲ್ಲ. ರಾಜಧಾನಿ­ಯ­ಲ್ಲಿರುವ ದಕ್ಷಿಣದ ಜನರಿಗೆ ಇಂಥ ಬೇಕಾದಷ್ಟು ಅನುಭವಗಳಾಗಿವೆ.

ಈ ಮನೋಭಾವಕ್ಕೂ ಅರುಣಾಚಲ ಯುವಕನ ಕೊಲೆಗೂ ಸೂಕ್ಷ್ಮವಾದ ಸಂಬಂಧ­ವಿದೆ. ದೆಹಲಿಯಲ್ಲಿ ನಿಡೊ ಕೊಂದಂತೆ ಅಸ್ಸಾಂ, ನಾಗ­ಲ್ಯಾಂಡ್‌ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಮಾತಾಡುವ ಜನರನ್ನು ಹುಡುಕಿಕೊಂಡು ಹೋಗಿ ಹತ್ಯೆ ಮಾಡಲಾಗುತ್ತಿದೆ. ಇದುವರೆಗೆ ಲೆಕ್ಕವಿಲ್ಲ­ದಷ್ಟು ಹಿಂದಿ ಭಾಷಿಗರು ಈಶಾನ್ಯದ ರಕ್ತ­ದಾಹಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವುದು ಸಂಘಟಿತ­ವಾದ ದಾಳಿ. ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಜಾತಿ, ಧರ್ಮ ಮತ್ತು ಜನಾಂಗ ದ್ವೇಷ ಯಾವುದೋ ಒಂದು ರಾಜ್ಯ ಅಥವಾ ಭಾಗಕ್ಕೆ ಸೀಮಿತವಾಗಿದೆ ಎಂದು ನಿರ್ಲಕ್ಷಿಸುವಂತಿಲ್ಲ. ಎಲ್ಲ ಕಾಲಕ್ಕೂ ಎಲ್ಲ ಭಾಗ, ರಾಜ್ಯಗಳಲ್ಲೂ ಇದು ಆಚ­ರಣೆ­ಯಲ್ಲಿದೆ. ಮಹಾರಾಷ್ಟ್ರದಿಂದ ಬಿಹಾರಿ­ಗಳನ್ನು ಓಡಿಸಲಾಗಿದೆ. ಹೋದ ವರ್ಷ ಈಶಾನ್ಯ ರಾಜ್ಯ­ಗಳ ಜನರು ಭಯಬಿದ್ದು ಬೆಂಗಳೂರು ಬಿಡಲಿಲ್ಲವೆ? ಅನಂತರ ಅವರನ್ನು ವಾಪಸ್‌ ಕರೆ­ತರಲು ಸರ್ಕಾರ ಕಸರತ್ತು ನಡೆಸಲಿಲ್ಲವೆ?

ಪ್ರತಿಯೊಂದು ಘಟನೆ ನಡೆದಾಗ ಸಂಸತ್ತಿ­ನೊಳಗೆ ದೊಡ್ಡ ದೊಡ್ಡ ಚರ್ಚೆಗಳಾಗುತ್ತವೆ. ಕೊನೆಗೆ  ಈಶಾನ್ಯ ರಾಜ್ಯಗಳು ಭಾರತದ ಅವಿ­ಭಾಜ್ಯ ಅಂಗವೆಂದು ಸಾರಿ ಸಾರಿ ಹೇಳ­ಲಾಗುತ್ತದೆ. ಘಟನೆ ಖಂಡಿಸುವ ನಿರ್ಣಯ ಮಾಡಿ ಕೈತೊಳೆದುಕೊಳ್ಳಲಾಗುತ್ತದೆ. ಕಾಲ­ಕ್ರಮೇಣ­­ದಲ್ಲಿ ಅದು ಮರೆತೇ ಹೋಗುತ್ತದೆ. ಅದು ಪುನಃ ನೆನಪಿಗೆ ಬರುವುದು ಮತ್ತೊಂದು ಘಟನೆ ನಡೆದಾಗ.

ಸಮೀಕ್ಷೆಯೊಂದರ ಪ್ರಕಾರ ವರ್ಣಭೇದ ನೀತಿ ಅನುಸರಿಸುವ ವಿಶ್ವದ ಐದು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. 80ದೇಶಗಳ ಜನರ ಸಾಮಾಜಿಕ ಧೋರಣೆ ಕುರಿತು ‘ವರ್ಲ್ಡ್ ವ್ಯಾಲ್ಯೂ’ ಸಂಸ್ಥೆ ನಡೆಸಿರುವ ಈ ಸಮೀಕ್ಷೆ ಪ್ರಕಾರ ಮತ್ತೊಂದು ಜನಾಂಗ ಕುರಿತು ಅತ್ಯಂತ ಅಸಹನೆ ತೋರಿದ ಪ್ರದೇಶ ಹಾಂಕಾಂಗ್. ಗೋವಾದ ಸಂಸ್ಕೃತಿ ಸಚಿವ ಇತ್ತೀಚೆಗೆ ನೈಜೀರಿಯಾ ಜನರನ್ನು ಅವ­ಮಾನಿಸುವ ಮಾತುಗಳನ್ನು ಆಡಿದ್ದಾರೆ.

ಈಶಾನ್ಯ ರಾಜ್ಯಗಳ ಬಹುಭಾಗ ಭಾರತ­ದೊಂದಿಗೆ ಭೌತಿಕವಾಗಿ ಮಿಳಿತವಾಗಿದೆ ವಿನಾ ಸಾಂಸ್ಕೃತಿಕ­ವಾಗಿ ದೂರವೇ ಉಳಿದಿದೆ. ಇತ್ತೀಚಿನ ವರ್ಷ­ಗಳಲ್ಲಿ ಈಶಾನ್ಯದ ರಾಜ್ಯಗಳಲ್ಲಿ ನಡೆದಿರುವ ಜನಾಂಗೀಯ ಗಲಭೆಗಳು, ಸ್ವಾಯ­ತ್ತತೆ­ಗಾಗಿ ನಡೆದಿರುವ ಬಂಡಾಯಗಳು ನಿರಂತರ ಅಶಾಂತಿಯನ್ನು ಸೃಷ್ಟಿಸಿವೆ.

ಉತ್ತಮ ಶಿಕ್ಷಣ ಮತ್ತು ಉದ್ಯೋಗ ಹುಡುಕಿ­ಕೊಂಡು ದೆಹಲಿ, ಬೆಂಗಳೂರು ಮತ್ತಿತರ ನಗರ­ಗಳಿಗೆ ಆ ಪ್ರದೇಶಗಳ ಯುವಕರು ಹೆಚ್ಚಿನ ಸಂಖ್ಯೆ­ಯಲ್ಲಿ ಬರುತ್ತಿದ್ದಾರೆ. ಈ  ರೀತಿ ಬರುವ ಎಲ್ಲರ ಮೇಲೆ ಹಲ್ಲೆ, ಅತ್ಯಾಚಾರಗಳು ನಡೆಯುವುದಿಲ್ಲ ಎನ್ನು­ವುದು ನಿಜ. ಆದರೆ ಅವರ ಕಣ್ಣುಗಳನ್ನು ‘ಚಿಂಕಿ ’ಎಂದೂ, ಅವರ ಚಹರೆಗೆ ನೇಪಾಳಿ ಗೂರ್ಖ­ರನ್ನು ಕರೆಯುವಂತೆ ‘ಬಹಾದೂರ್’ ಎಂದು ಕೂಗಿ ಕರೆದು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ.

ಉತ್ತರದ ಜನ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳವರನ್ನು ನಡೆಸಿಕೊಂಡಂತೆ; ಈಶಾನ್ಯದ ಜನ ಹಿಂದಿ ಭಾಷಿಕರನ್ನು ನಡೆಸಿ­ಕೊಂಡಂತೆ; ಆಫ್ರಿಕಾದ ಬಿಳಿಯರು ಅಲ್ಲಿನ ಮೂಲ ನಿವಾಸಿಗಳನ್ನು ಅನಾಗರಿಕವಾಗಿ ನಡೆಸಿ­ಕೊಳ್ಳು­ತ್ತಿರುವುದು, ರಾಜಕೀಯವಾಗಿ, ಧಾರ್ಮಿ­ಕ­­ವಾಗಿ ಅವರನ್ನು ಶೋಷಿಸು­ತ್ತಿ­ರು­ವುದು, ಕಪ್ಪು ಜನರ ಮಕ್ಕಳಿಗೆ ಶಿಕ್ಷಣ– ಸಂಸ್ಕೃತಿ ಕಲಿಸುವ ಹೆಸ­ರಿ­ನಲ್ಲಿ ಅವರದಲ್ಲದ ಕಥೆಗಳನ್ನು, ಇತಿ­ಹಾಸ– ಸಂಸ್ಕೃತಿ­ಯನ್ನು ಹೇಳಿ­ಕೊಡು­­ತ್ತಿ­ರುವುದು ನಡೆ­ಯುತ್ತಿದೆ. ಇದು ಅತ್ಯಂತ ಅಪಾಯಕಾರಿ.

ಬುಡಕಟ್ಟು ಪರಂಪರೆ, ಆಚರಣೆಗಳನ್ನು ಅಣ­ಕಿಸು­ವಂತೆ ಯುವ ಪೀಳಿಗೆಯನ್ನು ಬೆಳೆಸುತ್ತಿರುವ ಬಗೆಗೆ ಚಿನುವಾ ಅಚಿಬೆ ತಮ್ಮ  ಕೃತಿಗಳಲ್ಲಿ ಪ್ರಸ್ತಾ­ಪಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಪ್ಪು ಜನರ ಆಶಾ­ಕಿರಣ ನೆಲ್ಸನ್‌ ಮಂಡೇಲಾ ರಾಜಕೀಯ ಹಕ್ಕುಗಳಿಗಾಗಿ ದನಿ ಎತ್ತಿದ ಕಾರಣಕ್ಕಾಗಿಯೇ ಜೈಲು ಸೇರಿದ್ದು. ಬಹುಶಃ ಮಂಡೇಲಾ, ಗಾಂಧಿ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರಂಥ ಹೋರಾ­ಟ­­ಗಾರರು ಹುಟ್ಟದಿದ್ದರೆ ಪರಿಸ್ಥಿತಿ ಹೇಗಿ­ರುತಿತ್ತು ಎನ್ನುವುದು ಊಹೆಗೂ ನಿಲುಕದ್ದು.

ಜಾತಿಯ ಕಾರಣಕ್ಕೆ ಅಸ್ಪೃಶ್ಯರನ್ನು,  ಧರ್ಮದ ಕಾರಣಕ್ಕೆ ಅಲ್ಪಸಂಖ್ಯಾತ ಮುಸ್ಲಿಮ­ರನ್ನು, ಚಹರೆ ಮತ್ತು ಬಣ್ಣದ ಕಾರಣಕ್ಕೆ ಈಶಾನ್ಯ ಮತ್ತು ಆಫ್ರಿಕಾ ಜನರನ್ನು ನಡೆಸಿ­ಕೊ­ಳ್ಳುವ ಮನ­ಸ್ಥಿತಿಗಳೆಲ್ಲವೂ ಒಂದೇ. ದಲಿತರು, ಮುಸ್ಲಿ­ಮ­­ರಿಗೆ ಬಾಡಿಗೆ ಮನೆ ಸಿಗುವುದು ಎಷ್ಟು ಕಷ್ಟವೋ, ಈಶಾನ್ಯದವರಿಗೂ ಅಷ್ಟೇ ಕಷ್ಟ. ಹೀಗಾಗಿ ಅವರೆಲ್ಲರೂ ಒಂದೇ ಕಡೆಗಳಲ್ಲಿ ಗುಂಪು, ಗುಂಪಾಗಿ ನೆಲೆಸುವುದು. ದೆಹಲಿಯಲ್ಲಿ ಒಂದೊಂದು ಬಡಾವಣೆಯೂ ಒಂದೊಂದು ಸಮು­ದಾಯ ಇಲ್ಲವೆ ಜನಾಂಗಕ್ಕೆ ಸೀಮಿತವಾಗಿದೆ.

ಈಚೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಜನರ ಸಮಸ್ಯೆ­ಯನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್‌ ಉದ್ಯಮದ ಕೆಲಸಗಳನ್ನು ಹೊರಗುತ್ತಿಗೆಗೆ ಕೊಡ­ಬೇಕೆಂದು ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನ ಮತ್ತು ಇಂಗ್ಲಿಷ್‌ ಭಾಷೆ ಬಲ್ಲ ಈಶಾನ್ಯದ ಜನರಿಗೆ ಮನೆ ಮುಂದೆ ಉದ್ಯೋಗ ಸಿಗುತ್ತದೆಂಬ ಭಾವ­ನೆಯೂ ಇದರ ಹಿಂದೆ ಇದ್ದಿರಬಹುದು. ವಿಭಿನ್ನ ಭಾಷೆ, ಸಂಸ್ಕೃತಿ, ಜಾತಿ, ಧರ್ಮ ಮತ್ತು ಬಣ್ಣಗಳ ಜನರಿರುವ ಭಾರತದಂಥ ದೇಶದಲ್ಲಿ ಇಂಥ ನಿಲುವುಗಳನ್ನು ಒಪ್ಪಲಾಗದು. ಏಕೆಂದರೆ ಇದರ ಅನನ್ಯತೆ ಇರುವುದೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ.

ಜಾತಿ– ಬಣ್ಣ ಮತ್ತು ಧರ್ಮದ ಕಾರಣಕ್ಕೆ ಅವ­­ಮಾನಕ್ಕೆ ಒಳಗಾಗುವ ಪ್ರಕರಣಗಳು ಶತಮಾನಗಳಿಂದಲೂ ನಡೆದು ಬಂದಿದೆ. ಅಮೆ­ರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತಿತರ ದೇಶ­ಗಳಲ್ಲಿ ಜನಾಂಗ ನಿಂದನೆಗೆ ಒಳಗಾದ ತಕ್ಷಣ ಬೊಬ್ಬೆ ಹಾಕುವ ಭಾರತೀಯರು, ನಾವು ಬೇರೆ­ಯ­ವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎನ್ನುವ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾ­ಗಿದೆ.

ಬೇರೆಯವರನ್ನು ಸಹಿಸದೆ ಅವಮಾನಿಸು­ತ್ತಿರು­ವಾಗ, ಬೇರೆಯವರು ನಮ್ಮನ್ನು ಹೀಯಾಳಿ­ಸಿ­ದರು– ಛೇಡಿಸಿದರು ಎಂದು ಆರೋಪಿಸುವ ನೈತಿಕ ಶಕ್ತಿ ಇರುವುದಿಲ್ಲ.

ಜನಾಂಗ ದ್ವೇಷ ಮತ್ತು ನಿಂದನೆ ಒಂದು ಮಾನಸಿಕ ಸ್ಥಿತಿ. ಇದರ ನಿವಾರಣೆ ಕಾನೂನು­ಗ­ಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮಾನಸಿಕ ಸ್ಥಿತಿ­ಗತಿ ಬದಲಾಗಬೇಕು. ಸೂಕ್ತ ಶಿಕ್ಷಣ– ತಿಳಿವಳಿಕೆ, ಜಾಗೃತಿಯೂ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸಬೇಕು. ಸಂಸತ್ತಿನೊಳಗೆ ಕೂರುವ ಜನ ಪ್ರತಿನಿಧಿಗಳು ಇಂಥ ಗಂಭೀರ ವಿಷಯಗಳ ಬಗೆಗೆ ಸೂಕ್ಷ್ಮ ಮತಿಗಳಾಗಿರಬೇಕಾದ್ದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಇಂಥ ಮನಸ್ಥಿತಿ ಇನ್ನು ನೂರಾರು ವರ್ಷಗಳು ಮುಂದುವರಿಯಬಹುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.