ADVERTISEMENT

ಜೀವನಕ್ಕೆ ಬೇಕು ಆಧ್ಯಾತ್ಮಿಕತೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 14:10 IST
Last Updated 9 ಸೆಪ್ಟೆಂಬರ್ 2022, 14:10 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಮನುಷ್ಯನು ಬೇರೆ ಯಾವ ರೀತಿಯಲ್ಲಿಯೂ ತನ್ನ ಜೀವನಕ್ಕೆ ಅರ್ಥವನ್ನು ಕಂಡುಕೊಳ್ಳದ ಸ್ಥಿತಿ ಉಂಟಾಗುತ್ತಿದೆ. ಧನ ಸಂಗ್ರಹದಲ್ಲಿ ಅರ್ಥವನ್ನು ಕಾಣೋಣವೆಂದರೆ ಹಣವೇ ಅಪ್ರಸ್ತುತವಾಗುತ್ತಿದೆ. ವಸ್ತು ವಿನಿಮಯವೆಲ್ಲ ಕಂಪ್ಯೂಟರ್ ಮೂಲಕವೇ ನಡೆಯುತ್ತದೆ. ಕೀರ್ತಿಗಾಗಿ ಜೀವಿಸೋಣ ಎಂದರೆ ಎಲ್ಲ ಕೀರ್ತಿಯು ಕಂಪ್ಯೂಟರ್‌ಗೆ ಹೋಗಬೇಕಾಗಿದೆ. ಇಂದ್ರಿಯ ಸುಖಕ್ಕಾಗಿ ಜೀವಿಸೋಣ ಎಂದರೆ ಸುಖಃ, ಸಾಧನೆಗಳು ಜಾಸ್ತಿಯಾದಷ್ಟೂ ಸುಖಃ ಕಡಿಮೆಯಾಗುತ್ತಿದೆ. ಈಗ ಅವನು ತನ್ನ ಅರ್ಥವನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಮಾತ್ರ ಕಂಡುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಅದಕ್ಕಾಗಿಯೇ ಜನರು ಇಂದು ಹೆಚ್ಚುಹೆಚ್ಚಾಗಿ ಆಧ್ಯಾತ್ಮದ ಕಡೆಗೆ ವಾಲುತ್ತಿದ್ದಾರೆ. ಯಂತ್ರ ಮನುಷ್ಯನ ಎಲ್ಲ ಕ್ಷೇತ್ರವನ್ನೂ ಆಕ್ರಮಿಸಬಹುದು. ಆದರೆ, ಅವನ ಆಧ್ಯಾತ್ಮ ಕ್ಷೇತ್ರವನ್ನು ಸೂಪರ್ ಕಂಪ್ಯೂಟರ್ ಕೂಡ ಆಕ್ರಮಿಸಲಾರದು. ಏಕೆಂದರೆ ಆ ಕ್ಷೇತ್ರ ಯಾಂತ್ರಿಕತೆಯನ್ನು ಮೀರಿದೆ.

ಅದಕ್ಕಾಗಿ ಶ್ರೀರಾಮಕೃಷ್ಣರು ಹೇಳುತ್ತಿದ್ದರು ‘ನೀನು ಬಂದಿರುವುದು ಹಣ್ಣನ್ನು ತಿನ್ನುವುದಕ್ಕೆ, ಮರದ ಕೊಂಬೆಗಳನ್ನು ಎಣಿಸುವುದಕ್ಕಲ್ಲ’ ಎಂದು. ಮರದ ಕೊಂಬೆ, ಎಲೆಗಳನ್ನು ಎಣಿಸುವ ಕಾರ್ಯವನ್ನು ಈಗ ಕಂಪ್ಯೂಟರ್ ಮಾಡುತ್ತಿದ್ದು, ಮನುಷ್ಯನು ಹಣ್ಣನ್ನು ತಿನ್ನಲೇಬೇಕಾದ ಪರಿಸ್ಥಿತಿಯನ್ನು ತಂದೊಡ್ಡುತ್ತಿದೆ.

ಚಿಕ್ಕ ಮಕ್ಕಳು ಕಣ್ಣಾಮುಚ್ಚಾಲೆ ಆಟವಾಡುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಿರುಗಾಡುತ್ತಾ ಅವರು ಅಜ್ಜಿಯನ್ನು ಮುಟ್ಟಬೇಕು. ಅಜ್ಜಿಯನ್ನು ಮುಟ್ಟಿದವರು ಗೆದ್ದಂತೆ. ಆಗ ಅವರು ಕಣ್ಣಿನ ಬಟ್ಟೆಯನ್ನು ತೆಗೆಯಬಹುದು. ಅಲ್ಲಿಗೆ ಅವರ ತಡಕಾಟ ನಿಲ್ಲುತ್ತದೆ. ಹಾಗೆಯೇ ಇಲ್ಲಿನ ಜನರು ಜೀವನದಲ್ಲಿ ಅರ್ಥವನ್ನು ಕಾಣದೆ ತಡಕಾಡುತ್ತಿರುವರು. ಆಧ್ಯಾತ್ಮಿಕ ನೆಲೆಯನ್ನು (ಅಜ್ಜಿ) ತಲುಪಿದಾಗ ಅವರ ತಡಕಾಟ ನಿಲ್ಲುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.