ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
***
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆಯ ಹೋಯಿತ್ತು
ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು
ಕೊಂದವರುಳಿದರೆ, ಕೂಡಲಸಂಗಮದೇವಾ?
ಹಬ್ಬದಲ್ಲಿ ಕುರಿಯನ್ನು ಬಲಿ ಕೊಡುವ ಸಂದರ್ಭದಲ್ಲಿ, ಯಾವುದರ ಪ್ರಜ್ಞೆಯೂ ಇರದ ಕುರಿಯು ತನ್ನ ಹಸಿವನ್ನು ಹಿಂಗಿಸಿಕೊಳ್ಳುವುದಕ್ಕಾಗಿ ಅಲ್ಲಿ ಸಿಂಗರಿಸಿರುವ ತಳಿರು–ತೋರಣಗಳನ್ನು ತಿನ್ನುತ್ತದೆ. ಮರು ಕ್ಷಣವೆ ಅದು ಬಲಿಯಾಗುತ್ತದೆ. ಹುಟ್ಟು ಸಾವುಗಳು ಜೀವನದಲ್ಲಿ ಇರುವಂಥವುಗಳೆ. ಅದನ್ನು ಬಲಿಕೊಟ್ಟ ಮಾನವನು ಚಿರಂಜೀವಿಯೇ? ಆತನಿಗೂ ಸಾವು ನಿಶ್ಚಿತವಾದುದು. ದಯೆಯು ಮಾನವನ ಮೂಲ ಗುಣವಾಗಬೇಕು. ತನಗೆ ಹೇಗೆ ಈ ಭೂಮಿಯಲ್ಲಿ ಬದುಕುವ ಹಕ್ಕಿದೆಯೋ, ಹಾಗೆಯೇ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ತಿಳಿಯದ ಮೂಢ ಮಾನವ ಸ್ವೇಚ್ಛಾಚಾರಿಯಾಗಿ ತನ್ನದೆ ನಿಯಮಾವಳಿಗಳನ್ನು ಹಾಕಿಕೊಂಡು, ನಿರ್ದಯೆಯಿಂದ ಪ್ರಾಣಿ ಬಲಿಯನ್ನು ಮಾಡುತ್ತಿರುವುದು ಅಕ್ಷಮ್ಯವಾದುದು ಎನ್ನುವುದು ಈ ವಚನದ ಸಾರವಾಗಿದೆ. ಬಸವಣ್ಣನ ಈ ಆಶಯ ಈಡೇರಿಸಲು ಎಲ್ಲರೂ ಮುಂದಾಗಬೇಕು. ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.