ADVERTISEMENT

ಶಿವಭಕ್ತರಿಗೆ ಔತಣಕೂಟ ಏರ್ಪಡಿಸಿದ ಮುಸ್ಲಿಮರು

ಗಡಿಕೇಶ್ವಾರ: ಭಾವೈಕ್ಯತೆ ಸಾರಿದ ಮಹಾಶಿವರಾತ್ರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:23 IST
Last Updated 22 ಫೆಬ್ರುವರಿ 2020, 11:23 IST
ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರದ ಮಲ್ಲಿಕಾರ್ಜುನ ದೇವಾಲಯದಲ್ಲಿ ಶಿವಭಕ್ತರಿಗೆ ಮುಸಲ್ಮಾನರು ನೀಡಿದ ಔತಣಕೂಟದಲ್ಲಿ ಪಾಲ್ಗೊಂಡು ಉಪವಾಸಕ್ಕೆ ತೆರೆ ಎಳೆದರು
ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರದ ಮಲ್ಲಿಕಾರ್ಜುನ ದೇವಾಲಯದಲ್ಲಿ ಶಿವಭಕ್ತರಿಗೆ ಮುಸಲ್ಮಾನರು ನೀಡಿದ ಔತಣಕೂಟದಲ್ಲಿ ಪಾಲ್ಗೊಂಡು ಉಪವಾಸಕ್ಕೆ ತೆರೆ ಎಳೆದರು   

ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಉಪವಾಸ ಆಚರಿಸುವ ಶಿವಭಕ್ತರಿಗೆ ಮುಸಲ್ಮಾನರು ಔತಣಕೂಟ ಏರ್ಪಡಿಸಿ ಶುಕ್ರವಾರ ಭಾವೈಕ್ಯತೆ ಮೆರೆದರು.

ಗ್ರಾಮದ ಹೃದಯ ಭಾಗದಲ್ಲಿರುವ ಐತಿಕಾಸಿಕ ಮಲ್ಲಿಕಾರ್ಜುನ ದೇವಾಲಯದಲ್ಲಿ ಮುಸಲ್ಮಾನರು ಹಿಂದೂಗಳಿಗೆ ಫಲಾಹಾರ ಉಣಬಡಿಸಿದರು.ಬೆಳಿಗ್ಗೆಯೇ ಔತಣಕೂಟದ ಕುರಿತು ಗ್ರಾಮದಲ್ಲಿ ಎಲ್ಲರಿಗೂ ತಿಳಿಸಲಾಗಿತ್ತು. ಭಕ್ತರು ಮನೆಯಲ್ಲಿ ಪೂಜೆ ಮಾಡಿಕೊಂಡ ಮೇಲೆ ಮಲ್ಲಿಕಾರ್ಜುನ ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಿದ ನಂತರ ಉಪವಾಸಕ್ಕೆ ತೆರೆ ಎಳೆಯಲಾಗುತ್ತದೆ. ಅದರಂತೆ ಭಕ್ತರು ದೇವಾಲಯಕ್ಕೆ ಬಂದಾಗ ಅಲ್ಲಿಗೆ ಹಣ್ಣು ಕಂಪಲು ಫಲಾಹಾರ ನೀಡಿ ಎಲ್ಲರೂ ಸಾಮೂಹಿಕವಾಗಿ ಸೇವಿಸಿದರು.

ಔತಣಕೂಟದಲ್ಲಿ ನೂರಾರು ಮಂದಿ ಪಾಲ್ಗೊಂಡು ಸಹಪಂಕ್ತಿ ಭೋಜನ ಸವಿದು ಮಹಾಶಿವರಾತ್ರಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ADVERTISEMENT

ಶರಣಬಸಪ್ಪ ಬಳಿ, ಸಿದ್ದು ಹಲಚೇರಾ, ಸುಲೇಮಾನ ಮೊದಲಾದವರು ಮಾತನಾಡಿ, ಗ್ರಾಮದಲ್ಲಿ ಹಿಂದೂಗಳು ಮುಸಲ್ಮಾನರಿಗೆ ರಂಜಾನ ಹಬ್ಬದಲ್ಲಿ ಇಫ್ತಾರ್ ನೀಡುವುದು, ಮುಸಲ್ಮಾನರು ಹಿಂದೂಗಳಿಗೆ ಶಿವರಾತ್ರಿಯಲ್ಲಿ ಉಪವಾಸ ಬಿಡಿಸುವುದು ಉತ್ತಮ ಪದ್ಧತಿಯಾಗಿದೆ. ಇದರಿಂದ ಗ್ರಾಮದ ಜನರಲ್ಲಿ ಸೌಹಾರ್ದತೆ ವೃದ್ಧಿಯಾಗುತ್ತದೆ ಎಂದರು.

ಜಿಲಾನಿ ಕಾಳಗಿ, ಸುಲೇಮಾನಸಾಬ್, ಸಲಾಂಪಾಶಾ, ಅಯಾಜ, ಸಯ್ಯದ್, ಬಸವರಾಜ ಮುದ್ದಾ, ವೀರಂತಪ್ಪ ಬಳಿ, ಸಿದ್ದಣ್ಣ ಬೆಳಕೇರಿ, ಸಿದ್ದು ಹಲಚೇರಾ, ಚಂದ್ರಶೇಖರಯ್ಯ ಕಂಬದ್, ಮಹಾದೇವ ಮುಕರಂಬಿ, ಮಲ್ಲಿಕಾರ್ಜುನ, ಶಿವಾನಂದ ರೆಮ್ಮಣಿ, ಶರಣು ಕೋರವಾರ ಇದ್ದರು.

ದೇಗಲಮಡಿ ವರದಿ: ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮ ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು.

ಮಹಾಶಿವರಾತ್ರಿಯ ಅಂಗವಾಗಿ ಉಪವಾಸ ಆಚರಿಸಿದ ಮಹಿಳೆಯರು, ಪುರುಷರು ಶ್ರೀಗಳ ಸಮ್ಮುಖದಲ್ಲಿ ನಡೆದ ಲಿಂಗಪೂಜೆಯಲ್ಲಿ ಪಾಲ್ಗೊಂಡು ತಾವು ಲಿಂಗ ಪೂಜೆ ಮಾಡಿಕೊಂಡು ಉಪವಾಸಕ್ಕೆ ತೆರೆ ಎಳೆದರು.

ಶರಣಗೌಡ ಮುದ್ದಾ, ಬಸವರಾಜ ಚಿಪಾತಿ, ಸಂತೋಷ ಅವರಾದಿ, ಉಮೇಶ ಪಾಟೀಲ, ಶಂಕರ ತಾದಲಾಪುರ, ನಾಗು ಸೋನಾಯಿ, ರಾಜಪ್ಪ ಮಲಸಾ, ಅವಿನಾಶ ಗೋಸುಲ್ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.