ಬೆಟ್ಟದಪುರ: ಸಮೀಪದ ಹಾರನಹಳ್ಳಿಯಲ್ಲಿ ಹೋಬಳಿಮಟ್ಟದ ಗ್ರಾಮೀಣ ದಸರಾ ಉತ್ಸವ ಸಂಭ್ರಮದಿಂದ ಜರುಗಿತು.
ಚಪ್ಪರದಹಳ್ಳಿಯ ದೇವಾಲಯದ ಬಳಿ ಚಾಮುಂಡೇಶ್ವರಿ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.
ಚಪ್ಪರದ ಹಳ್ಳಿಯಿಂದ ಆರಂಭಗೊಂಡ ಉತ್ಸವದಲ್ಲಿ ಜನಪದ ಕಲಾತಂಡಗಳಾದ ಕೋಲಾಟ, ಕಂಸಾಳೆ, ವೀರಗಾಸೆ ಹಾಗೂ ಡೊಳ್ಳು ಕುಣಿತ ಪ್ರದರ್ಶನಗಳು ಮೆರುಗು ನೀಡಿದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಟಿಬೆಟನ್ನರು ನೃತ್ಯ ಜನರ ಮನಗೆದ್ದಿತು.
ಶಾಸಕ ಕೆ.ಮಹದೇವ್ ಅವರು ರೈತರೊಂದಿಗೆ ಸೇರಿ ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಮೆರವಣಿಗೆಯು ಚಪ್ಪರದಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಹಾರನಹಳ್ಳಿ ಗ್ರಾಮವನ್ನು ಪ್ರವೇಶಿಸಿತು. ಗ್ರಾಮದ ಹೆಣ್ಣುಮಕ್ಕಳು ಕಲಶಗಳನ್ನು ಹೊತ್ತು ಸ್ವಾಗತ ಕೋರಿದರು. ಹಾರನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ರುದ್ರಮ್ಮ ನಾಗಯ್ಯ ವಹಿಸಿದ್ದರು. ಗ್ರಾಮೀಣ ಕ್ರೀಡೆಗಳು ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮಿತ್ರಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಣ್ಣಯ್ಯ, ಸುಂದ್ರೇಗೌಡ, ಸುನೀಲ್, ಉಪಾಧ್ಯಕ್ಷೆ ಯಶೋದಾ, ಆರ್.ಐ.ಮಹೇಶ್, ಪಿಡಿಒ ಮಹೇಶ್, ಶಿವಣ್ಣ, ಮುಖಂಡರಾದ ನಾಗಯ್ಯ, ಮಹದೇವ್, ಅತ್ತರ್ ಮತೀನ್, ಚನ್ನೇಗೌಡ, ನಾಗರಾಜು, ಪುಟ್ಟಸ್ವಾಮಿಗೌಡ, ಮಂಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.