ADVERTISEMENT

ಚಾತುರ್ಮಾಸ್ಯ | ‘ಹಸಿರು ಮಂತ್ರಾಕ್ಷತೆ‘ಯ ವ್ರತ

ವೇದವ್ಯಾಸ ಪೂಜೆಯೊಂದಿಗೆ ಸ್ವರ್ಣವಲ್ಲಿ ಮಠದಲ್ಲಿ ಆರಂಭ ನಾಳೆಯಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 19:30 IST
Last Updated 4 ಜುಲೈ 2020, 19:30 IST
ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ
ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ   

ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ 30ನೇ ಚಾತುರ್ಮಾಸ್ಯ ವ್ರತಸಂಕಲ್ಪವು ಜುಲೈ 5ರಂದು ವೇದವ್ಯಾಸಪೂಜೆಯೊಂದಿಗೆ ಸ್ವರ್ಣವಲ್ಲಿ ಮಠದಲ್ಲಿ ಆರಂಭಗೊಳ್ಳಲಿದೆ. ಸ್ವರ್ಣವಲ್ಲಿ ಶ್ರೀಗಳು ಈವರೆಗಿನ ಎಲ್ಲ ಚಾತುರ್ಮಾಸ್ಯವ್ರತಗಳನ್ನು ಮಠದಲ್ಲೇ ಆಚರಿಸಿರುವುದು ವಿಶೇಷ.

‘ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತಿವರ್ಷ ಬೇರೆ ಬೇರೆ ಸೀಮೆಯ ಶಿಷ್ಯರಿಂದ ಪ್ರತಿದಿನ ಶ್ರೀಗಳ ಪಾದಪೂಜೆ, ಪುರುಷರು ರುದ್ರಾನುಷ್ಠಾನ, ಗಾಯತ್ರಿ ಅನುಷ್ಠಾನ, ಮಾತೆಯರು ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮಾಡುತ್ತಿದ್ದರು. ಮಧ್ಯಾಹ್ನದ ಅವಧಿಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಶಿಷ್ಯರಿಗೆ ಹಸಿರು ಮಂತ್ರಾಕ್ಷತೆ (ಪ್ರತಿಯೊಬ್ಬರಿಗೂ ಒಂದು ಸಸಿ) ನೀಡುತ್ತಿದ್ದರು. ಈ ಬಾರಿ ‌ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವ ಕಾರಣಕ್ಕೆ, ಸಂಕ್ಷಿಪ್ತವಾಗಿ ಈ ಕಾರ್ಯಕ್ರಮ ನಡೆಯುತ್ತದೆ. ಪರಂಪರೆಗೆ ಚ್ಯುತಿ ಬಾರದಂತೆ, ಒಂದು ಸೀಮೆಯಿಂದ 8–10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ, ಮಠದ ಆಡಳಿತ ಮಂಡಳಿ ಪ್ರಮುಖ ಆರ್.ಎಸ್. ಹೆಗಡೆ ಭೈರುಂಬೆ.

‘ಚಾತುರ್ಮಾಸ್ಯದ ಮೂಲ ತತ್ವ ಅಹಿಂಸೆ ಮತ್ತು ತಪಸ್ಸು. ಯತಿಗಳಿಗೆ ಚಾತುರ್ಮಾಸ್ಯದ ದಿನಗಳೆಂದರೆ ವಿಶೇಷ ತಪೋನಿಷ್ಠಾನದ ದಿನಗಳು. ಇತ್ತೀಚಿನ ದಶಕಗಳಲ್ಲಿ ಇದರ ಜೊತೆ ಸಾಮಾಜಿಕ ಕಾರ್ಯಕ್ರಮಗಳೂ ಸೇರಿಕೊಂಡಿವೆ. ನಾಲ್ಕು ಪಕ್ಷಗಳು, ಅಂದರೆ ಸುಮಾರು 60 ದಿನಗಳ ಕಾಲ ಉತ್ಸವದ ವಾತಾವರಣ. ಈ ಬಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಕಡಿತಗೊಳಿಸಿ, ಜನಸಂದಣಿಯಿಲ್ಲದೇ ಆಚರಿಸಲಾಗುತ್ತದೆ. ಈ ವೈರಸ್ ದುಷ್ಪರಿಣಾಮ ತಡೆಗಟ್ಟಲು ಎಲ್ಲರೂ ಪೂಜೆ-ಪ್ರಾರ್ಥನೆ ಮಾಡಬೇಕು. ಆ ಅರ್ಥದಲ್ಲಿ ಎಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ಚಾತುರ್ಮಾಸ್ಯ ಮಾಡಬೇಕು’ ಎಂದು ಸ್ವರ್ಣವಲ್ಲಿ ಶ್ರೀಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಶ್ರೀಗಳ ಚಾತುರ್ಮಾಸ್ಯವ್ರತವು ಸೆಪ್ಟೆಂಬರ್ 2ರಂದು ಮುಕ್ತಾಯಗೊಳ್ಳುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.